✍️ ನಾರಾಯಣಸ್ವಾಮಿ ಸಿ.ಎಸ್ |
ಹೊಸಕೋಟೆ, ಡಿ.25: ಹತ್ತು, ಹದಿನೈದು ದಿನಗಳಿಂದ ವಾತಾವರಣದಲ್ಲಿ ಏರು ಪೇರಾಗುತ್ತಿದೆ. ದಿನಪೂರ್ತಿ ಮೋಡ ಕವಿದ ವಾತಾವರಣ, ಅಪರೂಪಕ್ಕೆ ಕಾಣಿಸಿಕೊಂಡು ಮಾಯವಾಗುವ ಬಿಸಿಲು. ಮಧ್ಯಾಹ್ನದ ಸಮಯದಲ್ಲೂ ಬಿಸಿಲಿನ ಬದಲಿಗೆ ಹೆಚ್ಚುತ್ತಿರುವ ಚಳಿ ರೇಷ್ಮೆ ಬೆಳೆಗೆ ಮಾರಕವಾಗಿದೆ.
ಈ ವೈಪರೀತ್ಯ ವಾತಾವರಣದಿಂದ ರೇಷ್ಮೆ ಹುಳುಗಳಲ್ಲಿ ಹಾಲುತೊಂಡೆ ಮತ್ತು ಸುಣ್ಣಕಟ್ಟು ರೋಗ ಹೆಚ್ಚು ವ್ಯಾಪಿಸುತ್ತಿದೆ. ಜೀವನ ಚಕ್ರದ ಅವಧಿ ಮುಗಿದಾದ ಮೇಲೆ ಮೂರ್ನಾಲ್ಕು ದಿನಕ್ಕೆ ಹಣ್ಣಾಗುತ್ತಿರುವ ರೇಷ್ಮೆ ಹುಳು. ಇದರಿಂದ ರೇಷ್ಮೆ ಹುಳು ಸಾಕಣೆಗೆ ಬೀಳುವ ವೆಚ್ಚ ದುಪ್ಪಟ್ಟಾಗುತ್ತಿದೆ.
ಮೋಡ ಮುಸುಕಿದ ವಾತಾವರಣದಿಂದ ಹಣ್ಣಾದ ಹುಳುಗಳನ್ನು ಬಿಟ್ಟಿರುವಚಂದ್ರಿಕೆಗಳನ್ನು ಶೆಡ್ನಿಂದ ಹೊರತೆಗೆದು ಬಿಸಿಲಿಗೆ ಒಡ್ಡಿರುವುದು
‘ಹೆಚ್ಚಿದ ಥಂಡಿ ವಾತಾವರಣದಲ್ಲಿ ರೇಷ್ಮೆಹುಳು ಹಣ್ಣಾಗುವುದು ಮೂರ್ನಾಲ್ಕು ದಿನಕ್ಕೆ ಒಮ್ಮೊಮ್ಮೆ ನಾಲ್ಕೈದು ದಿನಗಳಷ್ಟು ತಡವಾಗುತ್ತಿದೆ. ತಡವಾದಷ್ಟೂ ಹೆಚ್ಚಿನ ಪ್ರಮಾಣದಲ್ಲಿ ಹಿಪ್ಪು ನೇರಳೆ ಸೊಪ್ಪನ್ನು ಒದಗಿಸಬೇಕಾಗುತ್ತದೆ. ಅಷ್ಟೇ ಅಲ್ಲದೇ ವಾತಾವರಣದಲ್ಲಿನ ಥಂಡಿಯಿಂದ ರೇಷ್ಮೆ ಹುಳು ಸರಿಯಾಗಿ ರೇಷ್ಮೆ ಗೂಡನ್ನು ಕಟ್ಟುವುದಿಲ್ಲ.
ಕಳಪೆ ಗುಣಮಟ್ಟದ ರೇಷ್ಮೆಗೂಡಿಗೆ ಸೂಕ್ತ ಬೆಲೆಯೂ ಸಿಗದು. ಒಂದು ಕಡೆ ಸೂಕ್ತ ಬೆಲೆ ಇಲ್ಲ. ಇನ್ನೊಂದು ಕಡೆ ದುಪ್ಪಟ್ಟು ಬಂಡವಾಳ ಹಾಕಬೇಕಾದ ಸ್ಥಿತಿ ರೈತರದ್ದು, ಇದೇ ರೀತಿ ಥಂಡಿ ವಾತಾವರಣ ಇನ್ನೊಂದಷ್ಟು ದಿನವೂ ಮುಂದುವರಿದರೆ ಹಿಂಗಾರು ಮಳೆಗಾಲದಲ್ಲಿ ಬಿತ್ತನೆ ಮಾಡಿದ ರಾಗಿ ಕಾಳು ಕಟಾವು ಮಾಡುವ ಹಂತಕ್ಕೆ ಬಂದಿದ್ದು, ಅದು ಕೂಡ ಹಾಳಾಗುವ ಆತಂಕ ರೈತರಲ್ಲಿ ಮೂಡಿದೆ.
ಹೆಚ್ಚುವರಿ ಹಿಪ್ಪು ನೇರಳೆ ಒದಗಿಸಬೇಕು
ವಾತಾವರಣದಲ್ಲಿ ಚಳಿ ಹಾಗೂ ಥಂಡಿ ವಾತಾವರಣ ಹೆಚ್ಚುವುದರಿಂದ ರೇಷ್ಮೆ ಹುಳುಗಳು ಸಹಜವಾಗಿಯೇ ಹಣ್ಣಾಗುವುದು ತಡವಾಗುತ್ತದೆ. ಸಾಮಾನ್ಯವಾಗಿ 28 ದಿನಗಳಲ್ಲಿ ಹಣ್ಣಾಗುವ ರೇಷ್ಮೆ ಹುಳುಗಳು ಈ ವಾತಾವರಣದಿಂದ ನಾಲ್ಕೈದು ದಿನಗಳು ತಡವಾಗಿ ಹಣ್ಣಾಗುತ್ತವೆ. ಹಣ್ಣಾಗುವುದಕ್ಕೂ ಮೊದಲು ಪ್ರತಿದಿನ 100 ಮೊಟ್ಟೆಯಷ್ಟು ಹುಳುಗಳಿಗೆ ಐದಾರು ಮೊಟ್ಟೆಗಳಷ್ಟು ಹಿಪ್ಪು ನೇರಳೆ ಸೊಪ್ಪನ್ನು ನೀಡಬೇಕಾಗುತ್ತದೆ. ಒಂದು ಮೂಟೆ ಹಿಪ್ಪು ನೇರಳೆ ಸೊಪ್ಪಿಗೆ 400 ರೂ.ಇದ್ದು 20 ಮೂಟೆಗೆ 8 ಸಾವಿರ ರೂ. ಬಂಡವಾಳ ಬೇಕಾಗುತ್ತದೆ.