ಬೆಂಗಳೂರು: ಹಿಟ್ ಅಂಡ್ ರನ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಾರಿಗೆ ತರಲು ಉದ್ದೇಶಿಸಿರುವ ಕಾಯ್ದೆಯಲ್ಲಿ ಕೆಲವು ಲೋಪ-ದೋಷಗಳನ್ನು ನಿವಾರಣೆ ಮಾಡುವಂತೆ ಆಗ್ರಹಿಸಿ ಜ. 17ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್ ಅಸೋಸಿಯೇಷನ್ ನಿರ್ಧರಿಸಿದೆ.
ಶನಿವಾರ ನಗರದ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಸೋಸಿಯೇಷನ್ನ ಅಧ್ಯಕ್ಷ ಸಿ.ನವೀನ್ ರೆಡ್ಡಿ, ಅಸೋಸಿಯೇಷನ್ನ ಸದಸ್ಯರು ಸಭೆ ನಡೆಸಿ ಮುಷ್ಕರ ನಡೆಸುವ ನಿರ್ಧಾರಕ್ಕೆ ಬರಲಾಗಿದೆ. ಹೊರ ರಾಜ್ಯಗಳಲ್ಲಿ ಅಪಘಾತ ಸಂಭವಿಸಿದಾಗ ಚಾಲಕರ ಡ್ರೈವಿಂಗ್ ಲೈಸೆನ್ಸ್ ಅನ್ನು ವಶಪಡಿಸಿಕೊಳ್ಳಲಾಗುತ್ತದೆ. ಘಟನೆಗೆ ಸಂಬಂಧಿಸಿದಂತೆ ಜಾಮೀನು ನೀಡಲು ಸ್ಥಳೀಯರ ಭದ್ರತೆ ಕೇಳಲಾಗುತ್ತದೆ. ಇದರಿಂದ ಲಾರಿ ಚಾಲಕರಿಗೆ ತೊಂದರೆ ಆಗುತ್ತದೆ. ಆದ್ದರಿಂದ ಕೂಡಲೇ ಪ್ರಸ್ತಾವಿತ ಕಾಯ್ದೆಯಲ್ಲಿ ಇರುವ ಈ ಅಂಶವನ್ನು ತೆಗೆದು ಹಾಕಬೇಕು ಎಂದು ಅವರು ಒತ್ತಾಯಿಸಿದರು.
ಅಪಘಾತ ಸಂಭವಿಸಿದಾಗ ಲಾರಿಗಳನ್ನು ವಶಪಡಿಸಿಕೊಂಡು ಹಿಂತಿರುಗಿಸಲು ಸತಾಯಿಸುವುದು, ವಿನಾ ಕಾರಣ ಸಂಚಾರ ದಟ್ಟಣೆ ನೆಪದಲ್ಲಿ ಲಾರಿಗಳಿಗೆ ದಂಡ ವಿಧಿಸುವುದು ಸೇರಿದಂತೆ ಇನ್ನತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ನವೀನ್ ರೆಡ್ಡಿ ಆಗ್ರಹಿಸಿದರು.
ಹಿಟ್ ಅಂಡ್ ರನ್ ಪ್ರಕರಣಗಳಿಗೆ ಸಂಬಂಧಿಸಿದಂತೆ ತಪ್ಪಿತಸ್ಥ ಚಾಲಕರಿಗೆ 10 ವರ್ಷಗಳವರೆಗೆ ಜೈಲುಶಿಕ್ಷೆ ಸೇರಿದಂತೆ ಅಪಾರ ಮೊತ್ತದ ದಂಡ ಹಾಕುವ ಪ್ರಸ್ತಾವನೆ ಮಾಡಿರುವುದರಿಂದ ದೇಶಾದ್ಯಂತ ಲಾರಿ, ಟ್ರಕ್ ಚಾಲಕರು ಆತಂಕಕ್ಕೆ ಒಳಗಾಗಿದ್ದಾರೆ. ಲಾರಿ ಮಾಲಕರನ್ನಾಗಲೀ ಅಥವಾ ಈ ಉದ್ಯಮದಲ್ಲಿ ಇರುವ ಯಾರನ್ನೂ ಸಂಪರ್ಕಿಸದೇ ಸರಕಾರ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ ಎಂದು ನವೀನ್ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ದೇಶಾದ್ಯಂತ ಲಾರಿ, ಟ್ರಕ್ ಸೇರಿದಂತೆ ಇನ್ನಿತರ ವಾಣಿಜ್ಯ ವಾಹನಗಳಿಗೆ ಚಾಲಕರ ಕೊರತೆ ಪ್ರಮಾಣ ಅಧಿಕವಾಗಿದೆ. ಕೇಂದ್ರ ಸರಕಾರದ ಈ ಕ್ರಮದಿಂದ ಚಾಲಕರು ತಮ್ಮ ವೃತ್ತಿಯನ್ನು ಮುಂದುವರಿಸಲು ಹಿಂದೇಟು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ನವೀನ್ ರೆಡ್ಡಿ ಆತಂಕ ವ್ಯಕ್ತಪಡಿಸಿದರು.
ಲಾರಿ ಉದ್ಯಮ ಮತ್ತು ಚಾಲಕರ ಹಿತದೃಷ್ಟಿಯನ್ನೂ ಗಮನದಲ್ಲಿಟ್ಟುಕೊಂಡು ಪ್ರಸ್ತಾವಿತ ಕಾಯ್ದೆಯಲ್ಲಿ ಇರುವ ಕಠಿಣ ಕಾನೂನುಗಳನ್ನು ಸಡಿಲಗೊಳಿಸಬೇಕು. ತಕ್ಷಣವೇ ಪ್ರಸ್ತಾವಿತ ಕಾನೂನನ್ನು ಪರಿಷ್ಕರಿಸದಿದ್ದರೆ ಜನವರಿ 17 ರಿಂದ ದೇಶಾದ್ಯಂತ ಅನಿರ್ದಿಷ್ಟಾವಧಿವರೆಗೆ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ ಎಂದು ನವೀನ್ ರೆಡ್ಡಿ, ಸರಕಾರಕ್ಕೆ ಗಡುವು ನೀಡಿದರು.
ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್ನ ಉಪಾಧ್ಯಕ್ಷ ಶ್ರೀನಿವಾಸರಾವ್, ಸುರೇಶ್, ಮನ್ಸೂರ್ ಇಬ್ರಾಹಿಂ, ಪ್ರಧಾನ ಕಾರ್ಯದರ್ಶಿ ನಾರಾಯಣ ಪ್ರಸಾದ್ ಸೇರಿ ಹಲವರು ಉಪಸ್ಥಿತರಿದ್ದರು.