ಬೆಂಗಳೂರು: ನಬಾರ್ಡ್ ಸಂಸ್ಥೆಯು 2024-25ನೆ ಸಾಲಿನಲ್ಲಿ ಕರ್ನಾಟಕದಲ್ಲಿ ಆದ್ಯತಾ ವಲಯದ ಸಾಲಕ್ಕಾಗಿ 3.97 ಲಕ್ಷ ಕೋಟಿ ರೂ.ಗಳ ಸಾಲದ ಸಾಮಥ್ರ್ಯವನ್ನು ಅಂದಾಜು ಮಾಡಿದೆ, ಇದು ಹಿಂದಿನ ವರ್ಷಗಳಿಗಿಂತ ಶೇ.10.67 ರಷ್ಟು ಕ್ರೆಡಿಟ್ ಪ್ರೊಜೆಕ್ಷನ್ ಹೆಚ್ಚಿದೆ ಎಂದು ನಬಾರ್ಡನ ಮುಖ್ಯ ಮಹಾ ಪ್ರಬಂಧಕ ಟಿ.ರಮೇಶ್ ಹೇಳಿದರು.
ಮಂಗಳವಾರ ನಗರದಲ್ಲಿರುವ ನಬಾರ್ಡ್ ಸಂಸ್ಥೆಯ ಪ್ರಾದೇಶಿಕ ಕಚೇರಿಯಲ್ಲಿ ಆಯೋಜಿಸಿದ್ದ ‘ಕರ್ನಾಟಕ ರಾಜ್ಯ ಕ್ರೆಡಿಟ್ ಸೆಮಿನಾರ್’ನಲ್ಲಿ ಆರಂಭಿಕ ಭಾಷಣ ಮಾಡಿದ ಅವರು, ಆದ್ಯತಾ ವಲಯಗಳ ಸಾಲದ ಅಡಿಯಲ್ಲಿ ಕೃಷಿ, ಮೂಲಸೌಕರ್ಯ ಮತ್ತು ಪೂರಕ ಚಟುವಟಿಕೆಗಳು ಸೇರಿದಂತೆ ಕೃಷಿ ಕ್ಷೇತ್ರದ ಪಾಲು 1.85 ಲಕ್ಷ ಕೋಟಿ ರೂ., ಎಂ.ಎಸ್.ಎಂ.ಇ ವಲಯಕ್ಕೆ 1.58 ಲಕ್ಷ ಕೋಟಿ ರೂ. ಮತ್ತು ಇತರ ಆದ್ಯತಾ ವಲಯಗಳಿಗೆ 54 ಸಾವಿರ ಕೋಟಿ ರೂ.ಸಾಲದ ಗುರಿಯನ್ನು ಯೋಜಿಸಿದೆ ಎಂದು ಮಾಹಿತಿ ನೀಡಿದರು.
ತೀವ್ರ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಆರ್ ಐಡಿಎಫ್ ಅಡಿಯಲ್ಲಿ 119 ನೀರಾವರಿ ಯೋಜನೆಗಳಿಗೆ 990 ಕೋಟಿ ರೂ. ಮತ್ತು ಕುಡಿಯುವ ನೀರಿನ ಯೋಜನೆಗಳಿಗೆ 611 ಕೋಟಿ ರೂ.ಗಳ ಆರ್ಥಿಕ ನೆರವು ಮತ್ತು ಪ್ರಸಕ್ತ ವರ್ಷದಲ್ಲಿ ಸುಸ್ಥಿರ ನೀರಾವರಿ ಪದ್ಧತಿಗಳನ್ನು ಉತ್ತೇಜಿಸಲು ಸೂಕ್ಷ್ಮ ನೀರಾವರಿ ನಿಧಿ ಅಡಿಯಲ್ಲಿ 290 ಕೋಟಿ ರೂ.ಗಳನ್ನು ಇತರ ಪಾಲುದಾರರ ಸಹಯೋಗದೊಂದಿಗೆ ರೈತ ಉತ್ಪಾದಕರ ಸಂಸ್ಥೆಗಳು ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಕೃಷಿ ಮೌಲ್ಯ ಸರಪಳಿಯಲ್ಲಿ ಸಂಯೋಜಿಸಲು ಮತ್ತು ಅವರ ಆದಾಯವನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿಯಾಗಿ ಸಾಬೀತಾಗಿದೆ ಎಂದು ಅವರು ಸೂಚಿಸಿದರು.
