ಉಡುಪಿ, ಜೂ.1: ವೈಜ್ಞಾನಿಕ ವಿಧಾನದಿಂದ ಮಾತ್ರ ಕೃಷಿಯನ್ನು ಲಾಭ ದಾಯಕವನ್ನಾಗಿ ಮಾಡಬಹುದೇ ಹೊರತು ಸರಕಾರದ ಯಾವುದೇ ಸೌಲಭ್ಯ ಆಗಲಿ, ಕರುಣೆಯಿಂದ ಅಲ್ಲ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ ಹೇಳಿದ್ದಾರೆ.
ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ ವತಿಯಿಂದ ರಜತ ಸಂಭ್ರಮದ 24ನೇ ಕಾರ್ಯಕ್ರಮದ ಪ್ರಯುಕ್ತ ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಉಡುಪಿ ಜಿಲ್ಲಾ ಕೃಷಿಕ ಸಂಘ ಹಾಗೂ ರೋಟರಿ ಐಸಿರಿ ಪರ್ಕಳ ಸಹಯೋಗ ದೊಂದಿಗೆ ಮಠದ ರಾಜಾಂಗಣದಲ್ಲಿ ಶನಿವಾರ ನಡೆದ ಎರಡು ದಿನಗಳ ಕೃಷಿ ಸಮ್ಮೇಳನದ ಉದ್ಘಾಟನಾ ಸಮಾರಂಭ ದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಕೃಷಿಯಲ್ಲಿ ನಮ್ಮ ಜ್ಞಾನದ ಶಕ್ತಿ ಉಪಯೋಗಿಸಬೇಕು ಮತ್ತು ಸರಿಯಾದವ ರಿಂದ ಮಾಹಿತಿಯನ್ನು ಪಡೆದುಕೊಳ್ಳಬೇಕು. ನಮ್ಮ ಕೃಷಿಯಲ್ಲಿ ಬದಲಾವಣೆ ಮಾಡಲು ನಾವು ತಯಾರಿರಬೇಕು. ಇದರಿಂದ ಮುಂದಿನ ಐದು ವರ್ಷಗಳಲ್ಲಿ ಉಡುಪಿ ಜಿಲ್ಲೆಯನ್ನು ಕೃಷಿಯಲ್ಲಿ ಅತ್ಯಂತ ಮುಂದುವರೆದ ಜಿಲ್ಲೆಯನ್ನಾಗಿಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಕೃಷಿ ಸಮಸ್ಯೆಗಳನ್ನು ಪರಿಹಾರ ಇಂದಿನ ಅಗತ್ಯವಾಗಿದೆ. ಕೃಷಿ ಕೇವಲ ರೈತರಿಗೆ ಮಾತ್ರವಲ್ಲ ಪ್ರತಿಯೊಂದು ಜೀವಿಗೂ ಅಗತ್ಯವಾಗಿದೆ. ಈ ಕುರಿತು ಜಾಗೃತ ರಾಗದಿದ್ದರೆ ಇಡೀ ಜೀವ ಸಂಕುಲವೇ ಉಳಿಯುವುದು ಅಸಾಧ್ಯ ಎಂದ ಅವರು, ನಾವು ಕೃಷಿಯಲ್ಲಿ ಮಾಡುತ್ತಿರುವ ತಪ್ಪುಗಳಿಂದ ನಷ್ಟ ಅನುಭವಿ ಸುತ್ತಿದ್ದೇವೆ. ಆ ತಪ್ಪುಗಳನ್ನು ಕಡಿಮೆ ಮಾಡುವ ಕಾರ್ಯ ಮಾಡಬೇಕು. ಇಂತಹ ತಪ್ಪನ್ನು ಶೇ.99 ಮಂದಿ ಮಾಡುತ್ತಿದ್ದಾರೆ. ಇದು ಬದಲಾಗಬೇಕು ಎಂದರು.
