ಮಣಿಪಾಲ: ಕೇಂದ್ರದ ಶಿಕ್ಷಣ ಸಚಿವಾಲಯ, ಎಂಐಟಿಯ ಸಾಂಸ್ಥಿಕ ನಾವಿನ್ಯ ಮಂಡಳಿಯ ಇನ್ನೋವೇಷನ್ ಸೆಲ್ ಹಾಗೂ ಎಐಸಿಟಿಇ ಸಂಯುಕ್ತವಾಗಿ ಮಣಿಪಾಲದ ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟ)ಯಲ್ಲಿ ಆಯೋಜಿಸಿದ ‘ದಿ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್-2023’ನ ಸಮಾರೋಪ ರವಿವಾರ ನಡೆಯಿತು.
ಹಾರ್ಡ್ವೇರ್ ಕ್ಷೇತ್ರದ ವೃತ್ತಿಪರ ವಿದ್ಯಾರ್ಥಿಗಳಿಗೆ ಐದು ದಿನಗಳ ಕಾಲ ನಡೆದ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ನಲ್ಲಿ ದೇಶಾದ್ಯಂತದಿಂದ ಹಾರ್ಡ್ವೇರ್ ತಜ್ಞರು, ಸಂಶೋಧಕರು ಸೇರಿ 22 ತಂಡಗಳು ಭಾಗವಹಿ ಸಿದ್ದವು. ಹಾರ್ಡ್ವೇರ್ ಕ್ಷೇತ್ರದಲ್ಲಿ ತಮ್ಮ ಅಸಾಧಾರಣ ಪ್ರತಿಭೆ, ವಿಷಯದ ಕುರಿತ ನೈಪುಣ್ಯತೆ, ಜಾಣ್ಮೆಯನ್ನು ಪ್ರದರ್ಶಿಸುವ ಮೂಲಕ ತೀರ್ಪುಗಾರರಾಗಿ ಭಾಗವಹಿಸಿದ ವಿಷಯತಜ್ಞರ ಮನಸ್ಸನ್ನು ಆಕರ್ಷಿಸಿದರು.
ಸಮಾರೋಪ ಸಮಾರಂಭದಲ್ಲಿ ಮಾಹೆಯ ರಿಜಿಸ್ಟ್ರಾರ್ ಡಾ.ವಿನೋದ್ ವಿ. ಥಾಮಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಎಂಐಟಿಯ ನಿರ್ದೇಶಕ ಕ.ಡಾ.ಅನಿಲ್ ರಾಣಾ, ಸಹಾಯ ನಿರ್ದೇಶಕ ಕಮಲ್ ಸಿಂಗ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಂಐಟಿ ನೋಡೆಲ್ ಸೆಂಟರ್ ಮುಖ್ಯಸ್ಥೆ ಡಾ.ಸುಚೇತ ಕೊಲೇಕರ್ ವಂದಿಸಿದರು.
ಈ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ನಲ್ಲಿ ಆಯುಷ್ ವಿಭಾಗ, ಗುಜರಾತ್, ಕೇರಳ ಸರಕಾರಗಳು ಸೂಚಿಸಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸವಾಲನ್ನು ಒಡ್ಡಲಾಗಿತ್ತು. ಅಂತಿಮವಾಗಿ ಡಾ.ಸಿರಿಲ್ ಜೋಸೆಫ್ ಅವರು ಈ ಸಮಾವೇಶ ವಿಜೇತರ ಹೆಸರು ಪ್ರಕಟಿಸಿದರು.
ಆಯುಷ್ ಸಚಿವಾಲಯದ ಸವಾಲಿನ ವಿಜೇತರು ತಮಿಳುನಾಡು ಕೊಯಮತ್ತೂರಿನ ನೆಹರು ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಟೀಮ್ ಎನ್ಐಇಟಿ ಹ್ಯಾಕ್ಸ್ಟಿಕ್ ಸಿಕ್ಸ್ ತಂಡ. ಕೇರಳ ಸರಕಾರದ ಸಮಸ್ಯೆಗೆ ಪರಿಹಾರ ಕಂಡುಕೊಂಡವರು ತಮಿಳುನಾಡಿನ ತಿರುಚೆಂಗೋಡು ಮಹಿಳೆಯರ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ನ ಟೀಮ್ ಹೆಕ್ಸಾ ಟೈಟಾನ್ಸ್.
ಗುಜರಾತ್ ಸರಕಾರದ ಸಮಸ್ಯೆಗೆ ಪರಿಹಾರ ತಮಿಳುನಾಡು ಚೆನ್ನೈನ ಕೆಸಿಜಿ ಕಾಲೇಜ್ ಆಫ್ ಟೆಕ್ನಾಲಜಿಯ ಟೀಮ್ ಸ್ಟಿಮುಟೆಕ್. ಕೇರಳ ಸರಕಾರದ ಸಮಸ್ಯೆಗೆ ಪರಿಹಾರ ಕಂಡು ಹಿಡಿದವರು ಕೊಲ್ಕೊತ್ತಾದ ಆದಮ್ಸ್ ವಿವಿಯ ಟೀಮ್ ಸ್ಟೇರಿ ಸ್ಕ್ವಾಡ್.