ನವದೆಹಲಿ: ಸೋಮವಾರ ಸಂಸತ್ತಿನ ಬಜೆಟ್ ಅಧಿವೇಶನ ಪುನರ್ ಆರಂಭವಾದಾಗ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ತೃಣಮೂಲ ಕಾಂಗ್ರೆಸ್ ಬೆಂಬಲಿಸುತ್ತದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.
ಲೋಕಸಭೆಯ ಹಲವು ವಿರೋಧ ಪಕ್ಷದ ಸದಸ್ಯರು ಮಂಡಿಸಿರುವ ಅವಿಶ್ವಾಸ ನಿರ್ಣಯಕ್ಕೆ ಪಕ್ಷ ಯಾವಾಗಲೂ ಬೆಂಬಲಿಸಲಿದೆ ಎಂದು ಟಿಎಂಸಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
ಪಕ್ಷಪಾತ” ರೀತಿಯಲ್ಲಿ ವರ್ತಿಸಿದ ಆರೋಪದ ಮೇಲೆ ಕೆಳಮನೆಯ ಸ್ಪೀಕರ್ ಸ್ಥಾನದಿಂದ ಓಂ ಬಿರ್ಲಾ ಅವರನ್ನು ಪದಚ್ಯುತಗೊಳಿಸುವ ನಿರ್ಣಯವನ್ನು ಮಂಡಿಸಲು 118 ವಿರೋಧ ಪಕ್ಷದ ಸಂಸದರು ಅವಿಶ್ವಾಸ ನಿರ್ಣಯದ ನೋಟಿಸ್ ಸಲ್ಲಿಸಿದ್ದಾರೆ. ಆದರೆ ಟಿಎಂಸಿ ಸಂಸದರು ಈ ಹಿಂದೆ ನೋಟಿಸ್ಗೆ ಸಹಿ ಹಾಕಿರಲಿಲ್ಲ.
ನಾವು ಯಾವಾಗಲೂ ಅವಿಶ್ವಾಸ ನಿರ್ಣಯ ಪರವಾಗಿದ್ದೇವೆ. ನಾವು ಅದನ್ನು ಆತುರದಿಂದ ಬಯಸಲಿಲ್ಲ. ಅದಕ್ಕಾಗಿಯೇ ಬಜೆಟ್ ಅಧಿವೇಶನದ ಕೊನೆಯ ಅರ್ಧದಲ್ಲಿ, ಮೂರು ದಿನಗಳ ನಂತರ ಅದನ್ನು ಸಲ್ಲಿಸಿ ಎಂದು ನಾವು ಹೇಳಿದ್ದೇವೆ” ಎಂದು ಟಿಎಂಸಿ ನಾಯಕ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದರು.
ಅನಾರೋಗ್ಯಕ್ಕೆ ಒಳಗಾದವರನ್ನು ಹೊರತುಪಡಿಸಿ ಬಹುತೇಕ ಎಲ್ಲಾ ಟಿಎಂಸಿ ಸಂಸದರು, ಸೋಮವಾರ ಅವಿಶ್ವಾಸ ನಿರ್ಣಯವನ್ನು ಪರಿಗಣಿಸುವಾಗ ಲೋಕಸಭೆಯಲ್ಲಿ ಹಾಜರಿರುವರು. ಈ ವಿಚಾರದಲ್ಲಿ ಇಂಡಿಯಾ ಬಣದ ನಾಯಕರೊಂದಿಗೆ ಟಿಎಂಸಿ ನಾಯಕರು ಸಂಪರ್ಕದಲ್ಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸ್ಪೀಕರ್ ಓಂ ಬಿರ್ಲಾರ ಅವರ ಪದಚ್ಯುತಿ ಕೋರಿ ಸಲ್ಲಿಸಲಾಗಿರುವ ನೋಟಿಸ್ ಸೋಮವಾರ ಲೋಕಸಭೆಯಲ್ಲಿ ಚರ್ಚೆಗೆ ಬರಲಿದೆ. ಸ್ಪೀಕರ್ ಒಪ್ಪಿಗೆ ನೀಡಿದ ನಂತರ, 50 ಸದಸ್ಯರು ಎದ್ದು ನಿಂತರೆ ನೋಟಿಸ್ ನನ್ನು ಪರಿಗಣಿಸಲಾಗುತ್ತದೆ. ತದನಂತರ ಚರ್ಚೆಗೆ ದಿನಾಂಕ ನಿಗದಿಪಡಿಸಲಾಗುತ್ತದೆ. ಚರ್ಚೆಯ ನಂತರ ಮತದಾನ ನಡೆಯುತ್ತದೆ. 50 ಸದಸ್ಯರು ನೋಟಿಸ್ಗೆ ಬೆಂಬಲವಾಗಿ ನಿಲ್ಲದಿದ್ದರೆ, ನಿರ್ಣಯವನ್ನು ಮಂಡಿಸಲು ಸಾಧ್ಯವಿಲ್ಲ. ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಸಂಸದರು ಸದನದಲ್ಲಿ ಹಾಜರಿರುವಂತೆ ವಿಪ್ ಜಾರಿಗೊಳಿಸಿವೆ.
ಈ ಸಂದರ್ಭದಲ್ಲಿ ಸ್ಪೀಕರ್ ಬಿರ್ಲಾ ಅವರು ಸದನದಲ್ಲಿ ಹಾಜರಾಗಲು ಸಂವಿಧಾನವು ಅವಕಾಶ ನೀಡುತ್ತದೆ. ಅವರು ತನ್ನನ್ನು ತಾನು ಸಮರ್ಥಿಸಿಕೊಳ್ಳಬಹುದು ಮತ್ತು ನಿರ್ಣಯದ ಮೇಲೆ ಮತ ಹಾಕಬಹುದು ಆದರೆ ವಿಷಯದ ಚರ್ಚೆಯ ಸಮಯದಲ್ಲಿ ಸ್ಪೀಕರ್ ಪೀಠದಲ್ಲಿ ಕೂರುವಂತಿಲ್ಲ.
