ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ 80 ವರ್ಷದ ವೃದ್ಧರೊಬ್ಬರು ಟೆರೇಸ್ನಿಂದ ಜಾರಿ ಬಿದ್ದು ಮೃತಪಟ್ಟಿದ್ದಾರೆ. ಆಸ್ಪತ್ರೆಯ ನಿರ್ಲಕ್ಷ್ಯ ಹಾಗೂ ಭದ್ರತೆಯ ಕೊರತೆಯೇ ಸಾವಿಗೆ ಕಾರಣ ಎಂದು ರೋಗಿಯ ಸಂಬಂಧಿಕರು ಆರೋಪಿಸಿದ್ದಾರೆ. ಮಡಿಕೇರಿ: ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ 80 ವರ್ಷದ ವೃದ್ಧರೊಬ್ಬರು ಟೆರೇಸ್ನಿಂದ ಜಾರಿ ಬಿದ್ದು ಮೃತಪಟ್ಟಿದ್ದಾರೆ. ಆಸ್ಪತ್ರೆಯ ನಿರ್ಲಕ್ಷ್ಯ ಹಾಗೂ ಭದ್ರತೆಯ ಕೊರತೆಯೇ ಸಾವಿಗೆ ಕಾರಣ ಎಂದು ರೋಗಿಯ ಸಂಬಂಧಿಕರು ಆರೋಪಿಸಿದ್ದಾರೆ.
ಈ ಸಂಬಂಧ ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮೃತ ರೋಗಿಯನ್ನು ಸಿದ್ದಾಪುರ ವ್ಯಾಪ್ತಿಯ ಅರವತೊಕ್ಲುವಿನ ವೊಂಟಿಅಂಗಡಿ ನಿವಾಸಿ ಕೆಎ ಪೂಣಚ್ಚ(80) ಎಂದು ಗುರುತಿಸಲಾಗಿದೆ. ವೈದ್ಯರಾಗಿದ್ದ ಪೂಣಚ್ಚ ಅವರನ್ನು ಸಿದ್ದಾಪುರದಾದ್ಯಂತ ರೋಗಿಗಳು ಡಾ ಪುಷ್ಪಾ ಎಂದು ಕರೆಯುತ್ತಿದ್ದರು. ಸೋಮವಾರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಆಸ್ಪತ್ರೆಗೆ ದಾಖಲಾಗಿದ್ದರು.
ಇದನ್ನು ಓದಿ: ಮಡಿಕೇರಿ: ಡ್ರಗ್ಸ್ ಹೊಂದಿದ್ದ ಪ್ರವಾಸಿಗರ ಬಂಧನ
ಮಂಗಳವಾರ ಬೆಳಗ್ಗೆ ಆಪರೇಷನ್ ನಿಗದಿಯಾಗಿತ್ತು. ಹೀಗಾಗಿ ಆಸ್ಪತ್ರೆಯ ಸಾಮಾನ್ಯ ವಾರ್ಡ್ ನಲ್ಲಿ ರಾತ್ರಿ ಉಳಿದುಕೊಂಡಿದ್ದರು.
ಮೂಲಗಳ ಪ್ರಕಾರ, ಪೂಣಚ್ಚ ಅವರ ಚಾಲಕ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು ಮತ್ತು ಅವರು ಸೋಮವಾರ ರಾತ್ರಿ 10 ಗಂಟೆಯವರೆಗೆ ಸಾಮಾನ್ಯ ವಾರ್ಡ್ನಲ್ಲಿದ್ದರು. ಬಳಿಕ ಚಾಲಕ ವಾರ್ಡ್ ನಿಂದ ತೆರಳಿ ಆಸ್ಪತ್ರೆ ಆವರಣದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಮಲಗಿದ್ದಾರೆ.
