ಮಡಿಕೇರಿ: ದಕ್ಷಿಣ ಕೊಡಗಿನಲ್ಲಿ ಅರಣ್ಯದ ಅಂಚಿನಲ್ಲಿರುವ ಗ್ರಾಮಗಳಲ್ಲಿನ ರೈತರಿಗೆ ಕಾಡುಪ್ರಾಣಿಗಳ ದಾಳಿ ದೊಡ್ಡ ಸಮಸ್ಯೆಯಾಗಿ ಹೋಗಿದೆ. ವಿಶೇಷವಾಗಿ ಕಾಡಾನೆ ಮತ್ತು ಕಾಡುಹಂದಿಗಳ ದಾಳಿಯಿಂದ ಅಕ್ಕಿ, ಜೋಳ ಸೇರಿದಂತೆ ಹಲವು ಬೆಳೆಗಳು ನಾಶವಾಗುತ್ತಿದ್ದು, ಇದರಿಂದ ಅನೇಕ ರೈತರಿಗೆ ಕೃಷಿಯನ್ನೇ ಕೈಬಿಡುವ ಪರಿಸ್ಥಿತಿಯೂ ಎದುರಾಗಿದೆ.
ಆದರೆ, ಕುಶಾಲನಗರ ಭಾಗದ ರೈತರು ಕೃಷಿ ಕೈಬಿಡುವ ಬದಲು ಹೊಸ ಮಾರ್ಗ ಕಂಡುಕೊಳ್ಳುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ. ಅದುವೇ ಅತೀ ಹೆಚ್ಚು ಬೇಡಿಕೆಯಲ್ಲಿರುವ ಚಿಯಾ ಸೀಡ್ ಬೆಳೆ.
ಕುಶಾಲನಗರದ ಮರೂರು, ಚಿನ್ನೆಹಳ್ಳಿ ಮತ್ತು 6ನೇ ಹೊಸಕೋಟೆ ಭಾಗಗಳಲ್ಲಿ ಚಿಯಾ ಬೆಳೆ ಇದೀಗ ಜನಪ್ರಿಯವಾಗುತ್ತಿದೆ. ಕಡಿಮೆ ವೆಚ್ಚದಲ್ಲಿ ಬೆಳೆದು ಉತ್ತಮ ಆದಾಯ ನೀಡುವ ಈ ಬೆಳೆ ರೈತರಿಗೆ ಆಶಾಕಿರಣವಾಗಿದೆ.
ಮರೂರು ಗ್ರಾಮದ ರೈತ ಮಹೇಶ್ ಅವರು ಸುಮಾರು 8 ವರ್ಷಗಳ ಹಿಂದೆ ಚಿಯಾ ಬೆಳೆಯನ್ನು ಪ್ರಯೋಗಾತ್ಮಕವಾಗಿ ಬೆಳೆದಿದ್ದರು. ಇತರ ರೈತರು ಕಾಡುಪ್ರಾಣಿಗಳ ದಾಳಿಯಿಂದ ಬೆಳೆ ನಷ್ಟ ಅನುಭವಿಸುತ್ತಿದ್ದ ಸಂದರ್ಭದಲ್ಲಿ ಮಹೇಶ್ ಬೆಳೆದ ಚಿಯಾ ಬೆಳೆಗೆ ಯಾವುದೇ ಹಾನಿಯಾಗದೆ ಉತ್ತಮ ಲಾಭ ಸಿಕ್ಕಿತ್ತು. ಇದನ್ನು ಗಮನಿಸಿದ ಇತರ ರೈತರೂ ಈ ಬೆಳೆಯನ್ನು ಬೆಳೆಸಲು ಪ್ರಾರಂಭಿಸಿದರು.
ಈಗ ಕುಶಾಲನಗರ ಪ್ರದೇಶದಲ್ಲಿ 30ಕ್ಕೂ ಹೆಚ್ಚು ರೈತರು ಚಿಯಾ ಬೆಳೆಯನ್ನು ಬೆಳೆಸುತ್ತಿದ್ದಾರೆ. ಒಣಗಿಸಿದ ಚಿಯಾ ಬೀಜಗಳನ್ನು ರೈತರು ಮಾರುಕಟ್ಟೆಗೆ ಕೊಂಡೊಯ್ಯುತ್ತಿದ್ದು, ಇದಕ್ಕೆ ಉತ್ತಮ ಬೆಲೆಯೂ ಸಿಗುತ್ತಿದೆ.
