ರಾಮ ಎಂದರೆ ಹನುಮತ ಹೇಗೋ ಹಾಗೆಯೇ ಬಜರಂಗದಳ ಎಂದರೆ ಬಜರಂಗಬಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಂಗಳವಾರ ಹೇಳಿದ್ದಾರೆ. ಬೆಂಗಳೂರು: ರಾಮ ಎಂದರೆ ಹನುಮತ ಹೇಗೋ ಹಾಗೆಯೇ ಬಜರಂಗದಳ ಎಂದರೆ ಬಜರಂಗಬಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಂಗಳವಾರ ಹೇಳಿದ್ದಾರೆ.
ಹುಬ್ಬಳ್ಳಿಯ ಆಂಜನೇಯ ದೇವಸ್ಥಾನಕ್ಕಿಂದು ಭೇಟಿ ನೀಡಿದ ಮುಖ್ಯಮಂತ್ರಿ ಬೊಮ್ಮಾಯಿಯವರು, ಹನುಮಾನ್ ಚಾಲೀಸಾ ಪಠಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ರಾಜ್ಯ ಜನತೆ ಬಿಜೆಪಿಗೆ ಮತ ಹಾಕಲು ಈಗಾಗಲೇ ನಿರ್ಧರಿಸಿದ್ದಾರೆ. ಮತ್ತೊಮ್ಮೆ ಮನವಿ ಮಾಡಿಕೊಳ್ಳುತ್ತಿದ್ದೇನೆ, ರಾಜ್ಯ ಜನತೆ ಅಭಿವೃದ್ಧಿ, ಪ್ರಗತಿ ಮತ್ತು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಬಲಿಷ್ಠ ರಾಜ್ಯ ಮತ್ತು ದಕ್ಷ ಆಡಳಿತಕ್ಕೆ ಮತ ನೀಡುವಂತೆ ಮನವಿ ಮಾಡಿಕೊಳ್ಳುತ್ತಿದ್ದೇನೆಂದು ಹೇಳಿದರು.
ಇದನ್ನೂ ಓದಿ: ಬಜರಂಗದಳ ಬ್ಯಾನ್: ಹನುಮಾನ್ ಚಾಲೀಸಾ ಪಠಿಸಿ ಕಾಂಗ್ರೆಸ್’ಗೆ ಸಿಎಂ ಬೊಮ್ಮಾಯಿ ತಿರುಗೇಟು
ಇದೇ ವೇಳೆ ಹನುಮಾನ್ ಚಾಲೀಸಾ ಪಠಣೆ ಮಾಡಿರುವ ಕುರಿತು ಪ್ರತಿಕ್ರಿಯೆ ನೀಡಿ, ನಾವು ಹನುಮಂತನನ್ನು ನಂಬುತ್ತೇವೆ. ರಾಮನನ್ನು ನಂಬುತ್ತೇವೆ. ಹನುಮಂತ ಎಂದರೆ ಶಕ್ತಿಯ ಮೂಲ. ಹೀಗಾಗಿ ಹನುಮಂತನಿಗೆ ಪ್ರಾರ್ಥನೆ ಸಲ್ಲಿಸಿದೆ. ಪ್ರತೀನಿತ್ಯ ನಾನು ಹನುಮಂತನ ಪ್ರಾರ್ಥಿಸುತ್ತೇನೆ. ಆದರಿಂದು ಸಾರ್ವಜನಿಕರ ಮುಂದೆ ಪ್ರಾರ್ಥನೆ ಸಲ್ಲಿಸಿದ್ದೇನೆಂದು ತಿಳಿಸಿದರು.
ಬಂಜರಂಗದಳವನ್ನು ಬಿಜೆಪಿ ಬಜರಂಗಬಲಿಗೆ ಏಕೆ ಹೋಲಿಸುತ್ತಿದೆ ಎಂದ ಕಾಂಗ್ರೆಸ್ ಪ್ರಶ್ನೆಗೆ ಉತ್ತರಿಸಿ, ಹನುಮಂತ ಎಂದರೆ ರಾಮ ಹೇಗೋ ಅದೇ ರೀತಿ ಬಜರಂಗದಳ ಎಂದರೆ ಬಜರಂಗಬಲಿಯಾಗಿದೆ ಎಂದರು.
ಭ್ರಷ್ಟಾಚಾರ ಕುರಿತು ಕಾಂಗ್ರೆಸ್ ಮಾಡುತ್ತಿರುವ ಆರೋಪ ಕುರಿತು ಪ್ರತಿಕ್ರಿಯಿಸಿ, ಇದೆಲ್ಲವೂ ಆಧಾರ ರಹಿತ ಆರೋಪಗಳಾಗಿವೆ. ಲೋಕಾಯುಕ್ತ ಈ ಬಗ್ಗೆ ತನಿಖೆ ಮಾಡಲಿ ಎಂದು ಹೇಳಿದರು.