ಸಾರ್ವಜನಿಕ ಸ್ಥಳದಲ್ಲಿ ನಾಗರಕಟ್ಟೆಗೆ ಪೂಜೆ ಮಾಡಲು ಪೊಲೀಸ್ ಇಲಾಖೆ ಅನುಮತಿ ಪಡೆದಿದ್ದೀರಾ ಎಂದು ಪುನೀತ್ ಕೆರೆಹಳ್ಳಿಗೆ ಪೊಲೀಸ್ ಅಧಿಕಾರಿ ನೋಟಿಸ್ ನೀಡಿದ ವಿಚಾರ ಬುಧವಾರ ವಿಧಾನ ಪರಿಷತ್ ನಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿತು. ಬೆಂಗಳೂರು: ಸಾರ್ವಜನಿಕ ಸ್ಥಳದಲ್ಲಿ ನಾಗರಕಟ್ಟೆಗೆ ಪೂಜೆ ಮಾಡಲು ಪೊಲೀಸ್ ಇಲಾಖೆ ಅನುಮತಿ ಪಡೆದಿದ್ದೀರಾ ಎಂದು ಪುನೀತ್ ಕೆರೆಹಳ್ಳಿಗೆ ಪೊಲೀಸ್ ಅಧಿಕಾರಿ ನೋಟಿಸ್ ನೀಡಿದ ವಿಚಾರ ಬುಧವಾರ ವಿಧಾನ ಪರಿಷತ್ ನಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿತು.
ಇಂದು ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯರು ಪೊಲೀಸ್ ಅಧಿಕಾರಿ ಅಮಾನತಿಗೆ ಆಗ್ರಹಿಸಿದ್ದು, ತಕ್ಷಣವೇ ಉತ್ತರ ಬೇಕು ಎಂದು ಪಟ್ಟು ಹಿಡಿದು ಸದನದ ಬಾವಿಗಿಳಿದು ಧರಣಿ ನಡೆಸಿದರು.
ಸದನಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾದ ಹಿನ್ನೆಲೆಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಕಲಾಪವನ್ನು 10 ನಿಮಿಷ ಮುಂದೂಡಿಕೆ ಮಾಡಿದರು.
ಇದನ್ನು ಓದಿ: ಅಡ್ಜಸ್ಟ್ ಮೆಂಟ್ ರಾಜಕೀಯ ಸಾಬೀತಾದ್ರೆ ರಾಜಕೀಯ ನಿವೃತ್ತಿ: ಸಿಎಂ ಸಿದ್ದರಾಮಯ್ಯ ಗುಡುಗು
ವಿಧಾನ ಪರಿಷತ್ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ವೈ ಎ ನಾರಾಯಣಸ್ವಾಮಿ, ತುಳಸೀ ತೋಟದ ನಾಗರಕಟ್ಟೆ ಪೂಜೆಗೆ ಕರೆ ನೀಡಿದ ಪುನೀತ್ ಕೆರೆಹಳ್ಳಿಗೆ ಪೊಲೀಸರು ನೋಟಿಸ್ ನೀಡಿ ಪೊಲೀಸ್ ಇಲಾಖೆ ಅನುಮತಿ ಪಡೆದಿದ್ದೀರಾ? ಪಡೆದಿದ್ದರೆ ಕೊಡಿ ಎಂದು ಕೇಳಿದ್ದಾರೆ. ಇದರಿಂದ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ. ಕೂಡಲೇ ನೋಟಿಸ್ ವಾಪಸ್ ಪಡೆದು ಆ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.
ನಾರಾಯಣಸ್ವಾಮಿ ಪ್ರಸ್ತಾಪ ಬೆಂಬಲಿಸಿ ಎದ್ದು ನಿಂತ ಬಿಜೆಪಿ ಸದಸ್ಯರು ಪೊಲೀಸರ ವಿರುದ್ಧ ಕಿಡಿಕಾರಿದರು. ಪೂಜೆ ಮಾಡಲು ಇವರಿಗೆ ಅನುಮತಿ ಕೇಳಬೇಕಾ? ಎಂದು ಪ್ರಶ್ನಿಸಿದರು. ಕೂಡಲೇ ಅಮಾನತುಗೊಳಿಸಬೇಕು. ನೋಟಿಸ್ ವಾಪಸ್ ಪಡೆಯಬೇಕು ಎಂದು ಬಿಜೆಪಿ ಹಿರಿಯ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಪ್ರಶ್ನೆ ಕೇಳಿದ್ದೀರಿ, ಉತ್ತರ ನೀಡಿದ ನಂತರ ಪ್ರಶ್ನೆ ಕೇಳಬೇಕು. ನಿಯಮಗಳ ಪ್ರಕಾರ ಹೋಗಬೇಕು. ತಿಳಿದವರಾಗಿ ನೀವೆಲ್ಲಾ ಹೀಗೆ ಮಾಡಿದರೆ ಹೇಗೆ? ಎಂದರು.
ಈ ವೇಳೆ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ವಾಸ್ತವವಾಗಿ ಏನು ನಡೆದಿದೆ ಎಂದು ವರದಿ ತರಿಸಿಕೊಳ್ಳಬೇಕು. ಪ್ರತಿಪಕ್ಷ ಸದಸ್ಯರ ಭಾವನೆಗೆ ಗೌರವ ಕೊಡಬೇಕು. ಇದನ್ನು ಗೃಹ ಸಚಿವರ ಗಮನಕ್ಕೆ ತಂದು ಅಧಿಕಾರಿಗಳಿಂದ ಮಾಹಿತಿ ತರಿಸಿಕೊಂಡು ಉತ್ತರ ಕೊಡಲಾಗುತ್ತದೆ ಎಂದು ಹೇಳಿದರು.