ಬೆಂಗಳೂರು: ಮಹಿಳಾ ಮೀಸಲಾತಿ ಬಂದರೆ ನನ್ನ ಮಗಳನ್ನೇ ಚುನಾವಣೆಗೆ ನಿಲ್ಲಿಸುತ್ತೇನೆ ಎಂದು ಮಾಜಿ ಸಚಿವ ಕೆ.ಎನ್ ರಾಜಣ್ಣ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಹಿಳಾ ಮೀಸಲಾತಿ ಬಂದರೆ ಪುತ್ರಿ ರಶ್ಮಿ ರಾಜಣ್ಣರನ್ನು ಚುನಾವಣೆಗೆ ನಿಲ್ಲಿಸುತ್ತೇನೆ ಎಂದು ಹೇಳಿದರು.
ಸಿಎಂ ಬದಲಾವಣೆ ಕುರಿತ ಚರ್ಚೆಗೆ ಪ್ರತಿಕ್ರಿಯಿಸಿ, ಮುಂದೆ ಮಹತ್ವದ ರಾಜಕೀಯ ಬದಲಾವಣೆ ಆಗುವುದೆಲ್ಲ ಸುಳ್ಳು. ಸಿದ್ದರಾಮಯ್ಯ ಅವರು ಗಟ್ಟಿಯಾಗಿ ವಿಶ್ವಾಸದಲ್ಲಿದ್ದಾರೆ, ಬಜೆಟ್ ಮಂಡಿಸುತ್ತಿದ್ದಾರೆ ಅಂದರೆ ಅವರಲ್ಲಿ ಅಷ್ಟು ವಿಶ್ವಾಸ ಇದೆ ಎಂದು ಅರ್ಥವಲ್ಲವೇ. ಅಲ್ಲಿಗೆ ಯಥಾಸ್ಥಿತಿ ಮುಂದುವರಿಕೆ ಅಂತಲೇ ಅರ್ಥ ಎಂದು ನುಡಿದರು. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಕ್ರಾಂತಿಯಾಗುತ್ತದೆ ಎಂದು ರಾಜಣ್ಣ ನುಡಿದಿದ್ದರು.
ಸ್ವಂತ ಖರ್ಚಲ್ಲಿ ಫಾರಿನ್ ಟ್ರಿಪ್ ಹೋದರೆ ಏನು ತಪ್ಪು?
ಶಾಸಕರು, ವಿಧಾನ ಪರಿಷತ್ ಸದಸ್ಯರ ಫಾರಿನ್ ಟ್ರಿಪ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾನು ಹೋದಷ್ಟು ಫಾರಿನ್ ಟ್ರಿಪ್ ಯಾರೂ ಹೋಗಲ್ಲ. ನಾನು ಜೊತೆಯಲ್ಲಿ ಯಾರನ್ನೂ ಕರ್ಕೊಂಡು ಹೋಗಲ್ಲ ಬಂದ ಮೇಲೂ ಹೇಳಲ್ಲ. ದಟ್ಸ್ ಮೈ ಸ್ಟೈಲ್. ಖಾಸಗಿ ಬದುಕಲ್ಲಿ ಯಾರಾದರೂ ಶಾಸಕರು ಸ್ವಂತ ಖರ್ಚಲ್ಲಿ ಹೊರಗೆ ಹೋದ್ರೆ, ಅದು ಸರಿಯಲ್ಲ ಅಂತ ಹೇಳೋ ಪದ್ದತಿ ಯಾಕೆ ಬರ್ತಿದೆ? ರಾಜಕೀಯ ಅರ್ಥವನ್ನು ಯಾವ ಯಾವ ರೀತಿ ಅರ್ಥೈಸ್ತೀರೋ ಗೊತ್ತಿಲ್ಲ. ಪಾಲಿಟಿಕ್ಸ್ ಪ್ರತಿಯೊಂದರಲ್ಲೂ ಇದ್ದೇ ಇರುತ್ತದೆ. ಸದುದ್ದೇಶದಿಂದ ಮಾಡುವ ವಿದೇಶ ಪ್ರವಾಸಕ್ಕೆ ಹೋಗಿ ಬರಲಿ, ಅದನ್ನು ತಪ್ಪು ಎನ್ನುವುದು ಸರಿಯಲ್ಲ ಎಂದು ರಾಜಣ್ಣ ಹೇಳಿದರು.
ಬೈಠಕ್ ಅಂದರೆ ದೇಶದ ಬಗ್ಗೆ ಚಿಂತನೆ ಮಾಡುವುದು
ವಿದೇಶದಲ್ಲಿ ನಮಗೆ ಒಳ್ಳೆಯದಾಗುವ ಕೆಲವು ಸಂಗತಿಗಳು ಇರುತ್ತವೆ. ಅದನ್ನು ತಿಳಿದುಕೊಂಡು ಬಂದು ಇಲ್ಲಿ ಅಳವಡಿಸಿಕೊಂಡರೆ ಒಳ್ಳೆಯದೇ ಅಲ್ವಾ? ಪ್ರಪಂಚದ ಯಾವ ಯಾವ ದೇಶಗಳಲ್ಲಿ ರೈತರಿಗೆ ಅನುಕೂಲ ಆಗುವ ಪದ್ದತಿ ಇರುತ್ತದೆಯೋ ಅಲ್ಲಿಂದ ಕಲಿತು ಬರಲಿ ಯಾಕೆ ಪ್ರವಾಸವನ್ನ ತಡೆಯುತ್ತಾರೋ ಗೊತ್ತಿಲ್ಲ. ಅದಕ್ಕೆ ಕಠಿಣ ಪದ ಬಳಸಿದರೆ ಅದು ತಪ್ಪಾಗುತ್ತದೆ. ರಾಜಕಾರಣದಲ್ಲಿ ಎಲ್ಲರೂ ಒಂದೇ ತರಹ ಇರುತ್ತಾರಾ? ಸಿದ್ದರಾಮಯ್ಯ 6 ತಿಂಗಳು ಅವರ ಹತ್ರ ಹೋಗಿಲ್ಲ ಅಂದ್ರೆ ಯಾಕೆ ಬಂದಿಲ್ಲ ಅಂತ ಕೇಳಲ್ಲ. ದಿನಾ ಸಿದ್ದರಾಮಯ್ಯ ಹತ್ರ ಹೋದ್ರೆ ಯಾಕಯ್ಯ ಬಂದೆ ಅಂತ ಕೇಳಲ್ಲ. ನಾವೆಲ್ಲ ಸಿದ್ದರಾಮಯ್ಯ ಬಣ ಅಲ್ವಾ, ನಾವೆಲ್ಲ ಯಾಕೆ ಫಾರಿನ್ ಹೋಗ್ತಾ ಇಲ್ಲಾ, ಅಲ್ಲೆಲ್ಲ ಬೈಠಕ್ ಸೇರ್ತಾರೆ ಕೆಲವರು ಬೈಠಕ್ ಅಂದ್ರೆ ದೇಶದ ಬಗ್ಗೆ ಚಿಂತನೆ ಮಾಡುವುದು ಎಂದರ್ಥ ಎಂದರು.
