ಮಂಗಳೂರು: ಮುಂದಿನ ಲೋಕಸಭೆಯಲ್ಲಿ ಬಿಜೆಪಿ 400 ಸೀಟುಗಳನ್ನು ಪಡೆಯುವ ಮೂಲಕ ದೇಶದ ಸಂವಿಧಾನ ಬದಲಾಯಿಸುತ್ತೇವೆ ಎಂದು ದೇಶದ್ರೋಹದ ಹೇಳಿಕೆ ನೀಡಿರುವ ಸಂಸದ ಅನಂತ್ ಕುಮಾರ್ ಹೆಗಡೆಯನ್ನು ಬಂಧಿಸಿ ಕಾನೂನು ಕ್ರಮ ವಹಿಸಬೇಕು ಎಂದು ದ.ಕ. ಜಿಲ್ಲಾ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಒತ್ತಾಯಿಸಿದೆ.
ಗುರುವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಆಗ್ರಹ ಮಾಡಿದ ಸಂಘಟನೆಯ ಸಂಚಾಲಕ ಎಂ. ದೇವದಾಸ್, ಸಂವಿಧಾನ ದೇಶದ ಪ್ರಮುಖ ಅಡಗಲ್ಲು. ನೈತಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಜವಾಬ್ದಾರಿಯಾಗಿ ಸರ್ವಧಮದ ಜನತೆಗೆ ಎಲ್ಲಾ ರೀತಿಯ ಹಕ್ಕುಗಳನ್ನು ಒದಗಿಸಿದೆ. ಇಂತಹ ಸಂವಿಧಾನ ಬದಲಿಸುವ ಹೇಳಿಕೆ ಮೂರ್ಖತನದ್ದು ಎಂದರು.
ಶೋಷಿತರನ್ನು, ದಮನಿತರನ್ನು, ಮಹಿಳೆಯರನ್ನು ಶೇಣೀಕೃತ ವ್ಯವಸ್ಥೆಯಿಂದ ವಿಮೋಚನೆಗೊಳಿಸಿ ಸ್ವಾಭಿಮಾನ ಹಾಗೂ ಆತ್ಮಗೌರವದ ಬದುಕು ನೀಡಿದ ಗೌರವ ಸಂವಿಧಾನದ್ದು, ಇಂದು ಅನಂತ ಕುಮಾರ್ ಹೆಗಡೆ ಸಂಸದರಾಗಿ ಆಯ್ಕೆಯಾಗಿರುವಲ್ಲಿ, ಸಚಿವರಾಗಿ ಕಾರ್ಯ ನಿರ್ವಹಿಸುವಲ್ಲಿ ಪಾತ್ರ ವಹಿಸಿದ್ದು ಇದೇ ಸಂವಿಧಾನ. ಹಾಗಿದ್ದರೂ ಅದನ್ನು ಮರೆತು ಇಂತಹ ಹೇಳಿಕೆ ನೀಡಿರುವ ಅವರ ವಿರುದ್ಧ ತಕ್ಷಣ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಅಥವಾ ಆರೆಸ್ಸೆಸ್ನ ಮೂಲ ಉದ್ದೇಶ ಮನುಸ್ಮೃತಿಯನ್ನು ಜಾರಿಗೊಳಿಸುವುದಾಗಿದೆ. ಇಂತಹ ಹೇಳಿಕೆ ನೀಡಿದವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ದಲಿತ ಮುಖಂಡ ಅಶೋಕ್ ಕೊಂಚಾಡಿ ಹೇಳಿದರು.
ಅನಂತ್ ಕುಮಾರ್ ಹೆಗಡೆಯ ಹೇಳಿಕೆಯನ್ನು ಅವರ ವೈಯಕ್ತಿಕ ಹೇಳಿಕೆ ಎಂದು ಬಿಜೆಪಿಯ ನಾಯಕ ಅಶೋಕ್ ಕುಮಾರ್ ಹೇಳಿ ಸುಮ್ಮನಾಗಿದ್ದರೆ, ಬಿಜೆಪಿಯ ಇತರ ಯಾವುದೇ ನಾಯಕರು ಈ ಬಗ್ಗೆ ಖಂಡನೆ ವ್ಯಕ್ತಪಡಿಸಿಲ್ಲ. ಇದು ಅವರ ಮನಸ್ಥಿತಿಯನ್ನು ತೋರ್ಪಡಿಸುತ್ತದೆ ಎಂದು ಸುಂದರ ಮೇರ ಹೇಳಿದರು.
ಬಿಜೆಪಿಗೆ ಧಮ್ಮು, ತಾಕತ್ತು ಇದ್ದರೆ ಸಂವಿಧಾನ ಬದಲಾವಣೆಯ ಬಗ್ಗೆ ತಮ್ಮ ಪ್ರಣಾಳಿಕೆಯಲ್ಲಿ ಪ್ರಕಟ ಮಾಡಲಿ. ಸಂವಿಧಾನದ ಬಗ್ಗೆ ಇಷ್ಟು ಹಗುರವಾಗಿ ಮಾತನಾಡುವ ಇಂತಹವರಿಗೆ ಆಗ ಮಾರಿ ಹಬ್ಬವನ್ನು ನಾವು ತೋರಿಸುತ್ತೇವೆ ಎಂದು ಮುಖಂಡ ದಿನೇಶ್ ಮೂಳೂರು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯ ನಾಯಕನೊಬ್ಬ ಈ ರೀತಿಯ ಹೇಳಿಕೆ ನೀಡಿ ಸಂವಿಧಾನಕ್ಕೆ ಅವಮಾನ, ಅಪಚಾರ ಎಸಗಿದ್ದಾರೆ. ಬಹುಜನರಿಗೆ ಆತ್ಮಗೌರವ ಕೊಟ್ಟಿರುವ, ಜಾತ್ಯತೀತ ಮೌಲ್ಯವನ್ನು ಎತ್ತಿ ಹಿಡಿದ ಈ ದೇಶದ ಪವಿತ್ರ ಗ್ರಂಥವಾಗಿರುವ ಸಂವಿಧಾನವನ್ನು ಉಳಿಸಿ, ರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿ ಸರಕಾರವನ್ನು ಸೋಲಿಸುವ ಮೂಲಕ ಉತ್ತರ ನೀಡಬೇಕು ಎಂದು ರಘು ಕೆ. ಎಕ್ಕಾರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಚಂದ್ರಕುಮಾರ್, ಸುಧಾಕರ್ ಬೋಳೂರು, ಸರೋಜಿನಿ ಬಂಟ್ವಾಳ ಮೊದಲಾದವರು ಉಪಸ್ಥಿತರಿದ್ದರು.