ಮಂಗಳೂರು, ಡಿ.12: ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ವಿರುದ್ಧ ಫೇಸ್ಬುಕ್ನಲ್ಲಿ ಅವಹೇಳನಕಾರಿ ಸಂದೇಶ ಹಾಕಿರುವ ಆರೋಪದಲ್ಲಿ ನಗರದ ಉರ್ವ ಠಾಣೆಯ ಪೊಲೀಸರು ಎಸ್ಡಿಪಿಐ ಮುಖಂಡ ರಿಯಾಝ್ ಕಡಂಬು ಅವರನ್ನು ಮಂಗಳವಾರ ಬಂಧಿಸಿದ್ದಾರೆ.
ಅವಹೇಳನಕಾರಿ ಸಂದೇಶ ಹಾಕಿದ ಹಿನ್ನೆಲೆಯಲ್ಲಿ ಮಂಗಳೂರು ಸೈಬರ್, ಇಕಾನಾಮಿಕ್ ಹಾಗು ನಾರ್ಕೋಟಿಕ್ಸ್ (ಸೆನ್) ಠಾಣೆಯಲ್ಲಿ ಪೊಲೀಸರು ಸ್ವಯಂಪ್ರೇರಿತ ದಾಖಲಿಸಿಕೊಂಡಿದ್ದರು. ರಿಯಾಝ್ ಕಡಂಬು ನಗರದ ಫ್ಲಾಟ್ವೊಂದರಲ್ಲಿ ವಾಸವಾಗಿದ್ದು, ಅಲ್ಲಿಂದ ಉರ್ವ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಸೆನ್ ಠಾಣೆಯಲ್ಲಿ ಪ್ರಕರಣ ದಾಖಲು
ರಾಜ್ಯ ವಿಧಾನಸಭೆಯ ಅಧ್ಯಕ್ಷ ಯು.ಟಿ.ಖಾದರ್ ವಿರುದ್ಧ ಫೇಸ್ಬುಕ್ನಲ್ಲಿ ಅವಹೇಳನಕಾರಿ ಸಂದೇಶ ಹಾಕಿದ ಆರೋಪದಡಿ ಮಂಗಳೂರು ಸೆನ್ ಠಾಣೆಯಲ್ಲಿ ಪೊಲೀಸರು ಮಂಗಳವಾರ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು.
ಮುಹಮ್ಮದ್ ರಿಯಾಝ್ ಎಂಬ ಫೇಸ್ಬುಕ್ನಲ್ಲಿ ಖಾತೆ ಹೊಂದಿರುವ ವ್ಯಕ್ತಿಯು ಡಿ.10ರಂದು ಸ್ಪೀಕರ್ ಯು.ಟಿ.ಖಾದರ್ರ ಭಾವ ಚಿತ್ರವನ್ನು ಎಡಿಟ್ ಮಾಡಿ ಸಾವರ್ಕರ್ ಹಾಕಿರುವ ಟೋಪಿಯನ್ನು ಹಾಕಿ “ನಾನು ಸಾವರ್ಕರ್ ಅಭಿಮಾನಿ ಖಾದರ್ಕರ್” ಎಂಬುದಾಗಿ ಹಾಗೂ “ಆತ ಬ್ರಿಟಿಷರೊಂದಿಗೆ ಕ್ಷಮಾಪಣಾ ಪತ್ರ ಬರೆದರೆ ಈತ ಸಂಘಿಗಳೆದುರು ಮಂಡಿಯೂರಿದ ಸಭಾಧ್ಯಕ್ಷ…” ಎಂಬುದಾಗಿ ಹಾಕಿದ್ದಾರೆ. ಹಾಗೂ “ಇಷ್ಟೇ ಅದ್ಯಾವ ಪರಿಸರ ಹೇಳಿ, ಚಪ್ಪಲಿ ನೆಕ್ಕಿ ಸಾವರ್ಕರ್ನ ಫೋಟೋವನ್ನು ಇಟ್ಟು