ಚಿಯಾ ಬೆಳೆಗೆ ಸುಮಾರು 100ರಿಂದ 120 ದಿನಗಳ ಅವಧಿ ಸಾಕಾಗುತ್ತದೆ. ಈ ಬೆಳೆಗೆ ಹೆಚ್ಚಿನ ನಿರ್ವಹಣೆ ಅಗತ್ಯವಿಲ್ಲ. ಒಂದು ಎಕರೆ ಬೆಳೆ ಬೆಳೆಸಲು ಸುಮಾರು 25 ಸಾವಿರ ರೂಪಾಯಿ ವೆಚ್ಚವಾಗುತ್ತದೆ. ಅದರಿಂದ ಸುಮಾರು 6 ಕ್ವಿಂಟಲ್ ಬೀಜ ದೊರೆಯುವ ಸಾಧ್ಯತೆ ಇದೆ. ಈ ವರ್ಷ ಒಂದು ಕ್ವಿಂಟಲ್ ಚಿಯಾ ಬೀಜಕ್ಕೆ ಸುಮಾರು 16 ಸಾವಿರ ರೂಪಾಯಿ ಬೆಲೆ ಸಿಕ್ಕಿದೆ ಎಂದು ರೈತ ಮಹೇಶ್ ಅವರು ಹೇಳಿದ್ದಾರೆ.
ಮತ್ತೊಬ್ಬ ರೈತ ಮಹಾದೇವ್ ಅವರು ಮಾತನಾಡಿ, ಅರಣ್ಯ ಅಂಚಿನ ಗ್ರಾಮಗಳಲ್ಲಿ ಕೃಷಿ ಮಾಡುವುದು ಸವಾಲಿನ ಕೆಲಸವಾಗಿದ್ಜು, ಕಾಡುಪ್ರಾಣಿಗಳು ಬೆಳೆಗಳನ್ನು ನಾಶ ಮಾಡುವುದರಿಂದ ರೈತರು ಸಾಲದ ಬಾಧೆಗೂ ಒಳಗಾಗುತ್ತಾರೆ. ಆದರೆ, ಚಿಯಾ ಬೆಳೆಯನ್ನು ಕಾಡುಪ್ರಾಣಿಗಳು ಮುಟ್ಟುವುದಿಲ್ಲ. ಇದೇ ದೊಡ್ಡ ವರವಾಗಿದೆ. ಇದರ ಪರಿಣಾಮವಾಗಿ ಕೃಷಿಯನ್ನು ಮತ್ತೆ ಮುಂದುವರಿಸಲು ಧೈರ್ಯ ಮಾಡುತ್ತಿದ್ದೇವೆಂದು ತಿಳಿಸಿದ್ದಾರೆ.
ಈ ಬೆಳೆಯನ್ನು ಇನ್ನೂ ಜಿಲ್ಲಾ ತೋಟಗಾರಿಕಾ ಇಲಾಖೆ ಅಧಿಕೃತ ಬೆಳೆ ಪಟ್ಟಿಯಲ್ಲಿ ಸೇರಿಸಿಲ್ಲ. ಆದರೂ ಕುಶಾಲನಗರ ರೈತ ಸಂಪರ್ಕ ಕೇಂದ್ರದ ಮೂಲಕ ರೈತರು ಮಾರ್ಗದರ್ಶನ ಮತ್ತು ಮಾಹಿತಿ ಪಡೆಯಬಹುದು ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಶಶಿಧರ್ ಅವರು ಹೇಳಿದ್ದಾರೆ.
ಕೃಷಿ ಕ್ಷೇತ್ರದಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಬೆಳೆಗಳನ್ನು ಬದಲಾಯಿಸುವುದು ಅಗತ್ಯವಾಗುತ್ತಿದ್ದು, ಕೊಡಗು ಜಿಲ್ಲೆಯ ರೈತರು ಚಿಯಾ ಬೆಳೆಯನ್ನು ಆಯ್ಕೆ ಮಾಡಿಕೊಂಡಿರುವುದು ಅದಕ್ಕೆ ಉತ್ತಮ ಉದಾಹರಣೆಯಾಗಿದೆ,
ಕಾಡುಪ್ರಾಣಿಗಳ ಕಾಟದ ನಡುವೆಯೂ ಕೃಷಿಯನ್ನು ಉಳಿಸಿಕೊಳ್ಳಲು ರೈತರು ಕಂಡುಕೊಂಡಿರುವ ಈ ಹೊಸ ದಾರಿ ಇತರರಿಗೂ ಮಾದರಿಯಾಗುತ್ತಿದೆ.
