ದೇರಳಕಟ್ಟೆ: ‘ಬ್ಯಾರಿ ಎಲ್ತ್ಕ್ಕಾರ್ ಪಿನ್ನೆ ಕಲಾವಿದಮ್ಮಾರೆ ಕೂಟ’ವಾದ ‘ಮೇಲ್ತೆನೆ’ ಸಂಘಟನೆಯ ವತಿಯಿಂದ ‘ತರವಾಡ್ಲ್ ಒರು ನಾಲ್’ ವಾರ್ಷಿಕ ಅಭಿಯಾನಕ್ಕೆ ಮಂಜನಾಡಿ ಗ್ರಾಮದ ‘ಸಾರ್ತಾಲ್ ತರವಾಡ್’ ಮನೆಯಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.
ಮೇಲ್ತೆನೆಯ ಗೌರವಾಧ್ಯಕ್ಷ ಆಲಿಕುಂಞಿ ಪಾರೆ ಅಭಿಯಾನದ ಪೋಸ್ಟರ್ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು ‘ನಲೋ ತರವಾಡ್-ನಲೊ ಪೆರಿಮೆ’ ಎಂಬುದು ನೂತನ ಅಧ್ಯಕ್ಷ ಅಶೀರುದ್ದೀನ್ ಸಾರ್ತಬೈಲ್ ಅವರ ಹೊಸ ಪರಿಕಲ್ಪನೆಯಾಗಿದೆ. ಹಿಂದೆ ಬ್ಯಾರಿಗಳಲ್ಲಿ ತರವಾಡ್ ಮನೆತನಕ್ಕೆ ತನ್ನದೇ ಆದ ಗೌರವ, ಹಿರಿಮೆಯಿತ್ತು. ಆದರೆ ಅವಿಭಕ್ತ ಕುಟುಂಬ ಪದ್ಧತಿ ಕ್ಷೀಣಿಸುತ್ತಲೇ ತರವಾಡ್ ಮನೆತನದ ಹಿರಿಮೆಯ ಬಗ್ಗೆ ಯುವ ಪೀಳಿಗೆಗೆ ಮಾಹಿತಿ ಇಲ್ಲದಂತಾಗಿದೆ. ಆ ಅರಿವು ಎಲ್ಲರಿಗೂ ಮೂಡಿಸುವ ಪ್ರಯತ್ನ ಇದಾಗಿದೆ. ಹಾಗಾಗಿ ‘ತರವಾಡ್ಲ್ ಒರು ನಾಲ್’ ಕಾರ್ಯಕ್ರಮದ ಮೂಲಕ ಉಳ್ಳಾಲ ತಾಲೂಕು ವ್ಯಾಪ್ತಿಯ ಎಲ್ಲಾ ತರವಾಡ್ ಮನೆತನಗಳ ಮಾಹಿತಿ ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಹೊರತರುವ ಉದ್ದೇಶ ‘ಮೇಲ್ತೆನೆ’ ಹೊಂದಿದೆ ಎಂದರು.
ಮೇಲ್ತೆನೆಯ ಅಧ್ಯಕ್ಷ ಅಶೀರುದ್ದೀನ್ ಸಾರ್ತಬೈಲ್ ವಿಷಯ ಮಂಡಿಸಿದರು. ಬಳಿಕ ತರವಾಡ್ ಮನೆತನದ ಬಗ್ಗೆ ಹಿರಿಯರಿಂದ ಮಾಹಿತಿ ಪಡೆದುಕೊಳ್ಳಲಾಯಿತು. ಸಾರ್ತಬೈಲ್ ತರವಾಡ್ನ ಇಝ್ಝುದ್ಧೀನ್ ಮಾಸ್ಟರ್ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಾರ್ತಬೈಲ್ ತರವಾಡ್ನ ಹಿರಿಯರಾದ ಎಸ್.ಎ. ಅಬೂಬಕ್ಕರ್ ಅಧ್ಯಕ್ಷತೆ ವಹಿಸಿದ್ದರು.
ನಿವೃತ್ತ ಪ್ರಾಂಶುಪಾಲ ಇಸ್ಮಾಯಿಲ್ ಮಾಸ್ಟರ್ ಸ್ವಾಗತಿಸಿದರು. ಮೇಲ್ತೆನೆಯ ಮಾಜಿ ಅಧ್ಯಕ್ಷರಾದ ಬಶೀರ್ ಕಲ್ಕಟ್ಟ ವಂದಿಸಿದರು. ಬಶೀರ್ ಅಹ್ಮದ್ ಕಿನ್ಯ ಕಾರ್ಯಕ್ರಮ ನಿರೂಪಿಸಿದರು.
ಮೇಲ್ತೆನೆಯ ಪ್ರಧಾನ ಕಾರ್ಯದರ್ಶಿ ಹಂಝ ಮಲಾರ್, ಕೋಶಾಧಿಕಾರಿ ಹಾಜಿ ಇಬ್ರಾಹೀಂ ನಡುಪದವು, ಸಾರ್ತಾಲ್ ಮನೆತನದ ಇಸ್ಮಾಯಿಲ್ ಸಾರ್ತಾಲ್, ಇಮ್ರಾನ್ ಎಸ್.ಎ. ಸಾರ್ತಾಲ್, ಮುಹಮ್ಮದ್, ನೆಕ್ಕರೆ ಬಾವು, ಗ್ರಾಪಂ ಸದಸ್ಯ ಆಸೀಫ್,. ಇಸ್ಮಾಯೀಲ್ ಎಸ್ಎಂ (ಪುತ್ತುಬಾವು), ಮನ್ಸೂರ್, ಅಬೂಬಕರ್, ಅನ್ಸಾರ್, ಶಫೀಕ್, ಅಝೀಝ್ ನೆಕ್ಕರೆ, ಫಯಾಝ್ ದೊಡ್ಡಮನೆ ಮತ್ತಿತರರು ಉಪಸ್ಥಿತರಿದ್ದರು.