Home Uncategorized ರಾಜ್ಯದಲ್ಲಿ ಲಿಂಗಾಯತ-ವೀರಶೈವ ಸಮುದಾಯದ ಜನಸಂಖ್ಯೆ 2 ಕೋಟಿ ಇದೆ: ಶಾಮನೂರು ಶಿವಶಂಕರಪ್ಪ

ರಾಜ್ಯದಲ್ಲಿ ಲಿಂಗಾಯತ-ವೀರಶೈವ ಸಮುದಾಯದ ಜನಸಂಖ್ಯೆ 2 ಕೋಟಿ ಇದೆ: ಶಾಮನೂರು ಶಿವಶಂಕರಪ್ಪ

42
0

ಬೆಂಗಳೂರು: ರಾಜ್ಯದಲ್ಲಿ ಲಿಂಗಾಯತ ವೀರಶೈವ ಸಮುದಾಯದ ಜನಸಂಖ್ಯೆ 2 ಕೋಟಿಗೂ ಅಧಿಕವಿದೆ. ಹಾಗಿದ್ದರೂ, ಹಿಂದುಳಿದ ವರ್ಗಗಳ ಆಯೋಗದ ವರದಿಯಲ್ಲಿ ಉದ್ದೇಶಪೂರ್ವಕವಾಗಿ ನಮ್ಮ ಸಮುದಾಯದ ಸಂಖ್ಯೆ ಕಡಿಮೆ ಮಾಡಿದ್ದಾರೆಂಬ ಅನುಮಾನವಿದೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಇಂದಿಲ್ಲಿ ಸಂಶಯ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗಾಯತ ವೀರಶೈವ ಸಮುದಾಯದ ಜನಸಂಖ್ಯೆಯನ್ನು ಆಯೋಗದ ವರದಿಯಲ್ಲಿ ಬರೀ 65 ಲಕ್ಷ ಎಂದು ತೋರಿಸುತ್ತಿದ್ದಾರೆ. ಆದರೆ, ಇದು ಸುಳಾಗಿದ್ದು, ಈ ವರದಿ ಬಗ್ಗೆ ಪುನರ್ ಪರಿಶೀಲನೆ ಮಾಡಬೇಕು ಎಂದು ಇದೇ ವೇಳೆ ಒತ್ತಾಯಿಸಿದರು.

ರಾಜ್ಯ ಸರಕಾರ ವರದಿಯನ್ನು ಏನು ಮಾಡುತ್ತದೆ ನೋಡೋಣ. ಆದರೆ, ನಾವಂತೂ ಸುಮ್ಮನೆ ಕೂರುವುದಿಲ್ಲ.ವೈಜ್ಞಾನಿಕವಾಗಿ ಸಮೀಕ್ಷೆ ಮಾಡಲಿ. ಆದರೆ, 9 ವರ್ಷದ ಹಳೆಯ ವರದಿಯನ್ನೇ ಈಗ ಮತ್ತೆ ತಂದುಕೊಟ್ಟಿದ್ದಾರೆ. ಈ ವರದಿಯನ್ನು ನಾವು ಒಪ್ಪುವುದಿಲ್ಲ. ಜಾತಿ ಗಣತಿ ವರದಿಯನ್ನು ಮನೆಯಲ್ಲೇ ಕೂತು ತಯಾರಿ ಮಾಡಲಾಗಿದೆ ಎಂದು ಆರೋಪಿಸಿದರು.

ನಾವು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಸೇರಿದಂತೆ ಯಾವುದೇ ಸಮುದಾಯದ ವಿರುದ್ಧ ಇಲ್ಲ. ನಮ್ಮ ಜನಸಂಖ್ಯೆ ಹೆಚ್ಚಿದೆ. ಅಗತ್ಯಬಿದ್ದರೆ ಖಾಸಗಿಯಾಗಿಯೂ ಸಮೀಕ್ಷೆ ಮಾಡಿಸುತ್ತೇವೆ. ಈ ವರದಿಯಿಂದ ಜಾತಿ ಸಂಘರ್ಷ ಆಗುತ್ತದೆ. ಚುನಾವಣೆಯಲ್ಲಿ ಸಮಸ್ಯೆ ಆಗುತ್ತದೋ, ಇಲ್ಲವೋ ನಾನು ಈಗಲೇ ಹೇಳಲಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನಮ್ಮ ಅಭಿಪ್ರಾಯಕ್ಕೆ ಮನ್ನಣೆ ಕೊಡುತ್ತಾರೋ ನೋಡೋಣ ಎಂದು ಅವರು ಹೇಳಿದರು.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದು ಕಾಂತರಾಜು ವರದಿ ಎಂದು ಸರಿಯಾಗಿಯೇ ಹೇಳಿದ್ದಾರೆ. ಕಾಂತರಾಜು ವರದಿಯನ್ನು ಜಯಪ್ರಕಾಶ್ ಹೆಗ್ಡೆ ಕೊಟ್ಟಿದ್ದಾರೆ. ಈ ವರದಿ ಮೂಲಕ ಜಾತಿ, ಜಾತಿಗಳ ಮೇಲೆ ಛೂ ಬಿಡುವ ಕೆಲಸ ಆಗುತ್ತಿದೆ. ವರದಿಯನ್ನು ಸರಕಾರ ಒಪ್ಪಬಾರದು ಎಂದು ಅವರು ಆಗ್ರಹಿಸಿದರು.

LEAVE A REPLY

Please enter your comment!
Please enter your name here