ಬೆಂಗಳೂರು: ಬೆಂಗಳೂರಿನ ಕುಂಬಾರಪೇಟೆಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಹಾರ್ಡ್ವೇರ್ ಗೋದಾಮಿನಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಚಿಕ್ಕಪೇಟೆಯ ಕುಂಬಾರಪೇಟೆ ಬಳಿ ಇರುವ ಹಾರ್ಡ್ವೇರ್ ಗೋಡೌನ್ಗೆ ಬೆಂಕಿ ಹೊತ್ತಿಕೊಂಡಿದ್ದು, ಮೂರು ಅಂತಸ್ತಿನ ಈ ಕಟ್ಟಡದಲ್ಲಿ ಒಟ್ಟು 175 ಅಂಗಡಿ ಮಳಿಗೆಗಳಿದ್ದವು.
ಕೆಳಮಹಡಿಯಲ್ಲಿನ ಹಾರ್ಡ್ವೇರ್ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡು, ಮೇಲಿನ ಅಂತಸ್ತುಗಳಿಗೆ ವ್ಯಾಪಿಸಿದೆ. ಕಟ್ಟಡದಲ್ಲಿ ಪ್ಲಾಸ್ಟಿಕ್, ಫ್ಯಾನ್ಸಿ ಸಾಮಗ್ರಿಗಳು, ಬಟ್ಟೆ ಹಾಗೂ ಸುಡುವಂತಹ ಇತರೆ ವಸ್ತುಗಳಿದ್ದ ಕಾರಣ ಬೆಂಕಿ ವೇಗವಾಗಿ ಹರಡಿದೆ.
ಅಗ್ನಿ ಅವಘಡದ ಪರಿಣಾಮವಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ದಟ್ಟ ಹೊಗೆ ಆವರಿಸಿದ್ದರಿಂದ ಅಕ್ಕಪಕ್ಕದ ನಿವಾಸಿಗಳಲ್ಲಿ ಆತಂಕ ಮೂಡಿದೆ.
ನಾಲ್ಕು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಆದರೆ, ಕುಂಬಾರಪೇಟೆ ಪ್ರದೇಶದ ಕಿರಿದಾದ ರಸ್ತೆಗಳಿಂದಾಗಿ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ತಲುಪಲು ಸವಾಲಾಗಿದೆ.
ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಕಡಿತಗೊಳಿಸಲಾಗಿದೆ. ಈ ಘಟನೆ ಹಲಸೂರು ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.
ನಂದಿಸಲು ಬಂದ ಸಿಬ್ಬಂದಿಗೇ ಹೊತ್ತಿದ ಬೆಂಕಿ!
ಇನ್ನು ಬೆಂಕಿ ನಂದಿಸಲು ಕಟ್ಟಡದೊಳಗೆ ಹೋಗಿದ್ದ ಅಗ್ನಿಶಾಮಕ ಸಿಬ್ಬಂದಿಗಳೂ ಕೂಡ ಬೆಂಕಿಯಲ್ಲಿ ಸಿಲುಕಿದ ಘಟನೆ ನಡೆದಿದೆ.
