ಬೆಂಗಳೂರು: ಬಳ್ಳಾರಿ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಮನೆ ಮತ್ತು ಕಚೇರಿ, ಮತ್ತವರ ಆಪ್ತರ ನಿವಾಸಗಳ ಮೇಲೆ ನಡೆಸಿದ ದಾಳಿಯ ವೇಳೆ ಹಲವು ದಾಖಲೆಗಳು ಮತ್ತು ಲೆಕ್ಕಕ್ಕೆ ಸಿಗದ 31ಲಕ್ಷ ರೂ.ಹಣವನ್ನು ಜಾರಿ ನಿರ್ದೇಶನಾಲಯ(ಈ.ಡಿ)ದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆಂದು ಗೊತ್ತಾಗಿದೆ.
ಫೆ.10ರಿಂದ ಸತತ ಎರಡೂ ದಿನಗಳ ಕಾಲ ಪರಿಶೀಲನೆ ನಡೆಸಿದ್ದ ಈ.ಡಿ ಅಧಿಕಾರಿಗಳ ತಂಡ, ಶಾಸಕ ನಾರ ಭರತ್ ರೆಡ್ಡಿ, ಅವರ ತಂದೆ ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ಮತ್ತು ಸಂಬಂಧಿಕರ ಹಲವು ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿತ್ತು. ಶೋಧ ಕಾರ್ಯವು ರವಿವಾರ(ಫೆ.14) ರಾತ್ರಿ ಅಂತ್ಯಗೊಂಡಿತ್ತು.
ಬಳ್ಳಾರಿಯ ಗಾಂಧಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್ ವೊಂದರ ಆಧಾರದ ಮೇಲೆ ತನಿಖೆ ನಡೆಸುತ್ತಿರುವುದಾಗಿ ಈ.ಡಿ ಅಧಿಕಾರಿಗಳು ಮಾಹಿತಿ ನೀಡಿದೆ. ಸೂರ್ಯ ನಾರಾಯಣ ರೆಡ್ಡಿ, ಭರತ್ ರೆಡ್ಡಿ ಮತ್ತು ಇತರರಿಗೆ ಸಂಬಂಧಿಸಿದ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ)2002ರ ಅಡಿಯಲ್ಲಿ ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ದಾಳಿ ನಡೆಸಲಾಗಿತ್ತು ಎಂದು ತಿಳಿಸಲಾಗಿದೆ.