Home ಕರ್ನಾಟಕ ಹಂಚಿಕೆಯಾಗದೇ ಬಾಡಿಗೆಯನ್ನೂ ನೀಡದೇ 8 ವರ್ಷ ಸರಕಾರಿ ನಿವಾಸದಲ್ಲಿ ವಾಸವಿದ್ದ ಬಿಜೆಪಿ ಅಭ್ಯರ್ಥಿ!

ಹಂಚಿಕೆಯಾಗದೇ ಬಾಡಿಗೆಯನ್ನೂ ನೀಡದೇ 8 ವರ್ಷ ಸರಕಾರಿ ನಿವಾಸದಲ್ಲಿ ವಾಸವಿದ್ದ ಬಿಜೆಪಿ ಅಭ್ಯರ್ಥಿ!

34
0

ಲೂಧಿಯಾನಾ (ಪಂಜಾಬ್),ಮೇ 12: ಲೂಧಿಯಾನಾ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ರವನೀತ್ ಸಿಂಗ್ ಬಿಟ್ಟು ಕಳೆದ ಎಂಟು ವರ್ಷಗಳಿಂದಲೂ ನಗರದಲ್ಲಿಯ ಸರಕಾರಿ ನಿವಾಸದಲ್ಲಿ ವಾಸವಾಗಿದ್ದಾರೆ. ಅಸಲಿಗೆ ಈ ನಿವಾಸ ಅವರಿಗೆ ಹಂಚಿಕೆಯಾಗಿಯೇ ಇರಲಿಲ್ಲ, ಎಂಟು ವರ್ಷಗಳಿಂದ ಒಂದೇ ಒಂದು ಪೈಸೆ ಬಾಡಿಗೆಯನ್ನೂ ಅವರು ಕಟ್ಟಿಲ್ಲ. ಬಿಟ್ಟು ನಾಮಪತ್ರ ಸಲ್ಲಿಸುವ ಕೆಲವೇ ಗಂಟೆಗಳ ಮುನ್ನ ಗುರುವಾರ ಮಧ್ಯರಾತ್ರಿ ಲೂಧಿಯಾನಾ ಮಹಾನಗರ ಪಾಲಿಕೆ (ಎಲ್‌ಎಂಸಿ)ಯು ಅವರಿಗೆ ವಾಟ್ಸ್ಯಾಪ್ ಮೂಲಕ ನೋಟಿಸ್ ಜಾರಿಗೊಳಿಸಿ ಬಾಕಿಯಿರುವ 1.82 ಕೋಟಿ ರೂ. ಬಾಡಿಗೆಯನ್ನು ಪಾವತಿಸುವಂತೆ ಮತ್ತು ಹಂಚಿಕೆಯೇ ಆಗಿರದಿದ್ದ ನಿವಾಸವನ್ನು ತಕ್ಷಣವೇ ಖಾಲಿ ಮಾಡುವಂತೆ ಸೂಚಿಸಿತ್ತು. ನಾಮಪತ್ರ ಸಲ್ಲಿಸಲು ಕಡ್ಡಾಯವಾಗಿರುವ ‘ಯಾವುದೇ ಬಾಕಿಯಿಲ್ಲ ಪ್ರಮಾಣಪತ್ರ(ಎನ್‌ಡಿಸಿ)’ಯನ್ನು ಪಡೆಯಲು ಬಾಡಿಗೆ ಬಾಕಿಯನ್ನು ಪಾವತಿಸಲೇಬೇಕು ಎಂದು ನೋಟಿಸ್‌ನಲ್ಲಿ ಸ್ಪಷ್ಟವಾಗಿ ತಿಳಿಸಲಾಗಿತ್ತು ಎಂದು indianexpress.com ವರದಿ ಮಾಡಿದೆ.

ಶುಕ್ರವಾರ ಎನ್‌ಡಿಸಿಯನ್ನು ಪಡೆದುಕೊಂಡಿರುವ ಬಿಟ್ಟು, ಹಣವನ್ನು ಕಟ್ಟಲು ತಾನು ಕೋಟ್ಲಾ ಅಫ್ಘಾನಾ ಗ್ರಾಮದಲ್ಲಿಯ ತನ್ನ ಪೂರ್ವಜರ ಜಮೀನಿನ ಒಂದು ಭಾಗವನ್ನು ಅಡವಿಟ್ಟಿದ್ದೇನೆ ಎಂದು ತಿಳಿಸಿದ್ದಾರೆ. ತಾನು ನಾಮಪತ್ರ ಸಲ್ಲಿಸದಂತೆ ಆಡಳಿತಾರೂಢ ಆಪ್ ಪ್ರಯತ್ನಿಸಿತ್ತು ಎಂದು ಅವರು ಆರೋಪಿಸಿದ್ದಾರೆ.

