Home ಕರ್ನಾಟಕ ವೈದ್ಯಕೀಯ ಕಾಲೇಜುಗಳಲ್ಲಿ ಎನ್‍ಆರ್‌ಐ ಕೋಟಾ ಕೋರಿ ಕೇಂದ್ರಕ್ಕೆ ಪತ್ರ : ಸಚಿವ ಶರಣಪ್ರಕಾಶ್ ಪಾಟೀಲ್

ವೈದ್ಯಕೀಯ ಕಾಲೇಜುಗಳಲ್ಲಿ ಎನ್‍ಆರ್‌ಐ ಕೋಟಾ ಕೋರಿ ಕೇಂದ್ರಕ್ಕೆ ಪತ್ರ : ಸಚಿವ ಶರಣಪ್ರಕಾಶ್ ಪಾಟೀಲ್

19
0

ಬೆಂಗಳೂರು : ಸರಕಾರಿ ಸ್ವಾಯತ್ತ ವೈದ್ಯಕೀಯ ಕಾಲೇಜುಗಳಲ್ಲಿ 2025-26ನೆ ಶೈಕ್ಷಣಿಕ ವರ್ಷದಿಂದ ಅನಿವಾಸಿ ಭಾರತೀಯ (ಎನ್‍ಆರ್‌ಐ) ಕೋಟಾ ಆರಂಭಿಸಲು ಸೂಪರ್ ನ್ಯೂಮರರಿ ವೈದ್ಯಕೀಯ (ಎಂಬಿಬಿಎಸ್) ಸೀಟುಗಳನ್ನು ಮಂಜೂರು ಮಾಡಬೇಕೆಂದು ಕೋರಿ ಕೇಂದ್ರ ಸರಕಾರಕ್ಕೆ ವೈದ್ಯಕೀಯ ಶಿಕ್ಷಣ ಇಲಾಖೆ ಪತ್ರ ಬರೆದಿದೆ.

ರವಿವಾರ ಈ ಸಂಬಂಧ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್, ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‍ಎಂಸಿ) ಅಧ್ಯಕ್ಷರಿಗೆ ಈ ಕುರಿತು ಪತ್ರ ಬರೆದಿದ್ದು, ರಾಜ್ಯದಲ್ಲಿರುವ 22 ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶಕ್ಕಾಗಿ 508 ಹೆಚ್ಚುವರಿ ಸೂಪರ್ ನ್ಯೂಮರರಿ ಎಂಬಿಬಿಎಸ್ ಸೀಟುಗಳನ್ನು ಸೃಷ್ಟಿಸುವ ಮೂಲಕ ಶೇ 15ರಷ್ಟು ಎನ್‍ಆರ್‌ಐ ಕೋಟಾ ಮಂಜೂರು ಮಾಡಬೇಕೆಂದು ಮನವಿ ಮಾಡಿದ್ದಾರೆ.

ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಯುಜಿ-ಎಂಬಿಬಿಎಸ್ ವಾರ್ಷಿಕ ಮಂಜೂರಾದ ಸೀಟುಗಳ ಮೇಲೆ ಹೆಚ್ಚುವರಿ ಸೀಟುಗಳನ್ನು ರಚಿಸುವುದು ಸೂಪರ್ ನ್ಯೂಮರರಿ ಉದ್ದೇಶವಾಗಿದೆ. ಪ್ರಸ್ತಕ ವೈದ್ಯಕೀಯ ಶಿಕ್ಷಣ ಇಲಾಖೆಯಡಿ 22 ಸರಕಾರಿ ವೈದ್ಯಕೀಯ ಕಾಲೇಜುಗಳು 2023-24ನೆ ಸಾಲಿನಲ್ಲಿ 3,450 ಸೀಟುಗಳ ಸಾಮರ್ಥ್ಯವನ್ನು ಹೊಂದಿದ್ದು, ಅದರಲ್ಲಿ ಶೇ.85(2,929 ಸೀಟುಗಳು) ಕರ್ನಾಟಕ ಕೋಟಾ ಮತ್ತು 521 ಅಂದರೆ ಶೇ.15 ಅಖಿಲ ಭಾರತ ಕೋಟಾ ಆಗಿದೆ ಎಂದು ವಿವರಿಸಿದ್ದಾರೆ.

