ಮಂಗಳೂರು ಜ.4: ಪುಣೆಯಲ್ಲಿ ಜರುಗಿದ ‘ರಾಷ್ಟ್ರೀಯ ಬಾಲ ವೈಜ್ಞಾನಿಕ ಪ್ರದರ್ಶಿನಿ’ಯಲ್ಲಿ ಶಕ್ತಿ ವಸತಿ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿ ಶಾಸ್ತಾ ನಾಯ್ಕ್ ವಿ. ಹಾಗೂ ನಾಲ್ಕನೇ ತರಗತಿ ವಿದ್ಯಾರ್ಥಿ ಶ್ರೇಷ್ಠಾ ನಾಯ್ಕ್ ವಿ. ಪ್ರಸ್ತುತಪಡಿಸಿದ ‘ತೆಂಗಿನಕಾಯಿಯನ್ನುಒಣಗಿಸುವ ವಿಶೇಷ ಯಂತ್ರ’ ರಾಷ್ಟ್ರ ಮಟ್ಟದಲ್ಲಿ ಇನ್ ಸ್ಪೈರೇಶನಲ್ ಸಯನ್ಸ್ ಮಾಡೆಲ್ ಪ್ರಶಸ್ತಿಗೆ ಪಾತ್ರವಾಗಿದೆ.
ನ್ಯಾಶನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಆ್ಯಂಡ್ ಟ್ರೈನಿಂಗ್ ಇವರು ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ 206 ತಂಡಗಳು ಪಾಲ್ಗೊಂಡಿದ್ದವು. ಈ ಪೈಕಿ ಆರು ತಂಡಗಳು ಗೆಲುವು ಸಾಧಿಸಿದ್ದು, ಅದರಲ್ಲಿ ಶಕ್ತಿ ವಸತಿ ಶಾಲೆಯ ವಿದ್ಯಾರ್ಥಿಗಳ ತಂಡವೂ ಒಂದೆಂಬುದು ಗಮನಾರ್ಹ. ಈ ಇಬ್ಬರು ವಿದ್ಯಾರ್ಥಿಗಳು ಶ್ರೀನಾಥ್ ಹಾಗೂ ಚಂದ್ರಿಕಾ ಶ್ರೀನಾಥ್ ದಂಪತಿಯ ಪುತ್ರರು.
ಸಾಧಕ ವಿದ್ಯಾರ್ಥಿಗಳಿಗೆ ಶಾಲೆಯ ಜೀವಶಾಸ್ತ್ರ ಉಪನ್ಯಾಸಕಿ ಚೈತ್ರಾ ಯು. ಭಂಡಾರಿ ಮಾರ್ಗದರ್ಶನ ನೀಡಿದ್ದಾರೆ. ಇವರ ಸಾಧನೆಗೆ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಡಾ.ಕೆ.ಸಿ.ನಾಯ್ಕ್, ಕಾರ್ಯದರ್ಶಿ ಸಂಜಿತ್ ನಾಯ್ಕ್, ಪ್ರಧಾನ ಸಲಹೆಗಾರ ರಮೇಶ್ ಕೆ., ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ ಮೂರ್ತಿ ಎಚ್., ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲ ರವಿಶಂಕರ ಹೆಗಡೆ ಹಾಗೂ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.