ನಾನು ನಿವಾಸದ ಮಾಸಿಕ ವಿದ್ಯುತ್ ಮತ್ತು ನೀರಿನ ಬಿಲ್‌ಗಳನ್ನು ನಿಯಮಿತವಾಗಿ ಪಾವತಿಸುತ್ತಿದ್ದೆ, ಆದರೆ ಬಾಡಿಗೆ ಬಾಕಿಯುಳಿದಿದ್ದಕ್ಕಾಗಿ ತನಗೆಂದೂ ನೋಟಿಸ್ ನೀಡಲಾಗಿರಲಿಲ್ಲ ಎಂದು ಬಿಟ್ಟು ಪ್ರತಿಪಾದಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಬಿಟ್ಟು 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಇದೇ ಎಲ್‌ಎಂಸಿ ಅವರಿಗೆ ಎನ್‌ಡಿಸಿಯನ್ನು ನೀಡಿತ್ತು. ಚೋದ್ಯವೆಂದರೆ ಬಿಟ್ಟು ಹಂಚಿಕೆಯಾಗದ ನಿವಾಸದಲ್ಲಿ ಅನಧಿಕೃತವಾಗಿ ಉಳಿದುಕೊಂಡು ಬಾಡಿಗೆಯನ್ನು ಪಾವತಿಸದಿದ್ದಾಗಲೂ ಎಲ್‌ಎಂಸಿ ಕಾಲಕಾಲಕ್ಕೆ ನಿವಾಸದ ದುರಸ್ತಿ ಕಾರ್ಯಗಳನ್ನು ನಡೆಸುತ್ತಿತ್ತು!

ಜಿಲ್ಲಾಧಿಕಾರಿಗಳ ಕಚೇರಿ ಮತ್ತು ಲೂಧಿಯಾನಾ ಮಹಾನಗರ ಪಾಲಿಕೆಯಲ್ಲಿ ಲಭ್ಯ ದಾಖಲೆಗಳಂತೆ ಈ ನಿವಾಸವನ್ನು ಎಂದೂ ಸಂಸದ ಬಿಟ್ಟುಗೆ ಹಂಚಿಕೆ ಮಾಡಿರಲಿಲ್ಲ.

2015, ಅ.28ರಂದು ಆಗಿನ ಲೂಧಿಯಾನಾ ಜಿಲ್ಲಾಧಿಕಾರಿಗಳು ಪಂಜಾಬ್ ಸರಕಾರದ ಸಾಮಾನ್ಯ ಆಡಳಿತ ವಿಭಾಗಕ್ಕೆ ಪತ್ರವೊಂದನ್ನು ಬರೆದು, ಬಿಟ್ಟು ಝಡ್ ಪ್ಲಸ್ ಭದ್ರತೆಯನ್ನು ಹೊಂದಿದ್ದಾರೆ, ಸ್ಥಳೀಯ ಸಂಸದರಾಗಿದ್ದಾರೆ. ಅವರು ಕ್ಷೇತ್ರದಲ್ಲಿ ಸಮಯವನ್ನು ಕಳೆಯಬೇಕಾದ ಅಗತ್ಯವಿದೆ ಮತ್ತು ಅವರು ಲೂಧಿಯಾನಾದಲ್ಲಿ ಸ್ವಂತ ಮನೆಯನ್ನು ಹೊಂದಿಲ್ಲ. ಜನರಲ್ ಪೂಲ್‌ನಡಿ ಜಿಲ್ಲಾಧಿಕಾರಿಗಳ ಕಚೇರಿಯು ಬಳಸಲು ಇರಿಸಲಾಗಿರುವ ಸರಕಾರಿ ನಿವಾಸವು ಖಾಲಿಯಿದೆ ಎಂದು ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ ಮತ್ತು ಸದ್ರಿನಿವಾಸವನ್ನು ಬಿಟ್ಟು ಅವರಿಗೆ ಹಂಚಿಕೆ ಮಾಡಬಹುದು ಎಂದು ಶಿಫಾರಸು ಮಾಡಿದ್ದರು. ಆದರೆ 2015,ನ.10ರಂದು ಇಲಾಖೆಯು ಜಿಲ್ಲಾಧಿಕಾರಿಗಳಿಗೆ ಬರೆದಿದ್ದ ಉತ್ತರದಲ್ಲಿ ಈ ಶಿಫಾರಸನ್ನು ತಿರಸ್ಕರಿಸಿತ್ತು ಮತ್ತು ಪಂಜಾಬ್ ಸರಕಾರದ ನಿಯಮಾವಳಿಗಳಡಿ ಸಂಸದರಿಗೆ ನಿವಾಸ ಹಂಚಿಕೆ ಮಾಡಲು ಅವಕಾಶವಿಲ್ಲ ಎಂದು ತಿಳಿಸಿತ್ತು.

2015, ನ.23ರಂದು ಜಿಲ್ಲಾಧಿಕಾರಿಗಳು ಸಾಮಾನ್ಯ ಆಡಳಿತ ವಿಭಾಗಕ್ಕೆ ಇನ್ನೊಂದು ಪತ್ರವನ್ನು ಬರೆದಿದ್ದು, ಬಿಟ್ಟು ಅವರಿಗೆ ಸರಕಾರಿ ನಿವಾಸವನ್ನು ಹಂಚಿಕೆ ಮಾಡುವಂತೆ ಮತ್ತೆ ಶಿಫಾರಸು ಮಾಡಿದ್ದರು. ಆದರೆ ದಾಖಲೆಗಳಂತೆ ಈ ಪತ್ರಕ್ಕೆ ಇಲಾಖೆ ಉತ್ತರಿಸಿರಲಿಲ್ಲ.

