ಉಡುಪಿ: ನಮ್ಮ ಸಮಾಜದಲ್ಲಿ ಮಹಿಳೆಗೆ ಆಕೆಯದೇ ಆದ ಅಸ್ತಿತ್ವವೆಂಬುದಿಲ್ಲ, ಆಕೆಯದೇ ಆದ ಬದುಕು ಇಲ್ಲ. ಹೀಗಾಗಿ ಮಹಿಳೆಯರ ವಿಷಯ ಬಂದಾಗ ಎಲ್ಲರೂ ಒಗ್ಗಟ್ಟಾಗಬೇಕಾಗಿರುವುದು ಇಂದಿನ ತುರ್ತು ಅಗತ್ಯ ಎಂದು ಚೆನ್ನೈನ ಹಿರಿಯ ನ್ಯಾಯವಾದಿ, ಬರಹಗಾರ್ತಿ ಹಾಗೂ ಹೋರಾಟಗಾರ್ತಿ ಎ.ಅರುಳ್ ಮೌಳಿ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಪ್ರತಿ ವರ್ಷ ಅಂತಾರಾಷ್ಟ್ರೀಯ ಮಹಿಳಾ ದಿನದಂದು ಆಚರಿಸುವ ‘ಮಹಿಳಾ ಚೈತನ ದಿನ’ವನ್ನು ಈ ಬಾರಿ ಉಡುಪಿ ಅಜ್ಜರಕಾಡಿನ ಪುರಭವನದ ಸರಸ್ವತಿ ಬಾಯಿ ರಾಜವಾಡೆ ವೇದಿಕೆಯಲ್ಲಿ ಆಯೋಜಿಸಿದ್ದು, ಇದರಲ್ಲಿ ಅರುಳ್ ಮೌಳಿ ಆಶಯ ಭಾಷಣ ಮಾಡಿದರು.
ಯಾವುದೇ ಮಹಿಳೆಯನ್ನು ನೀವು ವಿಚಾರಿಸಿ. ಆಕೆಗೆ ಆಕೆಯದೇ ಆದ ಊರಿಲ್ಲ. ಮನೆಯಿಲ್ಲ ಹಾಗೂ ಆಕೆ ಆರಾಧಿಸುವ ದೈವವೂ ಇರುವುದಿಲ್ಲ. ಮೊದಲು ತವರೇ ಆಕೆಗೆ ಸರ್ವಸ್ವವಾಗಿದ್ದರೆ, ಮದುವೆಯ ಬಳಿಕ ಗಂಡನ ಮನೆಯೇ ಆಕೆಗೆ ಎಲ್ಲವೂ. ಇದರಲ್ಲೇ ಆಕೆಯನ್ನು ನಾವು ಹುಡುಕಬೇಕಾಗಿದೆ ಎಂದು ಅವರು ಹೇಳಿದರು.
ರಾಕೆಟ್ ಇಂಜಿನಿಯರ್ ಒಬ್ಬ ಉಡಾವಣೆಯ ಹಿಂದಿನ ದಿನ ಹೊಂದಿರುವುದಕ್ಕಿಂತ ಹೆಚ್ಚಿನ ಚಿಂತೆಯನ್ನು ಮಹಿಳೆ ಪ್ರತಿದಿನ ಹೊಂದಿರುತ್ತಾಳೆ. ದಿನ ರಾತ್ರಿ ಕುಟುಂಬದ ಕುರಿತಂತೆ ಆಕೆಗೆ ನಾಳೆಯ ಚಿಂತೆ ಕಾಡುತ್ತಿರುತ್ತದೆ. ಇದರಿಂದ ಆಕೆ ತನ್ನ ಬಗ್ಗೆ ಚಿಂತಿಸಲು ಸಮಯವನ್ನೂ ಹೊಂದಿರುವುದಿಲ್ಲ. ಹೀಗಾಗಿ ಆಕೆಗೆ ಬದುಕೂ ಇಲ್ಲ, ಅಸ್ತಿತ್ವವೂ ಇಲ್ಲ ಎಂದರು.
ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಯಾವುದೇ ಸೀಮೆಯೂ ಇರುವುದಿಲ್ಲ ಎಂದ ಅರುಳ್ ಮೌಳಿ, ಪ್ರಸ್ತುತ ದಿನಗಳಲ್ಲಿ ದೊಡ್ಡ ಸಂಖ್ಯೆಯ ಮಹಿಳೆಯರು ಜೊತೆಯಾಗುತಿದ್ದಾರೆ. ಮತ್ತೊಬ್ಬ ಮಹಿಳೆಗೆ ಆಸರೆಯಾಗುತಿದ್ದಾರೆ. ಇದಕ್ಕೆ ಅವರು ಅನುಭವಿಸುವ ನೋವೇ ಪ್ರಮುಖ ಕಾರಣ. ಮೊದಲನೇಯದಾಗಿ ಹೆಣ್ಣೊಬ್ಬಳು ಯಾರಿಗೋಸ್ಕರ ಬದುಕಬೇಕು, ನಮಗೋಸ್ಕರ ಬದುಕಬೇಕಾ ಎಂಬುವುದನ್ನು ಅರಿತುಕೊಂಡಿರಬೇಕು ಎಂದು ಹೇಳಿದರು.
