ಬೆಂಗಳೂರು, ಫೆ.28: ವಿಧಾನಸೌಧದಲ್ಲಿ ಪಾಕಿಸ್ತಾನ್ ಝಿಂದಾಬಾದ್ ಘೋಷಣೆ ಕೂಗಿದ್ದಾರೆ ಎಂಬ ಆರೋಪ ಪ್ರಕರಣ ವಿಧಾನ ಪರಿಷತ್ ನಲ್ಲೂ ಪ್ರಸ್ತಾಪವಾಗಿ ಪರಿಷತ್ ನ ಬಿಜೆಪಿ-ಕಾಂಗ್ರೆಸ್ ಸದಸ್ಯರ ಮಧ್ಯೆ ತೀವ್ರ ಜಟಾಪಟಿಗೂ ಕಾರಣವಾಯಿತು.
10 ಗಂಟೆಗೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ಪರಿಷತ್ ಬಿಜೆಪಿ ಸದಸ್ಯ ಎನ್.ರವಿಕುಮಾರ್ ಪ್ರಸ್ತಾಪಿಸಿದರು. ಈ ವೇಳೆ ಅವರು ನೀಡಿದ ‘ದೇಶದ್ರೋಹಿ ಸರ್ಕಾರ’ ಹೇಳಿಕೆ ಕಾಂಗ್ರೆಸ್ ಸದಸ್ಯರನ್ನು ಕೆರಳಿಸಿತು. ಈ ವಿಚಾರವಾಗಿ ಗದ್ದಲ ಉಂಟಾಗಿ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ‘ಅವನ ಬಾಯಿ ಬಂದ್ ಮಾಡಿ’ ಎಂದು ರವಿಕುಮಾರ್ ಅವರ ಮೇಲೆ ಏಕವಚನ ಪ್ರಯೋಗ ಮಾಡಿದರು.
ಇದರಿಂದ ರೊಚ್ಚಿಗೆದ್ದ ಬಿಜೆಪಿ ಸದಸ್ಯರು ಏಕವಚನದಲ್ಲಿ ಮಾತಾಡಿದರೆ ಸರಿ ಇರಲ್ಲವೆಂದರು. ಬಳಿಕ ರವಿಕುಮಾರ್ ಎದ್ದು ಸದನದ ಬಾವಿಗಿಳಿದರು. ರವಿಕುಮಾರ್ ಜೊತೆ ತುಳಸಿ ಮುನಿರಾಜುಗೌಡ ಮುನ್ನುಗ್ಗಿ ಹೋದರು. ಎರಡೂ ಕಡೆಯ ಸದಸ್ಯರು ಸಭಾಪತಿಯ ಕುರ್ಚಿಯ ಮುಂದೆ ಜಮಾಯಿಸಿ ತೀವ್ರ ಮಾತಿನ ಚಕಮಕಿ ನಡೆಸಿದರು.
ಪರಿಸ್ಥಿತಿಯನ್ನು ನಿಯಂತ್ರಿಸಲು ಮಾರ್ಷಲ್ಗಳು ಹರಸಾಹಸಪಟ್ಟರು. ಮಧ್ಯ ಪ್ರವೇಶಿಸಿದ ಸಚಿವ ಎಚ್.ಕೆ.ಪಾಟೀಲ್ ಎರಡೂ ಕಡೆಯವರನ್ನು ಸಮಾಧನಪಡಿಸಿದರು. ಮತ್ತು ಕ್ಷಮೆ ಕೇಳುವಂತೆ ಸಲಹೆ ನೀಡಿದರು. ಇದಕ್ಕೆ ಎನ್. ರವಿಕುಮಾರ್ ದೇಶದ ಪರವಾಗಿ ಮಾತನಾಡಿದ್ದೇನೆ, ಅದು ಕ್ಷಮೆ ಕೇಳುವ ವಿಷಯವೇ? ಎಂದರು. ಇತ್ತ ಅಬ್ದುಲ್ ಜಬ್ಬಾರ್ ನಿಮ್ಮ ಮೂಲಕ ನಾನು ಆಡಿದ ಮಾತು ವಾಪಸ್ ಪಡೆಯುತ್ತೇನೆ ಎಂದು ಹೇಳಿದರು.