ಹೊಸದಿಲ್ಲಿ : ಸರಕಾರಿ ನಿಧಿಗಳನ್ನು ದುರುಪಯೋಗಪಡಿಸಿದ ಆರೋಪದಲ್ಲಿ, ಉತ್ತರಪ್ರದೇಶದ ಬರೇಲಿಯಲ್ಲಿರುವ ಎಂಪಿ-ಎಮ್ಎಲ್ಎ ನ್ಯಾಯಾಲಯವೊಂದು ಹಿರಿಯ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ರ ಪತ್ನಿ ಲೂಯಿಸ್ ಖುರ್ಷಿದ್ ಗೆ ಬುಧವಾರ ಬಂಧನ ವಾರಂಟ್ ಜಾರಿಗೊಳಿಸಿದೆ.
ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಫೆಬ್ರವರಿ 16ಕ್ಕೆ ನಿಗದಿಪಡಿಸಿದೆ.
2009-10ರಲ್ಲಿ, ಖುರ್ಷಿದ್ ಮತ್ತು ಅವರ ಪತ್ನಿ ಲೂಯಿಸ್ ಖುರ್ಷಿದ್ ಅಧ್ಯಕ್ಷರಾಗಿರುವ ಟ್ರಸ್ಟ್ ಒಂದರ ಕೃತಕ ಕೈ-ಕಾಲುಗಳು ಮತ್ತು ಇತರ ಸಲಕರಣೆಗಳ ವಿತರಣೆ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.
ಖುರ್ಷಿದ್ ಅವರ ಅಜ್ಜ ಹಾಗೂ ದೇಶದ ಮೂರನೇ ರಾಷ್ಟ್ರಪತಿಯ ಹೆಸರಿನಲ್ಲಿರುವ ‘ಡಾ. ಝಾಕಿರ್ ಹುಸೇನ್ ಮೆಮೋರಿಯಲ್ ಟ್ರಸ್ಟ್’ ಸರಕಾರದ 71 ಲಕ್ಷ ರೂ. ಅನುದಾನವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಲಾಗಿದೆ.