ಉಡುಪಿ: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ವತಿಯಿಂದ 2024-25ನೇ ಸಾಲಿನಲ್ಲಿ ಉಡುಪಿ ಜಿಲ್ಲೆಗೆ ಒಟ್ಟು 11057.6 ಕೋಟಿ ರೂ. ಸಾಲ ಯೋಜನೆಯ ಗುರಿಯನ್ನು ಹಾಕಿ ಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಬಾರ್ಡ್ ವತಿಯಿಂದ ಹೊರತರಲಾ ಗಿರುವ ‘ಪೊಟೆನ್ಶಿಯಲ್ ಲಿಂಕ್ಡ್ ಕ್ರೆಡಿಟ್ ಪ್ಲಾನ್ 2024-25’ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯ ಗ್ರಾಮೀಣ ಭಾಗದ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸಲು ಹಾಗೂ ಮೂಲ ಸೌಕರ್ಯಗಳನ್ನು ಕಲ್ಪಿಸಲು ರಾಷ್ಟ್ರೀಯ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ವತಿಯಿಂದ 2024-25ನೇ ಸಾಲಿಗೆ 11057.6 ಕೋಟಿ ರೂ. ಸಾಲ ನೀಡಲು ಉದ್ದೇಶಿಸಿದ್ದು, ಇದರಲ್ಲಿ ಶೇ. 48.30ರಷ್ಟನ್ನು ಕೃಷಿ ಚಟುವಟಿಕೆಗಳಿಗೆ ಸಾಲ ನೀಡಲು ಮೀಸಲಿರಿಸಲಾ ಗುವುದು ಎಂದರು.
ಉಳಿದಂತೆ ಸಣ್ಣ, ಮಧ್ಯಮ ಹಾಗೂ ಸೂಕ್ಷ್ಮ ಕೈಗಾರಿಕೆಗಳಿಗೆ ಶೇ.33.30 ರಷ್ಟು, ವಸತಿ ಯೋಜನೆಗೆ ಶೇ.7.35, ಶಿಕ್ಷಣ ಕ್ಷೇತ್ರಕ್ಕೆ ಶೇ. 1.25ರಷ್ಟು, ಆದ್ಯತಾ ವಲಯಕ್ಕೆ ಶೇ. 5.75ರಷ್ಟು, ಸಾಮಾಜಿಕ ಅಭಿವೃದ್ಧಿಗೆ ಶೇ.0.80 ರಷ್ಟು ಹಾಗೂ ರಫ್ತು ಸಾಲ ಶೇ. 2.75ನ್ನು ವಲಯವಾರು ಸಾಲದ ಪ್ರಮಾಣ ಅಂದಾಜು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ನಬಾರ್ಡ್ ಗ್ರಾಮೀಣ ಜನತೆಗೆ ಸಮೃದ್ಧ ಹಾಗೂ ಸುಸ್ಥಿರ ಜೀವನವನ್ನು ನಡೆಸಲು ಅವಕಾಶವನ್ನು ಒದಗಿಸುವ ಮೂಲಕ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ನಬಾರ್ಡ್ ಬ್ಯಾಂಕ್ನ ಸಂಗೀತಾ ಕಾರ್ತ, ಕರ್ನಾಟಕ ಬ್ಯಾಂಕ್ನ ರೀಜನಲ್ ಮ್ಯಾನೇಜರ್ ರಾಜಗೋಪಾಲನ್, ಎಸ್ಬಿಐನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಶೀಬಾ ಸೆಹೆಜಾನ್, ಶೋಭಲತಾ, ರಾಜ್ಗೋಪಾಲ್, ಯೂನಿಯನ್ ಬ್ಯಾಂಕ್ನ ಡಿಆರ್ಎಂ ಶಿವಕುಮಾರ್, ಜಿಲ್ಲಾ ಲೀಡ್ ಬ್ಯಾಂಕ್ ಮೆನೇಜರ್ ಪಿ.ಎಂ. ಪಿಂಜಾರ ಮತ್ತಿತರರು ಉಪಸ್ಥಿತರಿದ್ದರು.