ಹೊಸದಿಲ್ಲಿ: ಚಂಡಿಗಡ ಮೇಯರ್ ಚುನಾವಣೆ ಕುರಿತು ಸುಪ್ರೀಂಕೋರ್ಟ್ ನೀಡಿದ ತೀರ್ಪು ‘ಪ್ರಜಾಪ್ರಭುತ್ವವನ್ನು ಕಾಪಾಡಿದೆ’ ಎಂದು ದಿಲ್ಲಿ ಮುಖ್ಯಮಂತ್ರಿ ಹಾಗೂ ಆಪ್ ವರಿಷ್ಠ ಅರವಿಂದ ಕೇಜ್ರಿವಾಲ್ ಸಂತಸ ವ್ಯಕ್ತಪಡಿಸಿದ್ದಾರೆ.
ಚಂಡೀಗಢ ಮೇಯರ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಕುಲದೀಪ್ ಕುಮಾರ್ ಅವರ ಗೆಲುವನ್ನು ಸುಪ್ರೀಂಕೋರ್ಟ್ ಘೋಷಿಸಿದ ಬೆನ್ನಲ್ಲೇ ಅರವಿಂದ ಕೇಜ್ರಿವಾಲ್ ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ‘‘ ಈ ಸಂಕಷ್ಟಕರ ಸಮಯದಲ್ಲಿ ಪ್ರಜಾಪ್ರಭುತ್ವವನ್ನು ಕಾಪಾಡಿದ್ದಕ್ಕಾಗಿ ಸುಪ್ರೀಂಕೋರ್ಟ್ ಗೆ ಧನ್ಯವಾದಗಳು.’’ ಎಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಆದೇಶವು ಐತಿಹಾಸಿಕವೆಂದು ಬಣ್ಣಿಸಿದರು. ದೇಶದ ಸಾಂವಿಧಾನಿಕ ಸಂಸ್ಥೆಗಳು ದಾಳಿಗೀಡಾಗಿರುವ ಈ ಸನ್ನಿವೇಶದಲ್ಲಿ ಸುಪ್ರೀಂಕೋರ್ಟ್ನ ತೀರ್ಪು ಐತಿಹಾಸಿಕವಾದುದು. ಅಲ್ಲದೆ ಈ ತೀರ್ಪು ಇಂಡಿಯಾ ಮೈತ್ರಿಕೂಟಕ್ಕೆ ದೊರೆತ ಅತಿ ದೊಡ್ಡ ಗೆಲುವಾಗಿದೆ. ಏಕತೆ ಹಾಗೂ ಕಾರ್ಯತಂತ್ರದ ಮೂಲಕ ಬಿಜೆಪಿಯನ್ನು ಪರಾಭವಗೊಳಿಸಬಹುದಾಗಿದೆ ಎಂದವರು ಹೇಳಿದರು.
ಈ ಮಧ್ಯೆ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಆಮ್ ಆದ್ಮಿ ಪಕ್ಷವು ಸುಪ್ರೀಂಕೋರ್ಟ್ ಮುಂದೆ ಬಿಜೆಪಿಯ ಬಣ್ಣ ಬಯಲಾಗಿದೆ ಎಂದು ಹೇಳಿದೆ.
ಇಂತಹ ಸಣ್ಣ ಚುನಾವಣೆಯಲ್ಲಿ ಬಿಜೆಪಿಯು ದರೋಡೆಯಲ್ಲಿ ತೊಡಗುವುದಾದರೆ, ಅದೊಂದು ಕಳವಳಕಾರಿ ಸಂಗತಿಯಾಗಿದೆ ಎಂದು ದಿಲ್ಲಿ ಸಚಿವ ಹಾಗೂ ಆಪ್ ನಾಯಕ ಸೌರಭ್ ಭಾರದ್ವಜ್ ಹೇಳಿದ್ದಾರೆ.