ಜೋಡಿಸುತ್ತಿದ್ದ ಪರಿಸರ. ಚುನಾವಣೆಯಲ್ಲಿ ಕೇಳ್ತಿದ್ರಲ್ಲಾ ಎಸ್ಡಿಪಿಐ ಯಾಕೆ ಒಬ್ಬ ಮುಸ್ಲಿಂ ಎಂಎಲ್ಎ ವಿರುದ್ಧ ಸ್ಪರ್ಧೆ ಮಾಡುವುದು ಅಂತ. ನೋಡಿ ಉತ್ತರ ಸ್ಪಷ್ಟವಿದೆ. ದೇಶದ್ರೋಹಿ, ಸಂವಿಧಾನ ವಿರೋಧಿ, ಜಾತ್ಯತೀತ ವಿರೋಧಿ, ಕೋಮುವಾದಿ ಆರೆಸ್ಸೆಸ್ಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಈ ರೀತಿ ಜೋಡಿಸಲು ಹೊರಟಿರುವುದಕ್ಕೆ ಎಂದಾದರು ಒಂದು ದಿನ ಎಸ್ಡಿಪಿಐ ಅದರೊಳಗೆ ಲಗ್ಗೆ ಇಟ್ಟರೆ ಕಿತ್ತು ಬಿಸಾಕಿಯೆ ಬಿಸಾಕಲು ಸದನದಲ್ಲಿ ಹೋರಾಟ ಮಾಡಿಯೇ ಮಾಡುತ್ತೇವೆ. ಅದ್ಯಾವ ವ್ಯಕ್ತಿ ಸಭಾಧ್ಯಕ್ಷ ಆಗಿದ್ದರೂ ಕೂಡಾ. ಈ ಸಭಾಧ್ಯಕ್ಷರಿಗೆ ಚಾಲೆಂಜ್ ಕಿತ್ತು ಬಿಸಾಕಿ, ಟಿಪ್ಪು ಭಾವಚಿತ್ರ ಧಮ್ಮಿದ್ದರೆ ಅಳವಡಿಸಿ” ರಿಯಾಝ್ ಕಡಂಬು ಎಂದು ಬರೆದು ಪೋಸ್ಟ್ ಮಾಡಿರುವುದಲ್ಲದೆ ಮುಹಮ್ಮದ್ ಮುಸ್ತಫಾ ಎಂಬ ನಕಲಿ ಫೇಸ್ಬುಕ್ ಖಾತೆಯಲ್ಲಿ ವೇಷಧಾರಿ ಎಂಬುದಾಗಿ ಬರೆದು ಸ್ಪೀಕರ್ ಅವರ ಭಾವಚಿತ್ರವನ್ನು ಹಾಕಿರುವುದು ಕಂಡು ಬಂದಿರುತ್ತದೆ ಎಂದು ಸ್ವಯಂ ಪ್ರೇರಿತ ದೂರಿನಲ್ಲಿ ತಿಳಿಸಲಾಗಿದೆ.
ಮುಹಮ್ಮದ್ ರಿಯಾಝ್ ಮತ್ತು ಮುಹಮ್ಮದ್ ಮುಸ್ತಫಾ ಎಂಬ ಫೇಸ್ಬುಕ್ ಖಾತೆದಾರರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವುದರಿಂದ ಸಾರ್ವಜನಿಕರಿಗೆ ತಪ್ಪು ಸಂದೇಶಗಳನ್ನು ಕಳುಹಿಸುವ ಮೂಲಕ ಕೋಮು ಭಾವನೆ ಕೆರಳಿಸುವಂತೆ ಮಾಡಲು ಉದ್ದೇಶ ಪೂರ್ವಕವಾಗಿ ಪೋಸ್ಟ್ಗಳನ್ನು ಹಾಕಿರುವುದು ಕಂಡು ಬಂದಿರುವುದರಿಂದ ಈ ಎರಡೂ ಫೇಸ್ಬುಕ್ ಖಾತೆದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