ಸಮಾಜ ಮಹಿಳೆಯ ಮೇಲೆ ನಡೆಸುವ ದೊಡ್ಡಮಟ್ಟದ ದೌರ್ಜನ್ಯ ಹಾಗೂ ಅದನ್ನು ನಿಭಾಯಿಸುವ ವಿಧಾನಗಳ ಕುರಿತು ಬೆಳಕು ಚೆಲ್ಲುತ್ತಾ ಹೊಸದಿಲ್ಲಿಯ ನಿರ್ಭಯ ಪ್ರಕರಣ ಹಾಗೂ ಗುಜರಾತ್ನ ಬಲ್ಕಿಸ್ಬಾನು ಪ್ರಕರಣಗಳನ್ನು ಉದಾಹರಣೆ ಯಾಗಿ ನೀಡಿದರು. ನಿರ್ಭಯ ಪ್ರಕರಣದಲ್ಲಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಬಳಿಕವೂ ನಂತರ ತೋರಿದ ಭೀಭತ್ಸ ಕ್ರೌರ್ಯದ ಬಗ್ಗೆ ವಿಶ್ಲೇಷಿಸಿದ ಅರುಳ್ ಮೌಳಿ, ಇಂಥ ಕ್ರೂರತನ ಮೆರೆಯುವ ಮನಸ್ಥಿತಿ ಅವರಿಗೆ ಎಲ್ಲಿಂದ ಬಂದಿದೆ ಎಂಬುದು ಮುಖ್ಯವಾಗುತ್ತದೆ. ‘ಗಂಡಾಗಿ’ ಅವರನ್ನು ಬೆಳೆಸುವ ಸಮಾಜದಿಂದ ಅವರಲ್ಲಿ ಈ ಗುಣ ಬೆಳೆಯುತ್ತ ಹೋಗುತ್ತದೆ. ಗಂಡು ಮಕ್ಕಳಲ್ಲಿ ಈ ‘ಡಿಎನ್ಎ’ ಸಮಾಜದಿಂದ ಬರುತ್ತದೆ ಎಂದರು.
ಪುರುಷರು ತಮ್ಮ ‘ತೃಪ್ತಿ’ಗಾಗಿ ಮಾತ್ರ ಅತ್ಯಾಚಾರ ನಡೆಸುವುದಿಲ್ಲ. ಬದಲಾಗಿ ಪುರುಷಾಧಿಪತ್ಯದ ಸಂಕೇತವಾಗಿ ಅತ್ಯಾಚಾರ ನಡೆಸಲಾಗುತ್ತದೆ ಎಂಬುದನ್ನು ನಿರ್ಭಯಾ ಹಾಗೂ ಬಿಲ್ಕೀಸ್ ಬಾನು ಪ್ರಕರಣಗಳ ಅಧ್ಯಯನದಿಂದ ಮನಶಾಸ್ತ್ರಜ್ಞರು ಹೇಳುತ್ತಾರೆ ಎಂದ ಅರುಳ್ ಮೌಳಿ, ಗುಜರಾತ್ ಪ್ರಕರಣದಲ್ಲಿ ಕೇವಲ ಜೀವಾವಧಿ ಶಿಕ್ಷೆ ಪಡೆದ ಆರೋಪಿಗಳು ನ್ಯಾಯಾಲಯದ ಮೂಲಕ ಅವಧಿಗಿಂತ ಮೊದಲೇ ಜೈಲಿನಿಂದ ಹೊರಗೆ ಬಂದಾಗ ಅವರಿಗೆ ಊರಿನ ಹಾಗೂ ಕುಟುಂಬದ ಮಹಿಳೆಯರಿಂದ ದೊರೆತ ‘ಆರತಿ ಎತ್ತಿ ಸ್ವಾಗತ’ ನಮ್ಮ ಸಮಾಜದ ಅಪಾಯಕಾರಿ ಮನಸ್ಥಿತಿಯನ್ನು, ಭವಿಷ್ಯದ ಮಹಿಳೆಯರ ಕುರಿತಂತೆ ಅತ್ಯಂತ ಕಳವಳವನ್ನು ಹುಟ್ಟಿಸುತ್ತದೆ ಎಂದು ಹೇಳಿದರು.
