ನವದೆಹಲಿ: “ಸಂವಿಧಾನವನ್ನು ಉಳಿಸಲು ಮತ್ತು ಸದನದ ಗೌರವ ಕಾಪಾಡಲು” ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಪದಚ್ಯುತಗೊಳಿಸುವಂತೆ ವಿರೋಧ ಪಕ್ಷಗಳು ನಿರ್ಣಯ ಮಂಡಿಸಬೇಕಾಯಿತು ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಮಂಗಳವಾರ ಹೇಳಿದ್ದಾರೆ.
ಇಂದು ಲೋಕಸಭೆಯಲ್ಲಿ ಸ್ಪೀಕರ್ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ಆರಂಭಿಸಿ ಮಾತನಾಡಿದ ಗೊಗೊಯ್, ಓಂ ಬಿರ್ಲಾ ಅವರು ಪಕ್ಷಪಾತಿಯಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕಳೆದ ಫೆಬ್ರವರಿಯಲ್ಲಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯ ಸಮಯದಲ್ಲಿ ಪ್ರತಿಪಕ್ಷಗಳ ಸದಸ್ಯರಿಗೆ ಸಂಸತ್ತಿನ ಮಾತನಾಡಲು ಅವಕಾಶ ನೀಡಲಿಲ್ಲ. ಏಕೆಂದರೆ ದೇಶದ ನಾಯಕತ್ವವು “ದುರ್ಬಲ”ವಾಗಿದೆ ಎಂದರು.
ಸ್ಪೀಕರ್ ವಿರುದ್ಧ ನಿರ್ಣಯ ಮಂಡಿಸಲು ಹಲವು ಕಾರಣಗಳನ್ನು ನೀಡಿದ ಕಾಂಗ್ರೆಸ್ ಸಂಸದ, “ಫೆಬ್ರವರಿಯಲ್ಲಿ, ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲೆ ಲೋಕಸಭೆ ಪ್ರತಿಪಕ್ಷ ನಾಯಕ ಮಾತನಾಡಲು ಬಯಸಿದಾಗ, ಸ್ಪೀಕರ್, ಅಧ್ಯಕ್ಷರ ಸಮಿತಿಯ ಸದಸ್ಯರು, ಖಜಾನೆ ಪೀಠಗಳ ಹಿರಿಯ ಸದಸ್ಯರು ಅವರಿಗೆ 20 ಬಾರಿ ಅಡ್ಡಿಪಡಿಸಿದರು ಎಂದು ಆರೋಪಿಸಿದರು.
“ಸ್ಪೀಕರ್, ರಾಹುಲ್ ಗಾಂಧಿ ಮಾತನಾಡಲು ಅವಕಾಶ ನೀಡಲಿಲ್ಲ. ಸದನ ಮತ್ತು ದೇಶದ ಜನರಿಗೆ ತಿಳಿದಿರಬೇಕಾದ ಕೆಲವು ನಿರ್ಣಾಯಕ ವಿಷಯಗಳನ್ನು ಕಡ್ಡಾಯವಾಗಿ ಮಂಡಿಸಲು ಪ್ರಯತ್ನಿಸುವಾಗ ಎಲ್ಒಪಿಗೆ ಪದೇ ಪದೇ ಅಡ್ಡಿಪಡಿಸಲಾಯಿತು” ಎಂದು ಗೊಗೊಯ್ ಹೇಳಿದರು.
ಮಾಜಿ ಸೇನಾ ಮುಖ್ಯಸ್ಥ ಎಂಎಂ ನರವಾಣೆ ಅವರ ಬಿಡುಗಡೆಯಾಗದ ಪುಸ್ತಕದಲ್ಲಿ ಅವರ ಹೇಳಿಕೆ ಬಗ್ಗೆ ಮಾತನಾಡಲು ರಾಹುಲ್ ಗಾಂಧಿಯವರು ಬಯಸಿದ್ದರು. ಅದಕ್ಕೂ ಅವಕಾಶ ನೀಡಲಿಲ್ಲ ಎಂದರು.
ಈ ಹಂತದಲ್ಲಿ, ಸ್ಪೀಕರ್ ಸ್ಥಾನದಲ್ಲಿದ್ದ ಜಗದಾಂಬಿಕಾ ಪಾಲ್ ಅವರು, ಬಿರ್ಲಾ ವಿರುದ್ಧದ ನಿರ್ಣಯದ ಬಗ್ಗೆ ಮಾತ್ರ ಚರ್ಚಿಸುವಂತೆ ಗೊಗೊಯ್ ಅವರಿಗೆ ಸೂಚಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು, ಇದು ಸ್ಪೀಕರ್ ಕುರಿತ ಚರ್ಚೆಯಾಗಿದ್ದು, ವಿರೋಧ ಪಕ್ಷಗಳು ಇತರ ವಿಷಯಗಳ ಬಗ್ಗೆ ಮಾತನಾಡುತ್ತಿದ್ದರೆ, “ನಾವು ಉತ್ತರಿಸುತ್ತೇವೆ”. ಆದರೆ ನೀವು ಅಡ್ಡಿಪಡಿಸಬಾರದು ಎಂದು ಹೇಳಿದರು.
