ಮಾಜಿ ಪ್ರಧಾನಿ ವಾಜಪೇಯಿ ಅವರ ಜನ್ಮದಿನದ ‘ಸುಶಾಸನ ದಿನ’ದ ಭಾಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾನುವಾರ 10 ಸಾವಿರ ಯುವಕರಿಗೆ ಉದ್ಯೋಗ ಪತ್ರ ವಿತರಿಸಿದರು. ಬೆಂಗಳೂರು: ಮಾಜಿ ಪ್ರಧಾನಿ ವಾಜಪೇಯಿ ಅವರ ಜನ್ಮದಿನದ ‘ಸುಶಾಸನ ದಿನ’ದ ಭಾಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾನುವಾರ 10 ಸಾವಿರ ಯುವಕರಿಗೆ ಉದ್ಯೋಗ ಪತ್ರ ವಿತರಿಸಿದರು.
ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ ಅಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಗಳು ಸಂಯುಕ್ತವಾಗಿ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಬಸವರಾಜ ಬೊಮ್ಮಾಯಿ ಅವಕು ಸಾಂಕೇತಿಕವಾಗಿ ಎಂಟು ಅಭ್ಯರ್ಥಿಗಳಿಗೆ ಉದ್ಯೋಗಾದೇಶಗಳನ್ನು ನೀಡಿದರು.
ಈ ವೇಳೆ ಉನ್ನತ ಶಿಕ್ಷಣ, ಐಟಿ/ಬಿಟಿ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಅವರ ಪ್ರಯತ್ನವನ್ನು ಶ್ಲಾಘಿಸಿದ ಬೊಮ್ಮಾಯಿ ಅವರು, ಖಾಸಗಿ ಕಂಪನಿಗಳ ಸಹಾಯದಿಂದ ಪ್ರತಿ ತಿಂಗಳು 10,000 ಉದ್ಯೋಗಾವಕಾಶಗಳನ್ನು ಒದಗಿಸಬೇಕು ಎಂದು ಸಲಹೆ ನೀಡಿದರು.
ರಾಜ್ಯ ಕೌಶಲ ಅಭಿವೃದ್ಧಿ ಇಲಾಖೆಯ ಈ ಉಪಕ್ರಮದಡಿ, ಮಾಸಿಕ ಕನಿಷ್ಠ ರೂ.18 ಸಾವಿರದಿಂದ ಗರಿಷ್ಠ ರೂ.45 ಸಾವಿರ ವೇತನದವರೆಗಿನ ಉದ್ಯೋಗ ಲಭ್ಯವಾಗಿದೆ. ಎಂಜಿನಿಯರಿಂಗ್, ಬಿ.ಎಸ್ಸಿ, ಬಿ.ಕಾಂ., ನರ್ಸಿಂಗ್, ಡಿಪ್ಲೊಮಾ, ಪಾಲಿಟೆಕ್ನಿಕ್ ಪದವೀಧರರಿದ್ದಾರೆ ಎಂದು ತಿಳಿಸಿದರು.
“ಕರ್ನಾಟಕದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 10,000 ಆಕಾಂಕ್ಷಿಗಳಿಗೆ ಒಂದೇ ಬಾರಿಗೆ ಉದ್ಯೋಗ ಪತ್ರಗಳನ್ನು ಹಸ್ತಾಂತರಿಸಲಾಗಿದೆ. ನಮ್ಮ ಸರ್ಕಾರವು ಯುವಕರಿಗೆ ತರಬೇತಿ ನೀಡುತ್ತಿದೆ, ಅಗತ್ಯವಿರುವ ಕೌಶಲ್ಯಗಳನ್ನು ನೀಡುತ್ತಿದೆ. ಇದರಿಂದ ಅವರ ವ್ಯಕ್ತಿತ್ವವನ್ನು ಸುಧಾರಿಸುತ್ತದೆ, ಇದು ಉದ್ಯೋಗವನ್ನು ಪಡೆಯಲು ನಿರ್ಣಾಯಕವಾಗಿದೆ ಎಂದರು.
ಅಶ್ವತ್ಥ್ ನಾರಾಯಣ್ ಅವರು ಮಾತನಾಡಿ, ರಾಜ್ಯ ಸರ್ಕಾರವು ಉನ್ನತ ಶಿಕ್ಷಣ ಇಲಾಖೆ ಮಾತ್ರವಲ್ಲದೆ ಇತರ ಇಲಾಖೆಗಳಲ್ಲಿಯೂ ಹೊಣೆಗಾರಿಕೆ, ಪಾರದರ್ಶಕತೆ ಮತ್ತು ದಕ್ಷತೆಯನ್ನು ಸುಧಾರಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದರು.