ಮಂಗಳೂರು, ಜ.12: ಧೀಮಂತ, ಆಕಷರ್ಕ ವ್ಯಕ್ತಿತ್ವದ ಸ್ವಾಮಿ ವಿವೇಕಾನಂದರು ಎಂದಿಗೂ ಯುವಕರ ಆದರ್ಶವಾಗಿ ದ್ದರು. ಆ ಹಿನ್ನಲೆಯಲ್ಲಿ ಮಾಜಿ ಪ್ರಧಾನಮಂತ್ರಿ ದಿ. ರಾಜೀವ್ಗಾಂಧಿಯವರು ವಿವೇಕಾನಂದರ ಜನ್ಮದಿನವನ್ನು ಯುವ ದಿನವನ್ನಾಗಿ ಆಚರಿಸುವ ನಿರ್ಧಾರವನ್ನು ಜಾರಿಗೆ ತಂದರು ಎಂದು ಕರ್ನಾಟಕ ಸರಕಾರದ ಆರೋಗ್ಯ ಹಾಗೂ ಸಮಾಜಕಲ್ಯಾಣ ಸಚಿವ ಮತ್ತು ದಕ್ಷಿಣ ಕನ್ನಡಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿವೇಕಾನಂದರ ಆಧ್ಯಾತ್ಮಿಕ ಚಿಂತನೆಗಳು ನಮ್ಮನ್ನು ಸ್ಪೂರ್ತಿಗೊಳಿಸಬೇಕು. ಅವರ ತತ್ವ ಚಿಂತನೆಗಳು ನಮ್ಮಲ್ಲಿನ ಸತ್ಯ ತಿಳಿದುಕೊಳ್ಳಬೇಕೆನ್ನುವ ಕುತೂಹಲ ಹೆಚ್ಚಿಸುತ್ತದೆ ಮತ್ತು ಪರಿಪೂರ್ಣತೆಯತ್ತ ಕ್ರಮಿಸಲು ಸಹಾಯ ಮಾಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದ ಸುರತ್ಕಲ್ನ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ಟೆಕ್ನಾಲಜಿ ಕರ್ನಾಟಕ ಇದರ ನಿರ್ದೇಶಕ ಪ್ರೊ. ಬಿ. ರವಿ ಮಾತನಾಡಿ ಬದಲಾವಣೆಗಳು ಈಗ ಸಾಮಾನ್ಯವಾಗಿ ಬಿಟ್ಟಿವೆ. ಗೂಗಲ್ ಮತ್ತು ಸಮೂಹ, ಮಾಹಿತಿ ಮಾಧ್ಯಮಗಳ ಮೂಲಕ ವಿವೇಕಾನಂದರ ತತ್ವಗಳು ನಮ್ಮ ಯುವಕರನ್ನು ತಲುಪುತ್ತಾ ಅವ ರನ್ನು ಸಮರ್ಥರನ್ನಾಗಿ ಮಾಡಿ ದೇಶವನ್ನು ಆರ್ಥಿಕ, ಸಾಮಾಜಿಕ, ತಾಂತ್ರಿಕ ಮಟ್ಟದಲ್ಲಿ ಸಧೃಡವನ್ನಾಗಿ ಮಾಡಬಲ್ಲದು ಎಂದು ಅಭಿಪ್ರಾಯಪಟ್ಟರು.
ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಸಮಾರಂಭದ್ಲ ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಡಾ. ಮಂಜುನಾಥ ಭಂಡಾರಿ ಮತ್ತು ಕೆ. ಹರೀಶ್ ಕುಮಾರ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಡಾ. ಆನಂದ್ ಕೆ.ಅವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ 2024 ನೇ ವರ್ಷದ ಕ್ಯಾಲೆಂಡರ್ ಅನಾವರಣಗೊಳಿಸಲಾಯಿತು. ಆಶ್ರಮದ ವಿವಿಧ ಚಟುವಟಿಕೆಗಳಲ್ಲಿ ವಿಶೇಷ ಸೇವೆ ಸಲ್ಲಿಸಿದ ಯುವ ಸ್ವಯಂಸೇವಕರನ್ನು ಈ ಸಂದರ್ಭದಲ್ಲಿಗೌರವಿಸಲಾಯಿತು.
ಕಾರ್ಯಕ್ರಮದ ಮೊದಲನೇ ಅವಧಿಯಲ್ಲಿ ಲಂಡನ್ನ ರಾಮಕೃಷ್ಣ ವೇದಾಂತ ಸೆಂಟರ್ನ ಮುಖ್ಯಸ್ಥರಾದ ಸ್ವಾಮಿ ಸರ್ವ ಸ್ಥಾನಂದಜಿ ಅವರು ಸ್ಪೂರ್ತಿಯ ಗಣಿ ಸ್ವಾಮಿ ವಿವೇಕಾನಂದ ಎಂಬ ವಿಷಯದ ಬಗ್ಗೆ ಮಾತನಾಡಿದರು. ಎರಡನೇ ಅವಧಿಯಲ್ಲಿ ಮೋಕ್ಷ್ಯ ಯೌಟ್ಯೂಬ್ಚಾನೆಲ್ನ ಸಂಸ್ಥಾಪಕರಾದ ನಮೃತಾರಾವ್ ಪೊಸೆಟಿವ್ ಕಂಟೆಂಟ್ಸ್ ಫಾರ್ ಇನ್ ಕ್ರೀಡಿಬಲ್ ಭಾರತ್ ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸಿದರು.
‘ಆತ್ಮನಿರ್ಭರ ಭಾರತದಲ್ಲಿ ಯುವಕರ ಪಾತ್ರ’ ಎಂಬ ವಿಷಯದ ಕುರಿತು ಸಂವಾದ ನಡೆಯಿತು. ಈ ಸಂವಾದದಲಿ ಪುನರಪಿ ಇಕೋ ಟೈಲ್ಸ್ ಪ್ರೈವೇಟ್ ಲಿಮಿಟೆಡ್ನ ಸಂಸ್ಥಾಪಕರು ಹಾಗೂ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಡಾ. ಹರಿಣಿ ಸೂರಜ್, ದಿ ವೆಬ್ ಪೀಪಲ್ನ ಸಂಸ್ಥಾಪಕರು ಹಾಗೂ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಆದಿತ್ಯ ಕಲ್ಲೂರಾಯ ಹಾಗೂ ಸ್ವದೇಶಿ ಮಾರ್ಟ್ನ ಸಂಸ್ಥಾಪಕ ಪ್ರಣವ್ ಭಟ್ ಭಾಗವಹಿಸಿದ್ದರು. ಮಂಗಳೂರಿನ ರೇಡಿಯೋ ಸಾರಂಗ್ನ ಆರ್. ಜೆ. ಅಭಿಷೇಕ್ ಶೆಟ್ಟಿ ಸಂವಾದ ಕಾರ್ಯಕ್ರಮವನ್ನು ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳ 600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸ್ವಾಗತಿಸಿ, ಮಂಗಳೂರು ರಾಮಕೃಷ್ಣ ಮಿಷನ್ ಸಂಯೋಜಕರಾದ ರಂಜನ್ ಬೆಳ್ಳರ್ಪ್ಪಾಡಿ ವಂದಿಸಿದರು, ಉಪನ್ಯಾಸಕಿ ರೆಜಿನಾ ದಿನೇಶ್ ಕಾರ್ಯಕ್ರಮ ನಿರೂಪಿಸಿದರು.