Home Uncategorized ಮಲ್ಪೆ ಮೀನುಗಾರರ ಅಪಹರಣ, ಮೀನು ದರೋಡೆ ಪ್ರಕರಣ: ಭಟ್ಕಳದ 7 ಮಂದಿ ಆರೋಪಿಗಳ ಬಂಧನ; ಬೋಟು...

ಮಲ್ಪೆ ಮೀನುಗಾರರ ಅಪಹರಣ, ಮೀನು ದರೋಡೆ ಪ್ರಕರಣ: ಭಟ್ಕಳದ 7 ಮಂದಿ ಆರೋಪಿಗಳ ಬಂಧನ; ಬೋಟು ವಶಕ್ಕೆ

64
0

ಮಲ್ಪೆ, ಮಾ.1: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ ಬೋಟನ್ನು ಸಮುದ್ರದ ಮಧ್ಯೆ ಮೀನುಗಾರರ ಸಹಿತ 25 ಮಂದಿಯ ತಂಡ ಅಪಹರಿಸಿ ಲಕ್ಷಾಂತರ ರೂ. ಮೌಲ್ಯದ ಮೀನು ಹಾಗೂ ಡಿಸೇಲ್ ಲೂಟಿ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಮಲ್ಪೆ ಪೊಲೀಸರು ಭಟ್ಕಳದ 7 ಮಂದಿ ಆರೋಪಿಗಳನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಮಲ್ಪೆಯಲ್ಲಿ ಪ್ರಕರಣ ದಾಖಲಾದ ತಕ್ಷಣ ಭಟ್ಕಳಕ್ಕೆ ತೆರಳಿದ್ದ ಮಲ್ಪೆ ಪೊಲೀಸರು, ಅಪಹರಿಸಲ್ಪಟ್ಟ ಬೋಟು ಮತ್ತು ಮೀನುಗಾರರನ್ನು ಪತ್ತೆ ಹಚ್ಚಿದ್ದು, ಇದೀಗ ಏಳು ಮಂದಿ ಆರೋಪಿಗಳನ್ನು ಬಂಧಿಸಿ ಮಲ್ಪೆಗೆ ಕರೆ ತಂದಿದ್ದಾರೆ. ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಭಟ್ಕಳದ ಸುಬ್ರಹ್ಮಣ್ಯ ಖಾರ್ವಿ (34), ರಾಘವೇಂದ್ರ ಖಾರ್ವಿ (38), ಹರೀಶ್ ನಾರಾಯಣ ಖಾರ್ವಿ (40), ನಾಗೇಶ್ ನಾರಾಯಣ (42), ಬಂದರು ಸಮೀಪದ ಬೆಳ್ಳಿಯ ಗೋಪಾಲ ಮಾದವ್ (38), ಭಟ್ಕಳದ ಸಂತೋಷ ದೇವಯ್ಯ (43) ಹಾಗೂ ಲಕ್ಷ್ಮಣ್ (50) ಎಂದು ಗುರುತಿಸಲಾಗಿದೆ. ತಮಗೆ ಸೇರಿದ ಪರಿಮಿತಿಯೊಳಗೆ ಮೀನುಗಾರಿಕೆ ನಡೆಸಿ ಮೀನು ಹಿಡಿದಿರುವ ಕಾರಣಕ್ಕೆ ಈ ಕೃತ್ಯ ಎಸಗಿದ್ದಾಗಿ ಬಂಧಿತರು ಪ್ರಾಥಮಿಕ ವಿಚಾರಣೆ ವೇಳೆ ತಿಳಿಸಿದ್ದಾರೆ ಎನ್ನಲಾಗಿದೆ.