ಸಮ್ಮೇಳನವನ್ನು ಉದ್ಘಾಟಿಸಿದ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿ, ಕೃಷ್ಣನ ಹೆಸರಿನಲ್ಲಿಯೇ ಕೃಷಿ ಇದೆ. ಕೃಷಿಗೆ ಕೃಷ್ಣನ ವಿಶೇಷ ಅನುಗ್ರಹ ಇದೆ. ಪರಿಸರ ಪ್ರೇಮಿಯಾಗಿರುವ ಕೃಷ್ಣನ ಪರಿಸರ ರಕ್ಷಣೆಯೇ ಮುಖ್ಯ ಸಂದೇಶ ಆಗಿದೆ. ಕೃಷಿಯ ಕಡೆಗೆ ನಾವು ಮತ್ತೆ ಗಮನವನ್ನು ಹರಿಸಿದರೆ ಬ್ರಾಹಗ್ಮಣ್ಯ ರಕ್ಷಣೆ ಸಾಧ್ಯವಾಗುತ್ತದೆ. ಕೃಷಿ ಕ್ಷೇತ್ರಕ್ಕೆ ವಿಶೇಷ ಪ್ರೋತ್ಸಾಹ ನೀಡುವ ಕಾರ್ಯ ಆಗಬೇಕು ಎಂದರು.
ಮಠದ ದಿವಾನ ನಾಗರಾಜ್ ಆಚಾರ್ಯ, ಪ್ರಸನ್ನ ಆಚಾರ್ಯ, ಕರ್ನಾಟಕ ಬ್ಯಾಂಕ್ನ ಪ್ರದೀಪ್ ಕುಮಾರ್, ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಸಂದೀಪ್ ಕುಮಾರ್ ಮಂಜ, ನಗರಸಭೆ ಸದಸ್ಯ ಕೃಷ್ಣರಾವ್ ಕೊಡಂಚ, ನ್ಯಾಯವಾದಿ ಜಯಪ್ರಕಾಶ್ ಕೆದ್ಲಾಯ, ರಜತ ಮಹೋತ್ಸವ ಸಮಿತಿ ಸಂಚಾಲಕ ಶ್ರೀಕಾಂತ್ ಉಪಾಧ್ಯ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಾಧಕರಾದ ಮಾಧವ ಭಟ್ ತೋನ್ಸೆ, ಶ್ರೀಪತಿ ಭಟ್ ಕರಂಬಳ್ಳಿ, ಶ್ರೀನಿವಾಸ ಆಚಾರ್ಯ ಬೈಲೂರು, ಶ್ರೀಕಾಂತ ಆಚಾರ್ಯ ಪಡುಬಿದ್ರೆ, ಪ್ರಜ್ಞಾ ಮಾರ್ಪಳ್ಳಿ ಅವರನ್ನು ಸನ್ಮಾನಿಸಲಾಯಿತು.
ಮಹಾ ಸಭಾದ ಅಧ್ಯಕ್ಷ ಮಂಜುನಾಥ ಉಪಾಧ್ಯಾಯ ಸ್ವಾಗತಿಸಿದರು. ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಎಂ.ಶ್ರೀನಿವಾಸ ಬಲ್ಲಾಳ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷಿಕ ಸಂಘದ ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ಕಾರ್ಯಕ್ರಮ ನಿರೂಪಿಸಿದರು.
ಮೇಳದಲ್ಲಿ ಸುಮಾರು 100ಕ್ಕಿಂತಲೂ ಅಧಿಕ ಕೃಷಿ ಮಳಿಗೆಗಳಿದ್ದು, ಅದರಲ್ಲಿ ಕೃಷಿ ಬೀಜ, ಗೃಹೋತ್ಪನ್ನ, ಔಷಧಿ ವಸ್ತುಗಳು, ಯಂತ್ರಗಳು, ನರ್ಸರಿ ಗಿಡಗಳು, ಸಾವಯವ ಗೊಬ್ಬರ, ಕೃಷಿ ವಸ್ತುಗಳಿಂದ ತಯಾರಿಸಿದ ಆಹಾರಗಳನ್ನು ಮಾರಾಟ ಮಾಡಲಾಗುತ್ತದೆ.