Home Uncategorized ಮೀನುಗಾರರ ಕಲ್ಯಾಣ ಮಂಡಳಿ ಸಹಿತ ವಿವಿಧ ಬೇಡಿಕೆಗಾಗಿ ಧರಣಿ

ಮೀನುಗಾರರ ಕಲ್ಯಾಣ ಮಂಡಳಿ ಸಹಿತ ವಿವಿಧ ಬೇಡಿಕೆಗಾಗಿ ಧರಣಿ

16
0

ಉಡುಪಿ: ಉಡುಪಿ ಜಿಲ್ಲಾ ಮೀನುಗಾರರ ಮತ್ತು ಮೀನು ಕಾರ್ಮಿಕರ ಸಂಘ(ಸಿಐಟಿಯು) ನೇತೃತ್ವದಲ್ಲಿ ಮೀನುಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸೋಮವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಧರಣಿಯನ್ನುದ್ದೇಶಿಸಿ ಮಾತನಾಡಿದ ಉಡುಪಿ ಜಿಲ್ಲಾ ಮೀನುಗಾರರ ಸಂಘದ ಅಧ್ಯಕ್ಷ ಕೆ.ಶಂಕರ್, ಅಪಘಾತ ಪರಿಹಾರ, ವಸತಿ, ವಿದ್ಯಾರ್ಥಿವೇತನ, ಮದುವೆ ಸಹಾಯಧನ ಸವಲತ್ತು ನೀಡುವ ನಿಟ್ಟಿನಲ್ಲಿ ಸಾಮಾಜಿಕ ಭದ್ರತೆಯ ಭಾಗವಾಗಿ ಮೀನುಗಾರರಿಗೆ ಹಾಗೂ ಮೀನು ಕಾರ್ಮಿಕರಿಗೆ ಕಲ್ಯಾಣ ಮಂಡಳಿಯನ್ನು ರಚಿಸಬೇಕು ಎಂದು ಒತ್ತಾಯಿಸಿದರು.

ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಬೀದಿ ಬದಿಯಲ್ಲಿ ಮೀನು ವ್ಯಾಪಾರ ಮಾಡುವ ಮಹಿಳೆಯರಿಗೆ ಶೆಡ್ಡುಗಳನ್ನು ನಿರ್ಮಿಸ ಬೇಕು. ಮೀನು ಮಾರು ಕಟ್ಟೆಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಮಣಿಪಾಲದಲ್ಲಿ ಮೀನು ಮಾರುಕಟ್ಟೆಯನ್ನು ನಿರ್ಮಿಸಬೇಕು. ಮೀನುಗಾರರಿಗೆ ಹಾಗೂ ಮೀನು ಕಾರ್ಮಿಕರಿಗೆ 60 ವರ್ಷ ಪ್ರಾಯದ ನಂತರ ತಿಂಗಳಿಗೆ 6,000ರೂ. ಪಿಂಚಣಿ ನೀಡಬೇಕು. ಅಪಘಾತದಲ್ಲಿ ಮರಣ ಹೊಂದಿದಲ್ಲಿ 10 ಲಕ್ಷ ಪರಿಹಾರ ನೀಡಬೇಕು. ಗಂಗೊಳ್ಳಿಯಲ್ಲಿ ನಡೆದ ದೋಣಿ ದುರಂತ ತನಿಖೆ ಕೂಡಲೇ ನಡೆಸಿ ಪರಿಹಾರ ಮೊತ್ತ ನೀಡಬೇಕು ಎಂದು ಅವರು ಆಗ್ರಹಿಸಿದರು.