ಲೂಧಿಯಾನಾದ ಹಾಲಿ ಜಿಲ್ಲಾಧಿಕಾರಿ ಹೇಳುವಂತೆ, ಅವರ ಕಚೇರಿಯಿಂದ ಬಿಟ್ಟುಗೆ ಎಂದೂ ನಿವಾಸವನ್ನು ಹಂಚಿಕೆ ಮಾಡಿರಲಿಲ್ಲ. ಎಲ್‌ಎಂಸಿಯು ಅದರ ಒಡೆತನವನ್ನು ಹೊಂದಿದ್ದು,ನಿರ್ವಹಣೆಯನ್ನೂ ಅದೇ ಮಾಡುತ್ತಿತ್ತು.

ಆದರೆ,2015,ಡಿ.17ರ ಪತ್ರದಲ್ಲಿ ಸದ್ರಿ ನಿವಾಸವನ್ನು ಜಿಲ್ಲಾಧಿಕಾರಿಗಳ ಕಚೇರಿಯ ಅಧೀನಕ್ಕೆ ಒಪ್ಪಿಸಲಾಗಿತ್ತು ಹಾಗೂ ಬಾಡಿಗೆ/ನೀರು/ವಿದ್ಯುತ್ ಶುಲ್ಕಗಳನ್ನು ಸಂಗ್ರಹಿಸಿ ಅದನ್ನು ಮಹಾನಗರ ಪಾಲಿಕೆಗೆ ಕಳುಹಿಸಬೇಕು ಎಂದು ಸ್ಪಷ್ಟವಾಗಿ ತಿಳಿಸಲಾಗಿತ್ತು ಎಂದು ಎಲ್‌ಎಂಸಿ ಆಯುಕ್ತ ಸಂದೀಪ ರಿಷಿ ತಿಳಿಸಿದರು.

ಹೀಗೆಲ್ಲ ಇದ್ದರೂ ಬಿಟ್ಟು 2016 ಜನವರಿಯಿಂದ ಈ ನಿವಾಸದಲ್ಲಿ ಮೊಕ್ಕಾಂ ಹೂಡಿದ್ದರು. ಅವರಿಗೆ ನಿವಾಸ ಹಂಚಿಕೆ ಮಾಡಿದ್ದನ್ನು ಜಿಲ್ಲಾಧಿಕಾರಿಗಳ ಕಚೇರಿಯು ನಿರಾಕರಿಸಿದೆ.

ಬಿಟ್ಟು ಸರಕಾರಿ ನಿವಾಸದಲ್ಲಿ ಝಂಡಾ ಊರಿದ್ದಾರೆ ಎನ್ನುವುದು ಗೊತ್ತಾದ ಬಳಿಕವೂ ಎಲ್‌ಎಂಸಿ ಯಾವುದೇ ಕ್ರಮವನ್ನು ತೆಗೆದುಕೊಳ್ಳಲು ಅಥವಾ ಬಾಡಿಗೆಯನ್ನು ವಸೂಲು ಮಾಡಲು ವಿಫಲಗೊಂಡಿತ್ತು. ಎಸ್‌ಎಡಿ-ಬಿಜೆಪಿ ಸರಕಾರದ ಅವಧಿಯಲ್ಲಿ 2016ರಲ್ಲಿ ಭದ್ರತೆಯ ಕಾರಣಗಳಿಂದ ಈ ನಿವಾಸವನ್ನು ತನಗೆ ಹಂಚಿಕೆ ಮಾಡಲಾಗಿತ್ತು. ಇಲ್ಲಿದ್ದುಕೊಂಡೇ 2017 ಮತ್ತು 2019ರ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದೆ. ಆದರೆ ತನಗೆಂದಿಗೂ ಬಾಡಿಗೆ ನೋಟಿಸ್ ನೀಡಿರಲಿಲ್ಲ ಎಂದು ಬಿಟ್ಟು ಪ್ರತಿಪಾದಿಸಿದ್ದಾರೆ.

ಆಪ್ ವರಿಷ್ಠ ಅರವಿಂದ ಕೇಜ್ರಿವಾಲ್ ತನ್ನನ್ನು ‘ನಿರ್ವಸಿತ’ನನ್ನಾಗಿ ಮಾಡಿದ್ದಾರೆ ಎಂದು ಆರೋಪಿಸಿರುವ ಬಿಟ್ಟು, ಶುಕ್ರವಾರ ರಾತ್ರಿ ಬಿಜೆಪಿ ಕಚೇರಿಯಲ್ಲಿ ಕಳೆದಿದ್ದರು.

LEAVE A REPLY

Please enter your comment!
Please enter your name here