ಬೆಂಗಳೂರು: ಸತತ 17ನೇ ಬಾರಿಗೆ ಬಜೆಟ್ ಮಂಡಿಸಲು ಒಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿದ್ಧತೆ ನಡೆಸುತ್ತಿರುವಾಗಲೇ ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಕೂಡ ಜೋರಾಗಿಯೇ ಇದೆ.
ಮುಖ್ಯಮಂತ್ರಿ ಬದಲಾವಣೆ ಆಗುತ್ತಾರಾ, ಡಿ ಕೆ ಶಿವಕುಮಾರ್ ಸಿಎಂ ಆಗುತ್ತಾರಾ ಎಂಬ ವದಂತಿಗೆ ಫುಲ್ ಸ್ಟಾಪ್ ಇನ್ನೂ ಬಿದ್ದಿಲ್ಲ. ಹೈಕಮಾಂಡ್ ಕಡೆಯಿಂದ ಕೂಡ ಸ್ಪಷ್ಟನೆ ಬಂದಿಲ್ಲ. ರಾಜಕಾರಣ ಬಗ್ಗೆ, ದೇಶದ ಮತ್ತು ರಾಜ್ಯದ ಸ್ಥಿತಿಗತಿ ಬಗ್ಗೆ ಆಗಾಗ ಭವಿಷ್ಯ ನುಡಿಯುವ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಸಂಕ್ರಾಂತಿವರೆಗೂ ಸಿದ್ದರಾಮಯ್ಯ ಸ್ಥಾನಕ್ಕಾಗಲೀ, ಕಾಂಗ್ರೆಸ್ ಸರ್ಕಾರಕ್ಕೆ ಆಗಲೀ ಏನೂ ಅಪಾಯವಿಲ್ಲ ಎಂದು ಹೇಳಿದ್ದರು. ಇದೀಗ ಶಿವರಾತ್ರಿ ನಿಮಿತ್ತ ಕಾಶಿಗೆ ಹೋಗಿ ಬಂದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದಾರೆ.
ಕೋಡಿಮಠದ ಶ್ರೀ ಹೇಳಿದ್ದೇನು?
ನಿನ್ನೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ʼಶಿವರಾತ್ರಿ ಪೂಜೆಗಾಗಿ ಕಾಶಿಗೆ ಹೋಗಿದ್ದೆವು. ವಿಶ್ವನಾಥನ ದರ್ಶನ ಆಯಿತು. ಪ್ರಯಾಗಕ್ಕೂ ಹೋಗಿದ್ದೆ. ಕರ್ನಾಟಕದಲ್ಲಿ ಮಳೆ-ಬೆಳೆ ಚೆನ್ನಾಗಿ ಆಗಿ, ಸುಖ-ಶಾಂತಿ ನೆಲೆಸಲಿ ಎಂದು ಪ್ರಾರ್ಥನೆ ಮಾಡಿದೆವುʼ ಎಂದು ಹೇಳಿದರು. ಕರ್ನಾಟಕದಲ್ಲಿ ಈ ವರ್ಷ ಮಳೆ-ಬೆಳೆಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಜಗತ್ತಿನಾದ್ಯಂತ ಸಮಸ್ಯೆ ಇದೆ. ವಿಶ್ವದಲ್ಲಿ ಯುದ್ಧ ಆಗುವ ಲಕ್ಷಣಗಳು ಜಾಸ್ತಿ ಇವೆ ಎಂದರು.
ಅವರಾಗಿಯೇ ಬಿಟ್ಟು ಕೊಡಬೇಕು
ರಾಜ್ಯ ರಾಜಕಾರಣ, ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಕೇಳಿದಾಗ, ನಾನು ಹಿಂದೆಯೇ ಹೇಳಿದ್ದೆ. ಸಂಕ್ರಾಂತಿ ಆಗಲಿ ಎಂದಿದ್ದೆ. ಬಜೆಟ್ ಆಗುತ್ತೆ, ಅದಾದ ಮೇಲೆ ಯುಗಾದಿಯೂ ಬರುತ್ತೆ, ಯುಗಾದಿ ಬಳಿಕ ಅವರಾಗೇ ಬಿಟ್ಟರೆ ಬದಲಾವಣೆ ಆಗುತ್ತೆ. ಡಿ.ಕೆ.ಶಿವಕುಮಾರ್, ಡಾ. ಜಿ. ಪರಮೇಶ್ವರ್ ಎಲ್ಲರೂ ನಮ್ಮವರು..ಆಗಬೇಕುʼ ಎಂದು ಹೇಳಿದರು.
ಯುಗಾದಿ ನಂತರ ಸಿಎಂ ಸಿದ್ದರಾಮಯ್ಯನವರು ಅವರಾಗೇ ಬಿಡುತ್ತಾರಾ? ಎಂಬ ಪ್ರಶ್ನೆಗೆ ಶ್ರೀಗಳು ಉತ್ತರ ನೀಡಲಿಲ್ಲ. ಕರ್ನಾಟಕ ರಾಜಕಾರಣದಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದರು. ಯುಗಾದಿ ಬಳಿಕ ಸಿದ್ದರಾಮಯ್ಯನವರು ಅವರಾಗೇ ತಮ್ಮ ಸಿಎಂ ಹುದ್ದೆ ತ್ಯಜಿಸುತ್ತಾರಾ ಎಂಬ ಪ್ರಶ್ನೆ ಒಂದೆಡೆ ಆದರೆ, ಸಿದ್ದರಾಮಯ್ಯನವರನ್ನ ಸಿಎಂ ಹುದ್ದೆಯಿಂದ ತೆಗೆಯಲು ಯಾರಿಂದಲೂ ಸಾಧ್ಯವಿಲ್ಲ. ಅವರು ಇಚ್ಛೆಪಟ್ಟರೆ ಮಾತ್ರ ಬದಲಾವಣೆ ಎಂದೂ ಹೇಳಿದರು.
