Home Uncategorized ವಿಮಾನ ನಿಲ್ದಾಣದಲ್ಲಿ ಎಪ್ರಿಲ್ ವೇಳೆಗೆ ‘ಕಲಾಲೋಕ’ ಮಾರಾಟ ಮಳಿಗೆ: ಸಚಿವ ಎಂ.ಬಿ.ಪಾಟೀಲ್

ವಿಮಾನ ನಿಲ್ದಾಣದಲ್ಲಿ ಎಪ್ರಿಲ್ ವೇಳೆಗೆ ‘ಕಲಾಲೋಕ’ ಮಾರಾಟ ಮಳಿಗೆ: ಸಚಿವ ಎಂ.ಬಿ.ಪಾಟೀಲ್

25
0

ಬೆಂಗಳೂರು: ಕನ್ನಡ ನಾಡಿನ ಅಸ್ಮಿತೆಗೆ ಹೆಸರಾದ ಸರಕಾರಿ ಉದ್ದಿಮೆಗಳ ಉತ್ಪನ್ನಗಳ ಎರಡು ಮಾರಾಟ ಮಳಿಗೆಗಳು ‘ಕಲಾಲೋಕ’ ಹೆಸರಿನಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಪ್ರಿಲ್ ವೇಳೆಗೆ ಆರಂಭವಾಗಲಿವೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಶನಿವಾರ ವಿಮಾನ ನಿಲ್ದಾಣದ ಅಧಿಕಾರಿಗಳ (ಬಿಐಎಎಲ್) ಉಪಸ್ಥಿತಿಯಲ್ಲಿ ನಡೆಸಿದ ಸಭೆಯಲ್ಲಿ ಈ ಬಗ್ಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಅವರು, ಸರಕಾರಿ ಸ್ವಾಮ್ಯದ ಕೆಎಸ್‍ಡಿಎಲ್, ಕೆಎಸ್‍ಐಸಿ (ಕರ್ನಾಟಕ ರೇಶ್ಮೆ ಉದ್ಯಮ ನಿಗಮ), ಕಾಫಿ ಬೋರ್ಡ್ ಮತ್ತು ಲಿಡ್ಕರ್ ಸಂಸ್ಥೆಗಳು ತಯಾರಿಸುವ ಉತ್ಪನ್ನಗಳನ್ನು ಈ ಮಳಿಗೆಗಳಲ್ಲಿ ಮಾರಾಟ ಮಾಡಲಾಗುವುದು ಎಂದು ನುಡಿದರು.

ಅವುಗಳ ಜತೆಗೆ ನಾಡಿನಲ್ಲಿ ತಯಾರಾಗುವ ಪಾರಂಪರಿಕ ಆಟಿಕೆಗಳಾದ ಚನ್ನಪಟ್ಟಣ ಆಟಿಕೆ, ಇಳಕಲ್ ಸೀರೆ, ಲಂಬಾಣಿ ಕುಸೂತಿ ಇತ್ಯಾದಿ ಉತ್ಪನ್ನಗಳನ್ನು ವಿಮಾನ ನಿಲ್ದಾಣದ ಮಳಿಗೆಗಳಲ್ಲಿ ಮಾರಾಟಕ್ಕೆ ಲಭ್ಯವಾಗಿಸಲಾಗುತ್ತದೆ. ಇದಕ್ಕಾಗಿ, ಹೊಸದಾಗಿ ನಿರ್ಮಿಸಿರುವ ಟರ್ಮಿನಲ್-2ರ ದೇಶೀಯ ಮತ್ತು ಅಂತರ್ ರಾಷ್ಟ್ರೀಯ ನಿರ್ಗಮನ ವಲಯದಲ್ಲಿ ತಲಾ 180 ಚದುರ ಮೀಟ‌ರ್ ಗಳ ಜಾಗ ಗುರುತಿಸಲಾಗಿದೆ. ಅಲ್ಲಿ ವಿಭಿನ್ನ ಶೈಲಿಯಲ್ಲಿ ವಿನ್ಯಾಸಗೊಳಿಸಿದ ಮಳಿಗೆಗಳಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುವುದು ಎಂದು ಹೇಳಿದರು.

ನಮ್ಮ ನಾಡಿನ ಅಸ್ಮಿತೆ ಬಿಂಬಿಸುವ ಈ ಸಂಸ್ಥೆಗಳ ಉತ್ಪನ್ನಗಳನ್ನು ವಿಮಾನ ನಿಲ್ದಾಣದಲ್ಲಿನ ಗ್ರಾಹಕರಿಗೆ ಒಂದೇ ಸೂರಿನಡಿ ಸಿಗುವಂತೆ ಮಾಡುವುದು ಇದರ ಉದ್ದೇಶವಾಗಿದ್ದು, ಕೈಗಾರಿಕಾ ಇಲಾಖೆಯು ಇದರ ಉಸ್ತುವಾರಿ ವಹಿಸಲಿದೆ. ನಿಲ್ದಾಣದ ಗ್ರಾಹಕರನ್ನು ಗಮನದಲ್ಲಿ ಇರಿಸಿಕೊಂಡು ಅದಕ್ಕೆ ತಕ್ಕಂತೆ ಉತ್ಪನ್ನಗಳ ಬ್ರ್ಯಾಂಡಿಂಗ್ ಮಾಡಲು ಗಮನಹರಿಸಲಾಗುವುದು ಎಂದು ಪಾಟೀಲ್ ತಿಳಿಸಿದರು.

ಕಾಫಿ ಬೋರ್ಡ್, ಕೇಂದ್ರದ ವ್ಯಾಪ್ತಿಗೆ ಬರುತ್ತದಾದರೂ ಸ್ಥಾಪನೆಯಾಗಲಿರುವ ಮಳಿಗೆಗಳಲ್ಲಿ ಕರ್ನಾಟಕ ಮೂಲದ ಕಾಫಿ ಸ್ವಾದಗಳು ಸೇವನೆಗೆ ಲಭ್ಯವಿರುತ್ತವೆ. ಜೊತೆಗೆ, ಇಲ್ಲಿನ ವಿವಿಧ ನಮೂನೆಯ ಕಾಫಿ ಪುಡಿಯನ್ನು ಗ್ರಾಹಕರು ಕೊಳ್ಳಬಹುದಾಗಿರುತ್ತದೆ ಎಂದು ಅವರು ಹೇಳಿದರು. ಈ ವೇಳೆ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಕೆಎಸ್‍ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್, ನಿಲ್ದಾಣದ ಉಪಾಧ್ಯಕ್ಷ ವೆಂಕಟರಾಮನ್, ಕೆಎಸ್‍ಎಂಸಿಎ ವ್ಯವಸ್ಥಾಪಕ ನಿರ್ದೇಶಕ ಸಿದ್ಧಲಿಂಗಪ್ಪ ಪೂಜಾರ್ ಹಾಜರಿದ್ದರು.

LEAVE A REPLY

Please enter your comment!
Please enter your name here