‘ಈಗಾಗಲೇ ರಾಜಸ್ಥಾನ, ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಪುದುಚೇರಿಯಲ್ಲಿ ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ.7-15ರಷ್ಟು ಎನ್‍ಆರ್ ಐ ಕೋಟಾವನ್ನು ನೀಡಿರುವ, ನಿದರ್ಶನಗಳನ್ನು ಹಾಗು ಈ ರಾಜ್ಯಗಳು ಎನ್‍ಆರ್‌ಐ ವಿದ್ಯಾರ್ಥಿಗಳಿಗೆ ವಾರ್ಷಿಕ 75ಸಾವಿರ ಡಾಲರ್ ದಿಂದ 1ಲಕ್ಷ ಡಾಲರ್ ಗಿಂತ ಹೆಚ್ಚು ಶುಲ್ಕ ವಿಧಿಸಿರುವುದ್ದನ್ನು ಸಚಿವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕರ್ನಾಟಕದಲ್ಲಿ ಎನ್‍ಆರ್ ಐ ಕೋಟಾ ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಮಾತ್ರ ಅನುಮತಿಯಿದ್ದು, ಪ್ರತಿ ವಿದ್ಯಾರ್ಥಿ ವಾರ್ಷಿಕ 1ಕೋಟಿ ರೂ.ಗಳಿಂದ 2.5 ಕೋಟಿ ರೂ. ಶುಲ್ಕ ಪಾವತಿಸಬೇಕಾಗುತ್ತದೆ. ಸರಕಾರಿ ಸ್ವಾಯತ್ತ ವೈದ್ಯಕೀಯ ಕಾಲೇಜುಗಳಲ್ಲಿ ಎನ್‍ಆರ್ ಐ ಕೋಟಾ ಜಾರಿಯಾದಲ್ಲಿ ವಿದ್ಯಾರ್ಥಿಗೆ ವಾರ್ಷಿಕ 25ಲಕ್ಷ ರೂ.ಶುಲ್ಕ ನಿಗದಿಪಡಿಸಬಹುದು, ಇದು ವೈದ್ಯಕೀಯ ಶಿಕ್ಷಣ ಇಲಾಖೆಗೆ ಮೊದಲ ವರ್ಷಕ್ಕೆ 127ಕೋಟಿ ರೂ. ಮತ್ತು 5ನೆ ವರ್ಷಕ್ಕೆ 571.5ಕೋಟಿ ರೂ.ಸಂದಾಯವಾಗುತ್ತದೆ. ಈ ಸಂಸ್ಥೆಗಳನ್ನು ಶ್ರೇಷ್ಠತೆಯ ಕೇಂದ್ರವನ್ನಾಗಿ ಮಾಡಲು, ಗುಣಮಟ್ಟದ ಶಿಕ್ಷಣ, ತರಬೇತಿ, ನಿರ್ವಹಣೆ, ವೈದ್ಯಕೀಯ ಉಪಕರಣಗಳು, ಔಷಧಗಳ ಖರೀದಿ, ರೋಗಿಗಳ ಹೊರೆ ನಿರ್ವಹಣೆ, ಮೂಲಸೌಕರ್ಯ ಸುಧಾರಣೆ, ಅಧ್ಯಾಪಕರ ಸಾಮರ್ಥ್ಯ ಮತ್ತು ಸಂಶೋಧನೆಗೆ ಎನ್‍ಆರ್‌ಐ ಕೋಟಾದ ಮೂಲಕ ಹೆಚ್ಚುವರಿ ಹಣದ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಲಭ್ಯವಿರುವ ವಾರ್ಷಿಕ ಸೀಟುಗಳ ಒಳಗೆ ಎನ್‍ಆರ್‌ ಐ ಕೋಟಾವನ್ನು ರಚಿಸುವುದು ಕಾರ್ಯಸಾಧ್ಯವಲ್ಲ. ಹಾಗೆ ಮಾಡಿದರೆ ಬಡವರು ಮತ್ತು ಹಿಂದುಳಿದ ವಿದ್ಯಾರ್ಥಿಗಳಿಗೆ ಕಡಿಮೆ ಸೀಟು ಸೃಷ್ಟಿಯಾಗುತ್ತವೆ. ಇದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ನಾವು ವಿರೋಧ ಎದುರಿಸಬೇಕಾಗುತ್ತದೆ ಎಂದು ಪಾಟೀಲ್ ಆತಂಕ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here