Home ಕರ್ನಾಟಕ ರೇಣುಕಾಸ್ವಾಮಿ ಕೊಲೆ ಪ್ರಕರಣ | ತುಮಕೂರು ಕಾರಾಗೃಹಕ್ಕೆ ನಾಲ್ವರು ಆರೋಪಿಗಳ ಸ್ಥಳಾಂತರಕ್ಕೆ ಕೋರ್ಟ್‌ ಆದೇಶ

ರೇಣುಕಾಸ್ವಾಮಿ ಕೊಲೆ ಪ್ರಕರಣ | ತುಮಕೂರು ಕಾರಾಗೃಹಕ್ಕೆ ನಾಲ್ವರು ಆರೋಪಿಗಳ ಸ್ಥಳಾಂತರಕ್ಕೆ ಕೋರ್ಟ್‌ ಆದೇಶ

21
0

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರ ಮುಂದೆ ಶರಣಾಗತಿಯಾಗಿದ್ದ ನಾಲ್ವರು ಆರೋಪಿಗಳು ತುಮಕೂರು ಕಾರಾಗೃಹಕ್ಕೆ ವರ್ಗಾವಣೆ ಮಾಡಿ ನಗರದ 24ನೆ ಎಸಿಎಂಎಂ ನ್ಯಾಯಾಲಯವು ಸೋಮವಾರ ಆದೇಶಿಸಿದೆ.

ನ್ಯಾಯಾಲಯ ಆದೇಶ ಅನುಸಾರ ಆರೋಪಿಗಳಾದ ಕಾರ್ತಿಕ್, ನಿಖಿಲ್ ನಾಯಕ್, ಕೇಶವಮೂರ್ತಿ ಹಾಗೂ ರವಿಶಂಕರ್ ಎಂಬುವರು ತುಮಕೂರು ಕಾರಾಗೃಹಕ್ಕೆ ಸ್ಥಳಾಂತರವಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತುಮಕೂರು ಜಿಲ್ಲಾ ಕಾರಾಗೃಹ ವರ್ಗಾವಣೆ ಸಂಬಂಧ ವಿಚಾರಣೆ ಕೈಗೊಂಡ ನ್ಯಾಯಾಲಯದ ಮುಂದೆ ಸರಕಾರಿ ಪರ ಅಭಿಯೋಜಕ(ಎಸ್‍ಪಿಪಿ) ಪ್ರಸನ್ನ ಕುಮಾರ್ ವಾದ ಮಂಡಿಸಿದರು. ಹತ್ಯೆ ಪ್ರಕರಣದಲ್ಲಿ ಪೊಲೀಸರಿಗೆ ಶರಣಾಗಿದ್ದ ನಾಲ್ವರನ್ನು ವಿಚಾರಣೆ ನಡೆಸಿದಾಗ ನಟ ದರ್ಶನ್ ಹಾಗೂ ಅವರ ಸಹಚರರು ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಬಾಯ್ಬಿಟ್ಟಿದ್ದರು. ಈ ಮಾಹಿತಿ ಆಧರಿಸಿ ಉಳಿದ 13 ಮಂದಿಯನ್ನು ಬಂಧಿಸಲಾಗಿತ್ತು.

ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ನಾಲ್ವರು ಆರೋಪಿಗಳ ಮೇಲೆ ವಿಚಾರಣಾಧೀನ ಕೈದಿಗಳು ಹಲ್ಲೆ ಮಾಡುವ ಸಾಧ್ಯತೆಯಿದೆ. ಹೀಗಾಗಿ ತುಮಕೂರು ಕಾರಾಗೃಹಕ್ಕೆ ವರ್ಗಾಯಿಸಬೇಕು ಎಂದು ವಿವರಿಸಿದರು.

ಇದಕ್ಕೆ ಆರೋಪಿಗಳ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಪ್ರಸನ್ನ ಕುಮಾರ್ ಅವರ ವಾದವನ್ನು ಪುರಸ್ಕರಿಸಿ ಆರೋಪಿಗಳ ಸ್ಥಳಾಂತರಕ್ಕೆ ಆದೇಶಿಸಿದ್ದಾರೆ.

LEAVE A REPLY

Please enter your comment!
Please enter your name here