Home Uncategorized ಮತೀಯ ಗೂಂಡಾಗಿರಿ ದ.ಕ. ಜಿಲ್ಲೆಗೆ ಕಳಂಕ: ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್

ಮತೀಯ ಗೂಂಡಾಗಿರಿ ದ.ಕ. ಜಿಲ್ಲೆಗೆ ಕಳಂಕ: ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್

18
0

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಮತೀಯ ಗೂಂಡಾಗಿರಿ ಪ್ರಕರಣಗಳಿಗೆ ಅವಕಾಶ ಕೊಡಬಾರದು. ಇದು ಜಿಲ್ಲೆಗೆ ಕಳಂಕವಾಗಿದ್ದು, ಹೊರಗಿನವರು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಾರೆ. ಜಿಲ್ಲೆಯಲ್ಲಿ ಎಲ್ಲರೂ ಒಂದಾಗಿ ಬೆರೆತು, ಸುರಕ್ಷತೆಯ ವಾತಾವರಣ ಸೃಷ್ಟಿಯಾಗಬೇಕು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್ ಹೇಳಿದ್ದಾರೆ.

ಶುಕ್ರವಾರ ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್, ಬಜರಂಗದಳ ದಂತಹ ಸಂಘಟನೆಗಳ ಪ್ರಚೋದನೆಯಿಂದ ಮತೀಯ ಗೂಂಡಾಗಿರಿ ಪ್ರಕರಣಗಳು ನಡೆಯುತ್ತಿವೆ. ಬಿಜೆಪಿಯ ಕೆಲ ನಾಯಕರಿಗೆ ಇದೇ ಬಂಡವಾಳವಾಗಿದೆ ಎಂದು ಅವರು ಆರೋಪಿಸಿದರು.

ಜಿಲ್ಲೆಯಲ್ಲಿ ಸ್ಥಾಪಿಸಿರುವ ಆ್ಯಂಟಿ ಕಮ್ಯುನಲ್ ವಿಂಗ್ ಸಕ್ರಿಯವಾಗಿ ಕಾರ್ಯಾಚರಿಸುತ್ತಿದ್ದು, ಈಚೆಗಷ್ಟೇ ಮತೀಯ ಗೂಂಡಾಗಿರಿ ನಡೆಸಿದ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಉಡುಪಿಯಲ್ಲಿ ನಕ್ಸಲ್ ಚಟುವಟಿಕೆ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡದಲ್ಲೂ ನಿಗಾವಹಿಸಲಾಗಿದೆ. ಪೊಲೀಸ್ ಇಲಾಖೆಗೆ ಇದನ್ನು ನಿಯಂತ್ರಿಸುವ ಶಕ್ತಿ ಇದೆ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಳಿ ಅಂಕಕ್ಕೆ ಸಂಬಂಧಿಸಿ ನನಗೆ ಯಾವುದೇ ದೂರು ಬಂದಿಲ್ಲ. ಆಟ ಮತ್ತು ಜೂಜು ಹೀಗೆ ಎರಡು ಕಾರಣಕ್ಕೆ ಕೋಳಿ ಅಂಕಗಳು ನಡೆಯುತ್ತವೆ. ಆಟವನ್ನು ನಮ್ಮ ಕಲೆ, ಸಂಪ್ರದಾಯವೆಂದು ಒಪ್ಪಿಕೊಳ್ಳಬಹುದು. ಕಂಬಳ, ಜಲ್ಲಿಕಟ್ಟು ಇಂತಹ ಕ್ರೀಡೆಗಳು ನಡೆಯುತ್ತವೆ. ಆದರೆ, ಜೂಜು ನಡೆಸಿದಾಗ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ರಾಜ್ಯ ಸರ್ಕಾರ ಕೇಂದ್ರಕ್ಕೆ ನೀಡುವ ತೆರಿಗೆ ಮತ್ತಿತರ ಮೊತ್ತಗಳು ಹೆಚ್ಚಾಗಿದ್ದರೂ, ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡುವ ಅನುದಾನ 10 ವರ್ಷಗಳಿಂದ ಅಷ್ಟೇ ಇದೆ. ಬಿಜೆಪಿ ಸಂಸದರು ಕೂಡ ಈ ಬಗ್ಗೆ ಮಾತನಾಡದಿರುವುದು ದುರ್ದೈವದ ಸಂಗತಿ ಎಂದು ದಿನೇಶ್ ಗುಂಡೂರಾವ್ ಆರೋಪಿಸಿದರು.