ನಬಾರ್ಡ್ ರಾಜ್ಯದಾದ್ಯಂತ 30 ಎಫ್ಪಿಒಗಳೊಂದಿಗೆ ‘ಎಫ್ಪಿಒ ವೇಗವರ್ಧಕ ಯೋಜನೆ’ ಯನ್ನು ಪ್ರಾಯೋಗಿಕವಾಗಿ ನಡೆಸುತ್ತಿದೆ. ಹಿಂದುಳಿದ ಮತ್ತು ಮುಂದುವರೆದ ಸಂಪರ್ಕ ಗುರಿಯನ್ನು ಹೊಂದಿದೆ ಮತ್ತು ರಾಜ್ಯದ ಇತರ ಎಫ್ಪಿಒಗಳಿಗೆ ದಾರಿ ಮಾಡಿಕೊಡುತ್ತದೆ. 5491 ಪ್ಯಾಕ್ಸ್ ಗಳನ್ನು ಗಣಕೀಕರಣಗೊಳಿಸುವ ಪ್ರಕ್ರಿಯೆಯು ಪ್ರಗತಿಯಲ್ಲಿದೆ, ಇದರಿಂದ ಸಹಕಾರ ಸಂಘಗಳು ಸದಸ್ಯ ರೈತರಿಗೆ ತಡೆರಹಿತ ಸೇವೆಗಳನ್ನು ನೀಡಲು ಸಾಧ್ಯವಾಗುತ್ತದೆ ಎಂದು ರಮೇಶ್ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಭಿವೃದ್ಧಿ ಆಯುಕ್ತೆ ಡಾ.ಶಾಲಿನಿ ರಜನೀಶ್ ಮಾತನಾಡಿ, 2032ರ ವೇಳೆಗೆ ಒಂದು ಟ್ರಿಲಿಯನ್ ಡಾಲರ್ ಜಿಎಸ್ಡಿಪಿ ಆರ್ಥಿಕತೆಯ ರಾಜ್ಯವಾಗಲು ಕರ್ನಾಟಕ ನಿಗದಿತ ಗುರಿ ಹೊಂದಿದೆ. ಈ ಗುರಿಯನ್ನು ಸಾಧಿಸಲು ವಿವಿಧ ಕ್ಷೇತ್ರಗಳ ವಿವಿಧ ಉಪಕ್ರಮಗಳು ವರ್ಧಿಸುತ್ತವೆ ಮತ್ತು ಇವುಗಳಲ್ಲಿ, ಕೃಷಿ ಕ್ಷೇತ್ರವು ಪ್ರಮುಖ ಪಾತ್ರವನ್ನು ವಹಿಸಲು ಸಿದ್ಧವಾಗಿದೆ ಎಂದರು.
ರಾಜ್ಯ ಸರಕಾರವು 19.97 ಲಕ್ಷ ರೂ.ಗಳಿಗೂ ಹೆಚ್ಚು ರೈತರಿಗೆ ಬಡ್ಡಿ ರಹಿತ ಬೆಳೆ ಸಾಲವನ್ನು ವಿತರಿಸಲು ಅನುಕೂಲ ಮಾಡುತ್ತಿದೆ ಮತ್ತು ಬರಗಾಲದಿಂದ ತತ್ತರಿಸಿರುವ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ನೀಡಲು ಅವಧಿ ಮೀರಿದ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಮತ್ತು ಸಹಕಾರಿ ಸಂಸ್ಥೆಗಳಿಂದ ಪಡೆದ ಸಾಲಗಳ ಮೇಲಿನ ಬಡ್ಡಿಯನ್ನು ಮನ್ನಾ ಮಾಡುತ್ತಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಕಾರ್ಬನ್ ರಿಮೂವಲ್ ಯೂನಿಟ್ ಮೂಲಕ ಹಣಗಳಿಸುವ ಸೂಕ್ತವಾದ ಕೃಷಿ-ಹಾರ್ಟಿ ವ್ಯವಸ್ಥೆಗಳಿಗೆ ಪರಿವರ್ತನೆ ಮಾಡಲು ಸಣ್ಣ ಹಿಡುವಳಿದಾರ ರೈತರನ್ನು ಉತ್ತೇಜಿಸಲು ಸರಕಾರವು ಕಾರ್ಬನ್ ಕ್ರೆಡಿಟ್ ಫ್ರೇಮ್ ವರ್ಕ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಈ ಯೋಜನೆಯು ಸುಸ್ಥಿರ ಕೃಷಿ ಮತ್ತು ರೈತರಿಗೆ ಉತ್ತಮ ಜೀವನೋಪಾಯವನ್ನು ಉತ್ತೇಜಿಸುತ್ತದೆ ಶಾಲಿನಿ ರಜನೀಶ್ ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯದ ಆದ್ಯತಾ ವಲಯದ ಅಡಿಯಲ್ಲಿ ಸಾಲ ಸಾಮಥ್ರ್ಯವನ್ನು ದಾಖಲಿಸುವ ಸ್ಟೇಟ್ ಫೋಕಸ್ ಪೇಪರ್-2024-25ನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ಕಾರ್ಯಕಾರಿ ನಿರ್ದೇಶಕ ಹರ್ದೀಪ್ ಸಿಂಗ್ ಅಹ್ಲುವಾಲಿಯಾ, ಆರ್ಬಿಐನ ಮುಖ್ಯ ಪ್ರಧಾನ ವ್ಯವಸ್ಥಾಪಕ ಪಿ.ಎನ್.ರಘುನಾಥ್, ಎಸ್ಬಿಐ ನ ಮುಖ್ಯ ಪ್ರಧಾಣ ವ್ಯವಸ್ಥಾಪಕ ಕೃಷನ್ ಶರ್ಮ ಹಾಗೂ ರಾಜ್ಯದ ವಿವಿಧ ಬ್ಯಾಂಕುಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.