Home Uncategorized ಮೂರು ವಾರಗಳಲ್ಲಿ 115 ಕೋಟಿ ರೂ.ಬಾಕಿ ವಸೂಲು: ಸಚಿವ ಎಂ.ಬಿ.ಪಾಟೀಲ್

ಮೂರು ವಾರಗಳಲ್ಲಿ 115 ಕೋಟಿ ರೂ.ಬಾಕಿ ವಸೂಲು: ಸಚಿವ ಎಂ.ಬಿ.ಪಾಟೀಲ್

59
0

ಬೆಂಗಳೂರು: ‘ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ ನಿವೇಶನ ಪಡೆದುಕೊಂಡು, ದಶಕಗಳಿಂದ ಹಾಗೆಯೇ ಉಳಿಸಿಕೊಂಡಿದ್ದ ಹಲವರಿಂದ ಮೂರು ವಾರಗಳಲ್ಲಿ 115 ಕೋಟಿ ರೂ.ಬಾಕಿ ವಸೂಲಿ ಮಾಡಲಾಗಿದೆ’ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಮಂಗಳವಾರ ಕೆಐಎಡಿಬಿಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಇಲಾಖೆಯು ಕೈಗೊಂಡಿರುವ ವಿವಿಧ ಉಪಕ್ರಮಗಳು ಮತ್ತು ಅನುಸರಣ ಕಾರ್ಯಗಳ ಪರಾಮರ್ಶೆ ನಡೆಸಿದರು. ಬಳಿಕ ಮಾತನಾಡಿದ ಅವರು, `ಕೆಐಎಡಿಬಿಯಿಂದ ಕೈಗಾರಿಕಾ ನಿವೇಶನಗಳನ್ನು ಪಡೆದುಕೊಂಡಿದ್ದ ಹಲವರು 10-20 ವರ್ಷಗಳಿಂದ ಬಾಕಿ ಹಾಗೆಯೇ  ಉಳಿಸಿಕೊಂಡಿದ್ದರು. ಇದರ ಬಾಬ್ತು ಬೊಕ್ಕಸಕ್ಕೆ 2,400ಕೋಟಿ ರೂ. ಬಾಕಿ ಬರಬೇಕಾಗಿದೆ.

ಇದರ ವಿರುದ್ಧ ಕಾನೂನು ಕ್ರಮ ಜರುಗಿಸಿ, ಬಾಕಿ ವಸೂಲಿ ಮಾಡುವಂತೆ ಮೂರ್ನಾಲ್ಕು ವಾರಗಳ ಹಿಂದೆ ಮಂಡಲಿಯ ನಿರ್ದೇಶಕರುಗಳಿಗೆ ಸೂಚಿಸಲಾಗಿತ್ತು. ಇದರ ನಂತರ ಕ್ಷಿಪ್ರ ಗತಿಯಲ್ಲಿ 115 ಕೋಟಿ ರೂ.ವಸೂಲು ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಈ ವಸೂಲಿ ಕ್ರಮವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ತಿಳಿಸಿದರು.

ವಿಜಯಪುರ ವಿಮಾನ ನಿಲ್ದಾಣದ ಕಾಮಗಾರಿ ಕ್ಷಿಪ್ರ ಗತಿಯಲ್ಲಿ ಸಾಗುತ್ತಿದ್ದು, 2024ರ ಫೆಬ್ರವರಿಯಲ್ಲಿ ಉದ್ಘಾಟಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ, ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದಿಂದ ಅಗತ್ಯವಿರುವ ಅನುಮೋದನೆಗಳನ್ನೆಲ್ಲ ಪಡೆದುಕೊಳ್ಳಬೇಕು. ಜೊತೆಗೆ, ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಇನ್ನು 1 ತಿಂಗಳಲ್ಲಿ ರಾತ್ರಿ ಹೊತ್ತಿನಲ್ಲೂ ವಿಮಾನ ಸೇವೆ ಆರಂಭವಾಗಲಿದೆ ಎಂದು ಅವರು ಹೇಳಿದರು.

ಉತ್ತರ ಕನ್ನಡದ ತಡದಿಯನ್ನು ಸರಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಪರಿಸರ ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಜಾಗತಿಕ ಟೆಂಡರ್ ಕರೆಯಲಾಗುವುದು ಎಂದು ಪಾಟೀಲ ನುಡಿದರು. ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಕೆಐಎಡಿಬಿ ಸಿಇಒ ಡಾ.ಮಹೇಶ ಸೇರಿದಂತೆ ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here