ಬಿಜೆಪಿಯವರು ವಿರೋಧ ಪಕ್ಷ ರಹಿತ ದೇಶ ಮಾಡಲು ಹೊರಟಿದ್ದಾರೆ. ಭಯಭೀತಿಯ ವಾತಾವರಣ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಹಿತವಾದ ಬೆಳವಣಿಗೆ ಅಲ್ಲ. ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಗಳು ಧರ್ಮದ ಮಾತಿನ ಅಡಿಯಲ್ಲಿ ಬಿದ್ದಿವೆ. ಪ್ರಧಾನಿ ಮೋದಿ ಕೂಡ ಕಾಂಗ್ರೆಸ್, ನೆಹರೂ ಬೈದಿದ್ದು ಬಿಟ್ಟರೆ ಬೇರೇನಾದರೂ ಮಾತನಾಡುತ್ತಾರ ಎಂದು ಪ್ರಶ್ನಿಸಿದರು.

ಶೇ 40ರಷ್ಟು ಕಮಿಷನ್ ಆರೋಪ ಮಾಡಿರುವ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಅವರು ವಿಷಯ ನಿಜವೇ ಆಗಿದ್ದರೆ, ನೇರವಾಗಿ ಬಂದು ಮುಖ್ಯಮಂತ್ರಿಗೆ ಹೇಳಬಹುದು. ನಮ್ಮ ಸರ್ಕಾರ ಬದ್ಧತೆ, ಪ್ರಮಾಣಿಕತೆಯಿಂದ ಕೆಲಸ ಮಾಡುತ್ತಿದೆ. ನನ್ನ ಇಲಾಖೆಯಲ್ಲಿ ಯಾವುದೇ ಭ್ರಷ್ಟಾಚಾರ ಆಗಿದ್ದರೆ, ನಾನು ತನಿಖೆ ಮಾಡಿಸುತ್ತೇನೆ. ಯಾವುದೇ ಇಲಾಖೆಯಲ್ಲಿ ಭ್ರಷ್ಟಾಚಾರ ಆಗಿದ್ದರೂ ದಾಖಲೆ ನೀಡಲಿ. ಹಿಂದಿನ ಬಿಜೆಪಿ ಸರ್ಕಾರದ ಇದ್ದಾಗ ಅವರು ಭ್ರಷ್ಟಾಚಾರದ ಬಗ್ಗೆ ಅನೇಕ ವಿಷಯಗಳನ್ನು ಪ್ರಸ್ತಾವ ಮಾಡಿದ್ದರು. ಈ ಆರೋಪದ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ. ಭ್ರಷ್ಟಾಚಾರವನ್ನು ಸಹಿಸಿಕೊಳ್ಳಲಾಗದು ಎಂದರು.

ಶಾಸಕ ಹರೀಶ್ ಪೂಂಜಾ ಹೇಳಿಕೆ ಕುರಿತಂತೆ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ದಿನೇಶ್ ಗುಂಡೂರಾವ್, ಅವರ ಉದ್ದೇಶ ಬೇರೆಯೇ ಇದೆ. ನಾವು ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ ಎಂದು ಹೇಳುತ್ತಿದ್ದೇವೆ. ಅದನ್ನು ಒಪ್ಪಿಕೊಳ್ಳದೆ ಮೊಡುವಾದ ಪ್ರದರ್ಶನ ಮಾಡಿದರೆ ಏನು ಹೇಳುವುದು. ರಾಜ್ಯಕ್ಕೆ ಬರುವ ತೆರಿಗೆಯಲ್ಲಿ ವೃದ್ಧಿಯಾಗಿಲ್ಲ. ಈ ಬಗ್ಗೆ ಅವರು ಮಾತನಾಡಬೇಕು ಎಂದರು.

LEAVE A REPLY

Please enter your comment!
Please enter your name here