ಮಥುರಾ: ಉತ್ತರ ಪ್ರದೇಶದ ಮಥುರಾದಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದಿದ್ದು, ಭೀಕರ ಅಪಘಾತದಲ್ಲಿ ಮೂವರು ಸಹೋದರರು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಬುಧವಾರ ರಾತ್ರಿ ನಹ್ಲಾ ದೇವಿಯ ಸೇತುವೆಯ ಬಳಿ ಕಾರು ಮಹಮೂದ್ಪುರದಿಂದ ದೀಗ್ಗೆ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
“ರಸ್ತೆಯಲ್ಲಿ ತೀಕ್ಷ್ಣವಾದ ತಿರುವು ಇದ್ದ ಕಾರಣ ಅತಿ ವೇಗದಲ್ಲಿ ಕಾರು ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ತಡೆ ಗೋಡೆಗೆ ಡಿಕ್ಕಿ ಹೊಡೆದು ಕಾಲುವೆಗೆ ಬಿದ್ದಿದೆ” ಎಂದು ಪೊಲೀಸ್ ವರಿಷ್ಠಾಧಿಕಾರಿ(ಗ್ರಾಮೀಣ) ಸುರೇಶ್ ಚಂದ್ರ ರಾವತ್ ಹೇಳಿದ್ದಾರೆ.
ಸುಮಾರು ಆರು ಮೀಟರ್ ಅಗಲದ ಕಾಲುವೆಗೆ ಕಾರು ಬಿದ್ದಿದೆ. ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ಧಾವಿಸಿ ಕಾರನ್ನು ಕಾಲುವೆಯಿಂದ ಹೊರತೆಗೆಯುವಲ್ಲಿ ಯಶಸ್ವಿಯಾದರು. ಆದರೆ ಅದರಲ್ಲಿದ್ದವರನ್ನು ಉಳಿಸಲು ಸಾಧ್ಯವಾಗಲಿಲ್ಲ. ನಂತರ ಅವರು ಪೊಲೀಸರಿಗೆ ಮಾಹಿತಿ ನೀಡಿದರು ಎಂದು ರಾವತ್ ತಿಳಿಸಿದ್ದಾರೆ.
ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ ಎಂದು ಅವರು ಹೇಳಿದರು.
ಮೃತರನ್ನು ರಾಹುಲ್(23) ಮತ್ತು ಅವರ ಸೋದರಸಂಬಂಧಿಗಳಾದ ಅಮಿತ್ (23) ಮತ್ತು ಮೋಹಿತ್ (21) ಎಂದು ಗುರುತಿಸಲಾಗಿದ್ದು, ಎಲ್ಲರೂ ಮಹಾವನ್ ಪೊಲೀಸ್ ಠಾಣೆ ವ್ಯಾಪ್ತಿಯ ಬಲದೇವ್ಗಢ ನಿವಾಸಿಗಳು ಎನ್ನಲಾಗಿದೆ. ಮತ್ತೊಬ್ಬರ ಗುರುತು ಪತ್ತೆಯಾಗಿಲ್ಲ. ಆದರೆ ಅವರು ಇಪ್ಪತ್ತರ ಹರೆಯದವರೂ ಮತ್ತು ಈ ಮೂವರ ಸ್ನೇಹಿತ ಎಂದು ಪೊಲೀಸರು ತಿಳಿಸಿದ್ದಾರೆ.
