ಜಮ್ಮು: ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯಿದೆಯಡಿ ಅಪರಾಧವೆಸಗಿದ ಆರೋಪ ಎದುರಿಸುತ್ತಿರುವವರ ಜಾಮೀನು ಅರ್ಜಿಗಳನ್ನು ವಿರೋಧಿಸಲು ಸರ್ಕಾರವು “ಕಾಪಿ-ಪೇಸ್ಟ್ ವಾದಗಳನ್ನು” ಅವಲಂಬಿಸುತ್ತಿದೆ ಎಂದು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಹೇಳಿದೆ.
“ಯುವಕರಿಗೆ ಉಗ್ರವಾದದ ಹಾದಿ ಹಿಡಿಯಲು ಹಾಗೂ ಭಾರತ ಸರ್ಕಾರದ ವಿರುದ್ಧ ಕಾರ್ಯಾಚರಿಸಲು” ಪ್ರಚೋದಿಸುತ್ತಿದ್ದಾರೆಂದು ಆರೋಪಿಸಿ ಉಗ್ರ ನಿಗ್ರಹ ಕಾಯಿದೆಯಡಿ ಆರೋಪಿತರಾಗಿರುವ ಖುರ್ಷಿದ್ ಅಹ್ಮದ್ ಲೋನೆ ಅವರ ಜಾಮೀನು ಅರ್ಜಿ ವಿಚಾರಣೆ ಸಂದರ್ಭ ನ್ಯಾಯಮೂರ್ತಿಗಳಾದ ಅತುಲ್ ಶ್ರೀಧರನ್ ಮತ್ತು ಮುಹಮ್ಮದ್ ಯೂಸುಫ್ ವನಿ ಅವರ ವಿಭಾಗೀಯ ಪೀಠ ಹೇಳಿದೆ.
ಲೋನೆ ಅವರನ್ನು ಮೊದಲು ಎಪ್ರಿಲ್ 2013ರಲ್ಲಿ ಬಂಧಿಸಲಾಗಿತ್ತು ಮತ್ತು ಸಾರ್ವಜನಿಕ ಸುರಕ್ಷತಾ ಕಾಯಿದೆಯಡಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಆರಂಭದಲ್ಲಿ ಮುನ್ನೆಚ್ಚರಿಕಾ ಬಂಧನದಲ್ಲಿದ್ದ ಅವರನ್ನು ಅಕ್ಟೋಬರ್ 2013ರಲ್ಲಿ ಬಿಡುಗಡೆಗೊಳಿಸಲಾಗಿದ್ದರೂ ಅಕ್ಟೋಬರ್ 2022ರಲ್ಲಿ ಮತ್ತೆ ಬಂಧಿಸಲಾಗಿತ್ತು.
“ಆಂತರಿಕ ಭದ್ರತೆ” ಎಂಬ ಪದದ ಬಗ್ಗೆ ಎಚ್ಚರಿಕೆಯಿರಲಿ ಏಕೆಂದರೆ ಅದು ದೌರ್ಜನ್ಯಕಾರರ ಶಾಶ್ವತ ಕೂಗು ಆಗಿದೆ,” ಎಂದು ಫ್ರೆಂಚ್ ಸಾಹಿತಿ ವೋಲ್ಟಾಯಿರ್ ಅವರ ಮಾತುಗಳನ್ನು ಉಲ್ಲೇಖಿಸಿ ನ್ಯಾಯಪೀಠ ಹೇಳಿದೆ.
“ಇಂತಹ ಪ್ರಕರಣಗಳಲ್ಲಿ ಸರ್ಕಾರ ಹೆಚ್ಚಾಗಿ ರಾಷ್ಟ್ರೀಯ ಭದ್ರತೆ ಮತ್ತು ಪಾಕ್ ಜೊತೆ ನಂಟು ಮುಂತಾದ ವಿಚಾರಗಳನ್ನೇ ತನ್ನ ವಾದ ಮಂಡನೆಯಲ್ಲಿ ಅವಲಂಬಿಸಿದೆ ಹೊರತು ಆರೋಪಿ ವಿರುದ್ಧ ನಿರ್ದಿಷ್ಟ ಪುರಾವೆ ನೀಡುವುದಿಲ್ಲ,” ಎಂದು ನ್ಯಾಯಾಲಯ ಹೇಳಿದೆ.
ಈ ರೀತಿ ಸರ್ಕಾರದ “ಆಂತರಿಕ ಭದ್ರತೆಗೆ ಅಪಾಯ” ಎಂಬ ಅದೇ ಮಾತನ್ನು ಅವಲಂಬಿಸಿ ಒಬ್ಬ ವ್ಯಕ್ತಿಯ ಜಾಮೀನು ಅರ್ಜಿ ನಿರಾಕರಿಸುವುದು ಅರ್ಜಿದಾರರನ್ನು ನ್ಯಾಯದಿಂದ ವಂಚಿತರನ್ನಾಗಿಸಿದಂತಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ ಹಾಗೂ ಲೋನೆ ಅವರಿಗೆ ಜಾಮೀನು ಮಂಜೂರುಗೊಳಿಸಿದೆ.