ಫೆ.27ರಂದು ಭಟ್ಕಳ ಸಮೀಪ ಈ ಘಟನೆ ನಡೆದಿತ್ತು. ಇದೀಗ ಮಲ್ಪೆ ಪೊಲೀಸರು ಬೋಟಿನಲ್ಲಿದ್ದ ಏಳು ಮಂದಿ ಮೀನುಗಾರರನ್ನು ರಕ್ಷಿಸಿದ್ದಲ್ಲದೇ ಬೋಟನ್ನು ಮರಳಿ ವಶಕ್ಕೆ ಪಡೆದು ಮಲ್ಪೆಗೆ ತಂದಿದ್ದಾರೆ. ಬೋಟಿನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಹಿಡಿದ ಮೀನುಗಳನ್ನು ಮಾರಾಟ ಮಾಡಿದ್ದಾಗಿ ಆರೋಪಿಗಳು ತಿಳಿಸಿದ್ದಾರೆಂದು ತಿಳಿದುಬಂದಿದೆ.

ಮಲ್ಪೆ ಠಾಣೆಯ ಪೊಲೀಸ್ ಉಪನಿರೀಕ್ಷ ಪ್ರವೀಣ್ ಕುಮಾರ್ ಆರ್. ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಿ ಇಂದು ಮಲ್ಪೆಗೆ ಕರೆತಂದಿದ್ದು, ಸಂಜೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.

ಘಟನೆಯ ವಿವರ: ಫೆ.19ರಂದು ಮಲ್ಪೆಯ ಚೇತನ್ ಸಾಲಿಯಾನ್ ಎಂಬವರ ‘ಕೃಷ್ಣನಂದನ’ ಎಂಬ ಲೈಲಾನ್ ಬೋಟ್‌ ನಲ್ಲಿ ನಾಗರಾಜ್ ಹರಿಕಾಂತ, ನಾಗರಾಜ್ ಎಚ್.ಹರಿಕಾಂತ, ಅರುಣ್ ಹರಿಕಾಂತ ಅಂಕೋಲ, ಅಶೋಕ ಕುಮುಟ, ಕಾರ್ತಿಕ್ ಹರಿಕಾಂತ ಮಂಕಿ, ಚಂದ್ರಕಾಂತ ಹರಿಕಾಂತ ಉಪ್ಪುಂದ, ಸುಬ್ರಮಣ್ಯ ಖಾರ್ವಿ ಎಂಬವರು ಆಳ ಸಮುದ್ರ ಮೀನುಗಾರಿಕೆ ಗಾಗಿ ತೆರಳಿದ್ದರು.

ಫೆ.27ರಂದು ಮೀನುಗಾರಿಕೆ ಮುಗಿಸಿ ಲಕ್ಷಾಂತರ ರೂ. ಮೌಲ್ಯದ ಮೀನು ತುಂಬಿಸಿಕೊಂಡು ಮಲ್ಪೆ ಕಡೆಗೆ ಬರುತ್ತಿರುವಾಗ ಬೋಟ್ ಬಲೆ ಅದರ ಫ್ಯಾನ್‌ಗೆ ಬಿದ್ದು ಬೋಟ್ ಬಂದ್ ಆಗಿ ನಿಂತಿದ್ದ ವೇಳೆ ಹಠಾತ್ತನೆ ಸುಮಾರು 25 ಜನ ಮಂದಿ ಅಕ್ರಮಣ ಮಾಡಿ ಬೋಟ್‌ನ್ನು ತೀರಕ್ಕೆ ಎಳೆದುಕೊಂಡು ಹೋಗಿ ಮೀನುಗಾರರನ್ನು ಅಪಹರಿಸಿ ಬೋಟ್‌ನಲ್ಲಿದ್ದ ಸುಮಾರು 8 ಲಕ್ಷ ರೂ. ಮೌಲ್ಯದ ಮೀನು ಮತ್ತು ಬೋಟ್‌ಗೆ ತುಂಬಿಸಿದ 5,76,700ರೂ. ಮೌಲ್ಯದ 7,500 ಲೀ. ಡೀಸೆಲನ್ನು ಸಹ ದೋಚಿದ್ದಾಗಿ ದೂರಲಾಗಿದೆ.

ಆರೋಪಿಗಳು ಬೋಟ್‌ನಲ್ಲಿದ್ದ ಏಳು ಮಂದಿಯನ್ನು ಒತ್ತೆಯಾಳಾಗಿ ಇರಿಸಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿರುವು ದಾಗಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here