ಮಂಗಳೂರು, ಮೇ 31: ಶಾಲಾ ಕಟ್ಟಡ ಕಾಮಗಾರಿಯ ವೇಳೆ ಸುರೇಶ್ ಎಂಬಾತ ಆಯತಪ್ಪಿ ಬಿದ್ದು ಗಂಭೀರ ಗಾಯಗೊಂಡು ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇ 30ರಂದು ಬೆಳಗ್ಗೆ ಸುರೇಶ್ ಮೂಡುಬಿದಿರೆಯ ಪ್ರಾಂತ್ಯ ಗ್ರಾಮದ ಹನುಮಾನ್ ದೇವಸ್ಥಾನದ ಬಳಿಯ ಸರಕಾರಿ ಶಾಲೆಯ ಶಾಲಾ ಕಟ್ಟಡದ ಕೆಲಸ ಮಾಡುತ್ತಿದ್ದರು. ಪೂ.11:55ರ ವೇಳೆಗೆ ಅಟ್ಟಳಿಗೆ ಮೇಲೆ ಹಾಕಿದ ಕಬ್ಬಿಣದ ಹಲಗೆ ಜಾರಿ ಸುರೇಶ್ ಬಿದ್ದು, ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಿಸದೆ ಮೇ 30ರಂದು ಸಂಜೆ 4:25ಕ್ಕೆ ಮೃತಪಟ್ಟಿದ್ದಾರೆ.
ಕಟ್ಟಡದ ಗುತ್ತಿಗೆದಾರ ಹರೀಶ್ ಶೆಟ್ಟಿ, ಉಪ ಗುತ್ತಿಗೆದಾರರಾದ ಗಿರೀಶ್ ಮತ್ತು ಯಲ್ಲಪ್ಪ ಸರಿಯಾದ ಸುರಕ್ಷತಾ ಸಾಮಗ್ರಿ ಬಳಕೆ ಮಾಡಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.