ಬೆಂಗಳೂರು: ಇಲ್ಲಿನ ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬೃಂದಾವನ ಬಡಾವಣೆಯ ಮನೆಯೊಂದರ ಸ್ನಾನದ ಕೋಣೆಯಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಪ್ರಭುದ್ಯಾ ಎಂಬುವರ ಮೃತದೇಹ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ‘ನನ್ನ ಮಗಳನ್ನು ಹತ್ಯೆ ಮಾಡಲಾಗಿದೆ’ ಎಂದು ಮೃತಳ ತಾಯಿ ಸೌಮ್ಯ ಕೆ.ಆರ್. ಆರೋಪಿಸಿದ್ದಾರೆ.
ಶುಕ್ರವಾರ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಸೌಮ್ಯ ಕೆ.ಆರ್. ಅವರು, ‘ನನ್ನ ಮಗಳಾದ ಪ್ರಭುದ್ಯಾಳಿಗೆ ಧೈರ್ಯವಾಗಿ ಬದುಕುವುದನ್ನು ಕಲಿಸಿದ್ದೆ, ಆಕೆ ಆತ್ಮಹತ್ಯೆ ಮಾಡಿಕೊಳ್ಳುವಂಥವಳಲ್ಲ, ಯಾರೋ ಬಲವಂತವಾಗಿ ಸಾಯಿಸಿದ್ದಾರೆ’ ಎಂದು ದೂರಿದರು.
ಪ್ರತಿನಿತ್ಯ ಕಾಲೇಜಿನಿಂದ ಬಂದ ತಕ್ಷಣ ನನಗೆ ಮೆಸೇಜ್ ಮೂಲಕವಾದರೂ ಸರಿ ಅಪ್ಡೇಟ್ ಮಾಡುತ್ತಿದ್ದಳು. ಮೇ 15ರ ಮಧ್ಯಾಹ್ನ 1:30ರ ಸುಮಾರಿಗೆ ಮನೆಗೆ ಬಂದಿದ್ದಾಳೆ, 3 ಗಂಟೆಯ ವರೆಗೂ ಚೆನ್ನಾಗಿಯೇ ಇದ್ದವಳನ್ನು ಯಾರೋ ಹತ್ಯೆ ಮಾಡಿದ್ದಾರೆ ಎಂದು ಸೌಮ್ಯ ಕೆ.ಆರ್. ಆರೋಪಿಸಿದರು.
ಮನೆಯಲ್ಲಿ ಮಗಳ ಸ್ಥಿತಿ ನೋಡಿ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದೆ, ಮನೆಯಲ್ಲಿದ್ದ ಫೋನ್ ಸಹ ಇಲ್ಲ. ಪೊಲೀಸರು ಅಲ್ಲಿ ಫೊನ್ ಇರಲೇ ಇಲ್ಲ ಎಂದರು. ಫೊನ್ ಅನ್ನು ಯಾರು ತೆಗೆದುಕೊಂಡು ಹೋಗಿದ್ದಾರೆ ಎನ್ನುವುದು ಸಹ ಗೊತ್ತಿಲ್ಲ. ಯಾರಿಗಾದರೂ ದ್ವೇಷವಿದ್ದರೆ ಅದು ಈ ವ್ಯವಸ್ಥೆಯಿಂದಷ್ಟೇ ಇರಬೇಕು, ನಾನೊಬ್ಬಳು ಸಾಮಾಜಿಕ ಕಾರ್ಯಕರ್ತೆಯಾಗಿ, ಎಷ್ಟೋ ಮಕ್ಕಳ ರಕ್ಷಣೆ ಮಾಡಿದ್ದೇನೆ. ರಾಜಕಾರಣಿಗಳನ್ನು ಪ್ರಶ್ನಿಸಿದ್ದೇನೆ. ಏನಾಗಿದೆ ಎಂದು ಗೊತ್ತಾಗುತ್ತಿಲ್ಲ, ನನ್ನ ಮಗಳ ಸಾವಿಗೆ ನ್ಯಾಯ ಬೇಕು ಎಂದು ಸೌಮ್ಯ ಕೆ.ಆರ್. ಆಗ್ರಹಿಸಿದರು.
ಎರಡು ಡೆತ್ನೋಟ್ ಪತ್ತೆ: ಘಟನಾ ಸ್ಥಳದಲ್ಲಿ ಎರಡು ಡೆತ್ನೋಟ್ಗಳು ಪತ್ತೆಯಾಗಿದೆ ಎರಡು ಪತ್ರದಲ್ಲೂ ಕ್ಷಮಿಸಿ ಅಮ್ಮ.. ಎಂದಷ್ಟೇ ಇದೆ. ಆದರೆ, ಪ್ರಭುದ್ಯಾಳ ಕೈಬರಹಕ್ಕೂ ಪತ್ತೆಯಾದ ಡೆತ್ನೋಟ್ನಲ್ಲಿರುವ ಬರಹಕ್ಕೂ ವ್ಯತ್ಯಾಸ ಕಂಡುಬರುತ್ತಿದೆ. ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಘಟನೆ ವಿವರ: ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬೃಂದಾವನ ಬಡಾವಣೆಯ ಮನೆಯೊಂದರ ಸ್ನಾನದ ಕೋಣೆಯಲ್ಲಿ ಮೇ 15ರಂದು ಬುಧವಾರ ಸಂಜೆ ಏಳು ಗಂಟೆ ಸುಮಾರಿಗೆ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಪ್ರಭುದ್ಯಾ(21)ಳ ಮೃತದೇಹ ಕೈ ಹಾಗೂ ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಭರಮಪ್ಪ ಜಗಲ್ಸಾರ್, ವಿದ್ಯಾರ್ಥಿನಿ ಪ್ರಭುದ್ಯಾಳ ಕೈ ಹಾಗೂ ಕತ್ತು ಕೊಯ್ದಿದ್ದ ಹಿನ್ನೆಲೆಯಲ್ಲಿ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾಳೆ. ಇದು ಆತ್ಮಹತ್ಯೆಯೇ? ಅಥವಾ ಪರಿಚಿತರಿಂದ ಕೃತ್ಯ ನಡೆದಿದೆಯೇ ಎಂಬುದರ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಈ ಬಗ್ಗೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ‘ಅಸಹಜ ಸಾವು ಪ್ರಕರಣ’ ದಾಖಲಿಸಿಕೊಳ್ಳಲಾಗಿದೆ ಮಾಹಿತಿ ನೀಡಿದ್ದಾರೆ.