ಮಂಗಳೂರು: ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ರ ನಿಧನಕ್ಕೆ ರಾಜ್ಯ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಕರಾವಳಿಯ ಪತ್ರಿಕೋದ್ಯಮದಲ್ಲಿ ಮನೋಹರ್ ಪ್ರಸಾದ್ರ ಸಾಧನೆ ಅದ್ವಿತೀಯ. ಇಲ್ಲಿನ ಅಭಿವೃದ್ಧಿಯ ಬಗ್ಗೆ ಸದಾ ಕಾಳಜಿ ವಹಿಸುತ್ತಿದ್ದರು. ಅದಕ್ಕೆ ಅವರ ವರದಿಗಾರಿಕೆಯೇ ಸಾಕ್ಷಿ ಆಗಿದೆ. ಅವಿಭಜಿತ ದ.ಕ.ಜಿಲ್ಲೆಗೆ ಅವರ ನಿಧನ ತುಂಬಲಾರದ ನಷ್ಟ ಎಂದು ಸ್ಪೀಕರ್ ಸಂತಾಪ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪತ್ರಕರ್ತರಿಗೆ ಸದಾ ಮಾದರಿ ವ್ಯಕ್ತಿಯಾಗಿದ್ದ ಮನೋಹರ್ ಪ್ರಸಾದ್, ವೃತ್ತಿಗೆ ಘನತೆ, ಗೌರವ ತಂದವರು. ಕರಾವಳಿಯ ಮೇರು ವ್ಯಕ್ತಿಯಾಗಿ ಇಲ್ಲಿನ ಪರಿಸರ, ಜಲ, ನೆಲದ ಬಗ್ಗೆ ಕಾಳಜಿ ಹೊಂದಿದ್ದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕಂಬನಿ ಮಿಡಿದಿದ್ದಾರೆ.
*ಕರ್ನಾಟಕ ಜರ್ನಲಿಸ್ಟ್ ಯೂನಿಯನ್ನ ದ.ಕ.ಜಿಲ್ಲಾ ಸಮಿತಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್, ಮದರಂಗಿ ಪತ್ರಿಕೆಯ ಸಂಪಾದಕ ಕೆ.ಎ.ಅಬ್ದುಲ್ ಅಝೀಝ್ ಪುಣಚ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ನ ದ.ಕ.ಜಿಲ್ಲಾ ಕೋಶಾಧಿಕಾರಿ ರಿಯಾಝ್ ಹರೇಕಳ ಸಂತಾಪ ಸೂಚಿಸಿದ್ದಾರೆ.