ಮಂಗಳವಾರ ಬೆಳಗ್ಗೆ ಪೂಣಚ್ಚ ಅವರ ಪತ್ನಿಗೆ ಆಸ್ಪತ್ರೆ ಆಡಳಿತ ಮಂಡಳಿಯಿಂದ ಕರೆ ಬಂದಿದ್ದು, ಪೂಣಚ್ಚ ಅವರು ವಾರ್ಡ್ನಿಂದ ಕಾಣೆಯಾಗಿದ್ದಾರೆ ಎಂದು ತಿಳಿಸಿದ್ದಾರೆ. ದಾದಿಯರು, ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿ ನನ್ನ ತಂದೆಯನ್ನು ಎಲ್ಲೆಡೆ ಹುಡುಕಿದರು. ಆದರೆ ಅವರು ಸಿಗಲಿಲ್ಲ. ನನ್ನ ತಾಯಿ ಆಸ್ಪತ್ರೆಗೆ ಆಗಮಿಸಿ ಚಾಲಕನೊಂದಿಗೆ ಹುಡುಕಿದಾಗ ಲಿಫ್ಟ್ ಬಳಿ ನನ್ನ ತಂದೆ ಮೃತಪಟ್ಟಿರುವುದು ಪತ್ತೆಯಾಗಿದೆ. ಅವರು ಆಸ್ಪತ್ರೆಯ ನಾಲ್ಕನೇ ಮಹಡಿಯ ಟೆರೇಸ್ನಿಂದ 50 ಅಡಿ ಎತ್ತರದಿಂದ ಬಿದ್ದಿದ್ದಾರೆ ಎಂದು ಪೂಣಚ್ಚ ಅವರ ಪುತ್ರಿ ಕ್ಷೀರಾ ಹೇಳಿದ್ದಾರೆ.
ಆಸ್ಪತ್ರೆಯಲ್ಲಿ ಸೂಕ್ತ ಭದ್ರತೆ ಇಲ್ಲ ಮತ್ತು ರಾತ್ರಿ ಪಾಳಿಯಲ್ಲಿ ಆಸ್ಪತ್ರೆಯಲ್ಲಿ ಯಾರೂ ಇರಲಿಲ್ಲ ಎಂದು ಕ್ಷೀರಾ ಆರೋಪಿಸಿದ್ದಾರೆ.
“ಅದೇ ವಾರ್ಡ್ನಲ್ಲಿರುವ ರೋಗಿಯೊಬ್ಬರು ನನ್ನ ತಂದೆ ಬೆಳಗ್ಗೆ 3.30 ರ ಸುಮಾರಿಗೆ ವಾರ್ಡ್ನಿಂದ ಹೊರಗೆ ಹೋದರು ಎಂದು ಹೇಳಿದ್ದಾರೆ. ಅವರು ಶೌಚಾಲಯಕ್ಕೆ ಹೋಗಿರಬಹುದು ಮತ್ತು ವಯಸ್ಸಾದ ಕಾರಣ ಗೊಂದಲಕ್ಕೊಳಗಾಗಿರಬಹುದು. ಆದರೆ, ನನ್ನ ತಂದೆ ನಾಪತ್ತೆಯಾಗಿರುವುದು ಆಸ್ಪತ್ರೆಯ ಯಾವೊಬ್ಬ ಸಿಬ್ಬಂದಿಯ ಗಮನಕ್ಕೆ ಬಂದಿಲ್ಲ. ಬೆಳಗ್ಗೆ 5.30ರ ನಂತರವೇ ಎಲ್ಲರಿಗೂ ಇದರ ಬಗ್ಗೆ ಅರಿವಾಗಿದೆ. ಇದು ಸರ್ಕಾರಿ ಆಸ್ಪತ್ರೆಯ ದಯನೀಯ ಸ್ಥಿತಿ,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಡಾ.ಕೆ.ಕರಿಯಪ್ಪ ಅವರನ್ನು ಪ್ರಶ್ನಿಸಿದಾಗ, ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಸಿಬ್ಬಂದಿ ಟ್ಯಾಂಕ್ ನೀರನ್ನು ಪರಿಶೀಲಿಸಲು ಹೋದ ಕಾರಣ ನಾವು ಟೆರೇಸ್ಗೆ ಬೀಗ ಹಾಕಿರಲಿಲ್ಲ. ಆದಾಗ್ಯೂ, ಭವಿಷ್ಯದಲ್ಲಿ ಅದನ್ನು ಲಾಕ್ ಮಾಡಲಾಗುತ್ತದೆ ” ಎಂದು ಹೇಳಿದ್ದಾರೆ.