ಎಲ್ಲಾ ಮೀನುಗಾರಿಕ ಬಂದರುಗಳಲ್ಲಿ ಅಗ್ನಿಶಾಮಕ ದಳ ವ್ಯವಸ್ಥೆಯನ್ನು ಕೂಡಲೇ ಮಾಡಬೇಕು. ಸರಕಾರಿ ಸಂಘಗಳ ಸದಸ್ಯರಾಗಲು ಪುರುಷರಿಗೂ ಅವಕಾಶ ನೀಡಬೇಕು. ಮೀನುಗಾರಿಕ ಇಲಾಖೆಯಡಿಯಲ್ಲಿ ಸಿಗುವ ವಾಹನಗಳ ಸಹಾಯ ಧನ ಹೆಚ್ಚಿಸಬೇಕು. ಕೇಂದ್ರ ಸರಕಾರ ಮೀನುಗಾರಿಕಾ ಉದ್ಯಮಕ್ಕಿರುವ ಆರ್ಥಿಕ ಪಾಲು ಹಂಚಿಕೆ ಹೆಚ್ಚಿಸಬೇಕು. ಎಲ್ಲಾ ಮೀನುಗಾರರಿಗೆ ಮತ್ತು ಮೀನುಗಾರಿಕಾ ಕಾರ್ಮಿಕರಿಗೆ ಬಿ.ಪಿ.ಎಲ್. ರೇಶನ್ ಕಾರ್ಡ್ ಒದಗಿಸಬೇಕು. ಸಾಂಪ್ರದಾಯಿಕ ಮೀನುಗಾರಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಬ್ಸಿಡಿ ದರದಲ್ಲಿ ಸೀಮೆ ಎಣ್ಣೆ ಸಮರ್ಪಕವಾಗಿ ಕಾಲಕಾಲಕ್ಕೆ ವಿತರಿಸಬೇಕು.

ಕರಾವಳಿಯ ಉದ್ದಕ್ಕೂ ಕೇರಳದ ಮಾದರಿಯಂತೆ ಶಾಶ್ವತ ತಡೆಗೋಡೆ ನಿರ್ಮಾಣ ಮಾಡಿ, ಮಳೆಗಾಲದಲ್ಲಿ ಆಗುವ ಆನಾಹುತಗಳನ್ನು ತಡೆಗಟ್ಟಬೇಕು. ಮಳೆಗಾಲದ 3 ತಿಂಗಳು ಸಂಪಾದನೆ ಇಲ್ಲದ ಸಂದರ್ಭದಲ್ಲಿ ಉಚಿತ ರೇಶನ್ ನೀಡಬೇಕು. ಸಹಕಾರಿ ಸಂಘ ರಚಿಸಲು ಹಾಗೂ ಸಹಕಾರಿ ಸಂಘಗಳಿಗೆ ಸರಕಾರದ ಪೂರ್ಣ ಸಹಕಾರ ಸಿಗುವಂತಾ ಗಬೇಕು ಎಂದು ಅವರು ಆಗ್ರಹಿಸಿದರು. ಬಳಿಕ ಈ ಕುರಿತ ಮನವಿಯನ್ನು ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಅವರ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಲಾಯಿತು.

ಧರಣಿಯಲ್ಲಿ ಕಟ್ಟಡ ಕಾರ್ಮಿಕ ಸಂಘದ ರಾಜ್ಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ ಕೋಣಿ, ಉಡುಪಿ ಜಿಲ್ಲಾ ಮೀನುಗಾರರ ಮತ್ತು ಮೀನು ಕಾರ್ಮಿಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಕೇಂದ್ರ ಸಮಿತಿ ಸದಸ್ಯರಾದ ಕವಿರಾಜ್ ಎಸ್., ಸಿಐಟಿಯು ಮುಖಂಡರಾದ ಮೋಹನ್, ಮೀನುಗಾರರ ಸಂಘದ ಮುಖಂಡ ರಾದ ಪ್ರಕಾಶ್, ವಸಂತ, ಅನ್ವರ್ ಹುಸೇನ್ ಕಟಪಾಡಿ, ಇಮ್ರಾನ್, ಬಶೀರ್, ಅಬುಬಕ್ಕರ್, ಅಬ್ದುಲ್ ಖಾದರ್, ಇಸ್ಮಾಯಿಲ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here