ಇಂದು ನಾವು ಮಕ್ಕಳನ್ನು ಮಕ್ಕಳಾಗಿ ಬೆಳೆಸದೇ ಗಂಡು-ಹೆಣ್ಣಾಗಿ ಬೆಳೆಸುತ್ತೇವೆ. ಹೆಣ್ಣು, ಗಂಡು ಮಕ್ಕಳಿಬ್ಬರಲ್ಲೂ ಶಿಸ್ತು ಹಾಗೂ ನೈತಿಕತೆಯನ್ನು ತುಂಬಬೇಕಿದೆ. ಹೆಣ್ಣು ಮಕ್ಕಳಲ್ಲಿ ಅದರಲ್ಲೂ ಅವರ ಹದಿಹರೆಯದಲ್ಲಿ ಎಚ್ಚರಿಕೆಯನ್ನು, ಜಾಗರೂಕತೆಯನ್ನು ಮೂಡಿಸಬೇಕಿದೆ. ‘ಇಲ್ಲ, ಬೇಡ’ ಎಂಬುದನ್ನು ಸ್ಪಷ್ಟವಾಗಿ ತಿಳಿಸಲು ಹೇಳಬೇಕಿದೆ. ಸಮಾಜದ ಕ್ರೌರ್ಯದ ಬಗ್ಗೆ ಅವರಿಗೆ ತಿಳಿಹೇಳಬೇಕಿದೆ ಎಂದು ವಿವರಿಸಿದರು.
ಕೌದಿ ಉಡುಗೊರೆ: ಸಮಾವೇಶದಲ್ಲಿ ಆಶಯ ಭಾಷಣ ಮಾಡಿದ ಅರುಳ್ ಮೌಳಿ ಅವರಿಗೆ ಒಕ್ಕೂಟದ ಮಹಿಳೆಯರು ತಯಾರಿಸಿದ ಸುಂದರ ‘ಕೌದಿ’ಯನ್ನು ಉಡುಗೊರೆಯಾಗಿ, ಇತರ ನೆನಪಿನ ಕಾಣಿಕೆಯೊಂದಿಗೆ ನೀಡಲಾಯಿತು. ಲೇಖಕಿಯರಾದ ಜಾನಕಿ ಬ್ರಹ್ಮಾವರ, ಜಾನೆಟ್ ಬಾರ್ಬೋಜಾ, ಸುನಂದಾ ಕಡಮೆ ಹುಬ್ಬಳ್ಳಿ ಶುಭಾಶಂಸನೆ ಮಾತುಗಳನ್ನಾಡಿದರು.
ಗೀತಾ ಬೈಂದೂರು ಭಾರತ ಸಂವಿಧಾನದ ಪೀಠಿಕೆ ಓದಿದರೆ, ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿದರು. ಶಿವಮೊಗ್ಗದ ರೇಖಾಂಬ ಟಿ.ಎಲ್. ಪ್ರಸ್ತಾವಿಕವಾಗಿ ಮಾತಗಳನ್ನಾಡಿದರು. ಸಿಮಿ ಡಿಸೋಜ ಹಾಗೂ ಪವಿತ್ರ ಚಿಕ್ಕನಕೋಡು ಕಾರ್ಯಕ್ರಮ ನಿರೂಪಿಸಿದರು.
‘ಶಿಳ್ಳೆ’ ಹೊಡೆದು ಉದ್ಘಾಟನೆ
ರಾಜ್ಯ ಮಹಿಳಾ ದೌರ್ಜನ ವಿರೋಧಿ ಒಕ್ಕೂಟದ ಮಹಿಳೆಯರು ಹಾಗೂ ಸಭಾಂಗಣದಲ್ಲಿ ನೆರೆದಿದ್ದ ಮಹಿಳೆಯರು ‘ಶಿಳ್ಳೆ’ ಹೊಡೆಯುವ ಮೂಲಕ ವಿಶಿಷ್ಟವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮಹಿಳೆಯರು ಶಿಳ್ಳೆ ಹೊಡೆಯಬಾರದೆಂಬ ಸಮಾಜ ನೀತಿಯನ್ನು ವಿರೋಧಿಸಿ ನಾವು ಶಿಳ್ಳೆ ಹೊಡೆದು ಕಾರ್ಯಕ್ರಮವನ್ನು ಉದ್ಘಾಟಿಸುತ್ತಿದ್ದೇವೆ ಎಂಬ ಸಂದೇಶವನ್ನು ಈ ಮೂಲಕ ಸಾರಲಾಯಿತು.