ಉಪ್ಪಿನಂಗಡಿ: ಕಲ್ಲಡ್ಕ ಪ್ರಭಾಕರ್ ಭಟ್ ಶ್ರೀರಂಗಪಟ್ಟಣದಲ್ಲಿನ ಹೇಳಿಕೆ ಅವರ ಘನತೆಗೆ ಶೋಭೆ ತರುವುದಿಲ್ಲ. ಸಮಾಜದಲ್ಲಿ ಹಿರಿತನವನ್ನು ಹೊಂದಿರುವ ಅವರು, ಸಮಾಜದ ಮನಸ್ಸುಗಳನ್ನು ಅರಳಿಸಬೇಕೇ ವಿನಹ ಕೆರಳಿಸಬಾರದು. ಮನಸೋ ಇಚ್ಚೆ ಮಾತನಾಡಿ ಮತೀಯ ಸಂಘರ್ಷವನ್ನು ಉಂಟು ಮಾಡುವ ಯಾರೇ ಆಗಲಿ ಅವರ ವಿರುದ್ಧ ಸರಕಾರ ಕಟ್ಟುನಿಟ್ಟಿನ ಕ್ರಮ ಜರಗಿಸಬೇಕೆಂದು ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ ಕೆ.ಬಿ. ಒತ್ತಾಯಿಸಿದರು.
ಉಪ್ಪಿನಂಗಡಿಯಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಧರ್ಮ, ಸಂಸ್ಕೃತಿ , ಸಂಸ್ಕಾರದ ಆಚರಣೆಗೆ ಮುಕ್ತ ಅವಕಾಶ ಇರುವಂತೆಯೇ, ಅನ್ಯರ ಧಾರ್ಮಿಕ ನಂಬಿಕೆಯನ್ನು ಗೌರವಿಸುವುದು ನಮ್ಮ ಧರ್ಮ. ಮಹಿಳೆಯರ ಬಗ್ಗೆ ತೀರಾ ಕೀಳು ಮಟ್ಟದ ಭಾಷೆಯಲ್ಲಿ ಅವಮಾನಿಸಿ ಹೇಳಿಕೆ ನೀಡಿರುವುದು ಕಲ್ಲಡ್ಕ ಪ್ರಭಾಕರ್ ಭಟ್ ಗೌರವವನ್ನು ಅವರೇ ಇಳಿಸಿದಂತಾಗಿದೆ. ಮಾತ್ರವಲ್ಲದೆ ಸಭ್ಯರೆನಿಸಿಕೊಂಡ ದ.ಕ ಜಿಲ್ಲೆಯ ಜನತೆಗೆ ಅವಮಾನಿಸಿದಂತಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳನ್ನು ನಡೆಯದಂತಾಗಲು ಸರಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಕಾಂಗ್ರೆಸ್ ಮುಂದಾಳು ಡಾ. ರಘು ಮಾತಾನಾಡಿ, ಹಲವಾರು ಶಾಲೆಗಳನ್ನು ನಡೆಸುತ್ತಿರುವ, ಧಾರ್ಮಿಕವಾಗಿ ಸಾಮಾಜಿಕವಾಗಿ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿರುವ ಕಲ್ಲಡ್ಕ ಪ್ರಭಾಕರ್ ಭಟ್ ಸಮಾಜದಲ್ಲಿ ಅಶಾಂತಿ ಸೃಷ್ಠಿಸುವುದು ಸರಿಯಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಉಮಾನಾಥ ಶೆಟ್ಟಿ, ಕಾಂಗ್ರೆಸ್ ಮುಂದಾಳು ಅರ್ತಿಲ ಕೃಷ್ಣ ರಾವ್ ಉಪಸ್ಥಿತರಿದ್ದರು.