ಮೈಸೂರು ಜಿಲ್ಲೆಯ ತಮ್ಮ ಕ್ಷೇತ್ರದಲ್ಲಿ ಸಮುದಾಯ ಭವನಗಳನ್ನು ನಿರ್ಮಿಸಲು ಐತಿಹಾಸಿಕ ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದ ಹಣವನ್ನು ಬಳಸಿಕೊಳ್ಳಲು ಶಾಸಕರೊಬ್ಬರಿಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಜೆಡಿಎಸ್ ಮಂಗಳವಾರ ಬಿಜೆಪಿಯನ್ನು ತೀವ್ರವಾಗಿ ಟೀಕಿಸಿದೆ. ಬೆಂಗಳೂರು: ಮೈಸೂರು ಜಿಲ್ಲೆಯ ತಮ್ಮ ಕ್ಷೇತ್ರದಲ್ಲಿ ಸಮುದಾಯ ಭವನಗಳನ್ನು ನಿರ್ಮಿಸಲು ಐತಿಹಾಸಿಕ ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದ ಹಣವನ್ನು ಬಳಸಿಕೊಳ್ಳಲು ಶಾಸಕರೊಬ್ಬರಿಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಜೆಡಿಎಸ್ ಮಂಗಳವಾರ ಬಿಜೆಪಿಯನ್ನು ತೀವ್ರವಾಗಿ ಟೀಕಿಸಿದೆ.
ಸ್ವಯಂ ಘೋಷಿತ ಧರ್ಮ ರಕ್ಷಕರು ದೇಗುಲದ ಸಂಪತ್ತನ್ನು ಹಣ ಲೂಟಿ ಮಾಡುವ ನಾಚಿಕೆಗೇಡಿನ ಅವಕಾಶ ಎಂಬಂತೆ ನಡೆಸಿಕೊಳ್ಳುತ್ತಿದ್ದಾರೆ. ಇದರಿಂದ ಅವರು ಎಷ್ಟು ಕೀಳು ಮಟ್ಟಕ್ಕೆ ಇಳಿಯುತ್ತಾರೆ ಎಂಬುದು ಗೊತ್ತಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ನಂಜನಗೂಡು ಕ್ಷೇತ್ರದ ಬಿಜೆಪಿ ಶಾಸಕ ಹರ್ಷವರ್ಧನ್ ದೇವಸ್ಥಾನದ ಹಣ ಬಳಸಿದ್ದು, ದೇವರಿಗೆ ಮಾಡಿದ ಅವಮಾನ. ಮತ್ತೊಮ್ಮೆ ಕೇಸರಿ ಪಕ್ಷದ ಬಣ್ಣ ಬಯಲಾಗಿದೆ. ಯೋಜನೆಗಳ ಹೆಸರಿನಲ್ಲಿ ಬಿಜೆಪಿ ದೇವಸ್ಥಾನದ ಹಣವನ್ನು ಹೇಗೆ ಲಪಟಾಯಿಸಿದೆ ಎಂಬುದನ್ನು ಈ ಬೆಳವಣಿಗೆ ತೋರಿಸುತ್ತದೆ ಎಂದು ಅವರು ಹೇಳಿದರು.
ಕಾನೂನಿನ ಪ್ರಕಾರ, ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನಗಳ ಆದಾಯವನ್ನು ಅದೇ ದೇವಾಲಯದ ಜೀರ್ಣೋದ್ಧಾರಕ್ಕೆ ಮಾತ್ರ ಬಳಸಿಕೊಳ್ಳಬೇಕು. ಆದರೆ, ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಚುನಾವಣೆಗೆ ಹಣ ಬಳಸಲು ಮುಂದಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.
ಆ ಪಕ್ಷ ಮಾಡಿದ ಕೃತ್ಯಕ್ಕೆ ಶ್ರೀಕಂಠೇಶ್ವರ ದೇವರ ಶಾಪ ತಟ್ಟಲಿದೆ. ಸಮುದಾಯ ಭವನಗಳನ್ನು ನಿರ್ಮಿಸಲು ದೇವಾಲಯದ ಹಣ ಏಕೆ ಬೇಕು? ಕ್ಷೇತ್ರಕ್ಕೆ ಮೀಸಲಿಟ್ಟ ಹಣ, ವಿಶೇಷ ಅನುದಾನ ಎಲ್ಲಿ ಹೋಯಿತು?. ತನ್ನ ಶಾಸಕರು ದೇವರ ಹುಂಡಿಯನ್ನು ಬಳಸಿಕೊಳ್ಳುವ ಮೂರ್ಖ ಪ್ರಯತ್ನವನ್ನು ಬಿಜೆಪಿ ಸರ್ಕಾರ ನಿಲ್ಲಿಸಬೇಕು. ಈ ಕುರಿತು ನೀಡಿರುವ ಆದೇಶವನ್ನು ಬಿಜೆಪಿ ಸರ್ಕಾರ ಹಿಂಪಡೆಯಬೇಕು. ದೇವಸ್ಥಾನದ ಹಣವನ್ನು ದೇವಸ್ಥಾನದ ಅಭಿವೃದ್ಧಿಗೆ ಮಾತ್ರ ಬಳಸಬೇಕು ಎಂದು ಹೇಳಿದರು.
ನಂಜನಗೂಡು ಬಿಜೆಪಿ ಶಾಸಕ ಬಿ. ಹರ್ಷವರ್ಧನ್ ಅವರು ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದ ನಿಧಿಯಿಂದ ವಿವಿಧ ಜನಾಂಗದವರ ಸಮುದಾಯ ಭವನಗಳನ್ನು ನಿರ್ಮಿಸಲು ₹8 ಕೋಟಿ ಮಂಜೂರು ಮಾಡಿಸಿಕೊಂಡಿದ್ದಾರೆ. ಶಾಸಕರ ಕೋರಿಕೆಯಂತೆ ಎಲ್ಲ ಕಾಮಗಾರಿಗಳಿಗೆ ₹8 ಕೋಟಿ ಅನುದಾನವನ್ನು ಶ್ರೀಕಂಠೇಶ್ವರ ದೇವಸ್ಥಾನದ ನಿಧಿಯಿಂದ ಭರಿಸಲು ಮುಖ್ಯಮಂತ್ರಿ ಫೆ. 8ರಂದು ಅನುಮೋದನೆ ನೀಡಿದ್ದರು.