ಉಡುಪಿ: ಕೇಂದ್ರದಲ್ಲಿರುವ ಕೋಮುವಾದಿ ಸರಕಾರದ ಕೆಲವರು ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ಒಂದು ವೇಳೆ ಅವರು ಸಂವಿಧಾನ ಬದಲಾವಣೆಗೆ ಕೈ ಹಾಕಿದರೆ ನಾವೆಲ್ಲರೂ ಇನ್ನೊಂದು ಭೀಮಾ ಕೋರೆಗಾಂವ್ ಯುಧ್ಧಕ್ಕೆ ಸಿದ್ಧರಾಗಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್ ಹೇಳಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಪಡುಬಿದ್ರಿ ಶಾಖೆ ವತಿಯಿಂದ ಪಡುಬಿದ್ರಿ ಬಸ್ ನಿಲ್ದಾಣದಲ್ಲಿ ಸೋಮವಾರ ಆಯೋಜಿಸ ಲಾದ ಭೀಮಾ ಕೋರೆಗಾಂವ್ ಯುದ್ಧದ 206ನೇ ವಿಜಯೋತ್ಸವ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಬ್ರಾಹ್ಮಣ ಪೇಶ್ವೆಗಳ ಮನುವಾದಿ ಸಂವಿಧಾನದ ಆಡಳಿತದ ವಿರುದ್ಧ ಸಿಡಿದೆದ್ದ ಮಹರ್ ಸೈನಿಕರು, ಪೇಶ್ವೆ ಸೈನಿಕರನ್ನು ಸದೆಬಡಿದು ಪೇಶ್ವೆ ಆಡಳಿತವನ್ನೇ ಕೊನೆಗಾಣಿಸಿದ್ದರು. ಅದೇ ರೀತಿ ನಾವು ಈಗಿನ ಕೋಮುವಾದಿ ಸರಕಾರವನ್ನು ಕಿತ್ತೊಗೆಯಬೇಕಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಮಾತನಾಡಿ, 1818ರಲ್ಲಿ ನಡೆದ ಭೀಮಾಕೋರೇಗಾಂವ್ ಯುದ್ಧದ ವಿಜಯೋತ್ಸವವು ಭಾರತದ ಮೂಲನಿವಾಸಿಗಳ ಸ್ವಾಭಿಮಾನದ ವಿಜಯೋತ್ಸವ. ಅದು ಮೂಲನಿವಾಸಿಗಳ ಅಸ್ಮಿತೆಯ ವಿಜಯೋತ್ಸವ ಎಂದರು.
ಜಾತಿ ತಾರತಮ್ಯವನ್ನೇ ಕಾನೂನು ಮಾಡಿ ಆಡಳಿತ ನಡೆಸುತ್ತಿದ್ದ ಬ್ರಾಹ್ಮಣ ಪೇಶ್ವೆಗಳ ಮರಾಠ 28000 ಸೈನಿಕರನ್ನು ಕೇವಲ 500 ಮಹರ್ ಸೈನಿಕರು ಸಿಧ್ಧ ನಾಕನ ನೇತೃತ್ವದಲ್ಲಿ ಕೇವಲ 12 ಗಂಟೆಯ ಯುದ್ಧದಲ್ಲಿ ಸೋಲಿಸಿ ಜಾತಿ ತಾರತಮ್ಯದ ವಿರುದ್ಧ ಸೇಡು ತೀರಿಸಿಕೊಂಡರು. ಈ ನೈಜ ಘಟನೆಯ ಬಗ್ಗೆ ಯಾವುದೇ ಭಾರತದ ಇತಿಹಾಸಕಾರರು ಪ್ರಸ್ತಾಪಿಸದೇ ಇರುವುದು ಮನುವಾದಿ ಮನಸ್ಸಿನ ಪ್ರತಿಬಿಂಬವಾಗಿದೆ ಎಂದು ಅವರು ಆರೋಪಿಸಿದರು.
ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಪರಮೇಶ್ವರ ಉಪ್ಪೂರು, ಭಾಸ್ಕರ ಮಾಸ್ಟರ್, ಶ್ರೀಧರ ಕುಂಜಿ ಬೆಟ್ಟು, ರಾಜ್ಯ ಮಹಿಳಾ ಸಂಘಟನಾ ಸಂಚಾಲಕಿ ವಸಂತಿ ಶಿವಾನಂದ, ಆಶೋಕ ಕೊಂಚಾಡಿ, ಶಿವಾನಂದ ಬಿರ್ತಿ, ಸುಕೇಶ್ ಪಡುಬಿದ್ರಿ, ವಿಠಲ ಉಚ್ಚಿಲ, ಹರೀಶ್ಚಂದ್ರ ಕೆ.ಡಿ., ಪ್ರಶಾಂತ್ ಬಿರ್ತಿ ಉಪಸ್ಥಿತರಿದ್ದರು. ಕೀರ್ತಿ ಕುಮಾರ್ ಸ್ವಾಗತಿ ಸಿದರು. ವಿಠಲ ಮಾಸ್ಟರ್ ವಂದಿಸಿದರು. ಆರಂಭದಲ್ಲಿ ಪಡುಬಿದ್ರಿ ಗ್ರಾಪಂ ಬಳಿಯಿಂದ ಹೊರಟ ಮೊಂಬತ್ತಿ ಮೆರವಣಿಗೆಯು ಬಸ್ ನಿಲ್ದಾಣದಲ್ಲಿ ಸಮಾಪ್ತಿಗೊಂಡಿತು.