ಪುರಿ: ಹಿಂದೂಗಳ ಪವಿತ್ರ ಧಾರ್ಮಿಕ ಯಾತ್ರಾತಾಣ ಪುರಿ ಜಗನ್ನಾಥ ದೇಗುಲದಲ್ಲಿ ಬರೊಬ್ಬರಿ 48 ವರ್ಷಗಳ ಬಳಿಕ ‘ಭಂಡಾರ ಎಣಿಕೆ’ ಕಾರ್ಯ ನಡೆಯುತ್ತಿದ್ದು ಭಾರತೀಯ ರಿಸರ್ವ್ ಬ್ಯಾಂಕ್ ನ ಅಧಿಕಾರಿಗಳ ಉಪಸ್ಥಿತಿಯಲ್ಲಿ ಈ ಎಣಿಕೆ ಕಾರ್ಯ ನಡೆಯಲಿದೆ.
ಹೌದು.. ಪುರಿಯ ಶ್ರೀ ಜಗನ್ನಾಥ ದೇವಾಲಯದ ಬಹುನಿರೀಕ್ಷಿತ ‘ರತ್ನ ಭಂಡಾರ’ದ ಆಭರಣಗಳ ಎಣಿಕೆ ಮತ್ತು ಪಟ್ಟಿ ಮಾಡುವ ಪ್ರಕ್ರಿಯೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದ್ದು, ಒಡಿಶಾ ಸರ್ಕಾರವು ಇದಕ್ಕಾಗಿ ಮಾರ್ಚ್ 25ರಂದು ಮಧ್ಯಾಹ್ನ 12:12 ರಿಂದ 1:45 ರವರೆಗೆ ಶುಭ ಮುಹೂರ್ತವನ್ನು ನಿಗದಿಪಡಿಸಿದೆ.
ಮೂಲಗಳ ಪ್ರಕಾರ ‘ರತ್ನ ಭಂಡಾರ’ವು ಜಗನ್ನಾಥ, ಬಲಭದ್ರ ಮತ್ತು ದೇವಿ ಸುಭದ್ರೆಯ ಅಮೂಲ್ಯ ಆಭರಣಗಳ ಖಜಾನೆಯಾಗಿದ್ದು, 48 ವರ್ಷಗಳ ಬಳಿಕ ಮೊದಲ ಬಾರಿಗೆ ಇಲ್ಲಿ ಜಗನ್ನಾಥ ದೇಗುಲದ ಚಿನ್ನಾಭರಣಗಳ ಎಣಿಕೆ ಕಾರ್ಯ ನಡೆಯಲಿದೆ.
RBI ಮೇಲ್ವಿಚಾರಣೆ
ಇನ್ನು ಈ ಬಾರಿಯ ಎಣಿಕೆ ಪ್ರಕ್ರಿಯೆಯ ಸಂಪೂರ್ಣ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ಮಾಡಲಾಗುವುದು. ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ಇಬ್ಬರು ಹಿರಿಯ ಅಧಿಕಾರಿಗಳನ್ನು ಮೇಲ್ವಿಚಾರಣೆಗೆ ಕಳುಹಿಸಲು ಒಪ್ಪಿಗೆ ನೀಡಿದೆ. ಇದರೊಂದಿಗೆ ರಾಷ್ಟ್ರೀಕೃತ ಬ್ಯಾಂಕ್ಗಳು ನೋಂದಾಯಿತ ಚಿನ್ನದ ವ್ಯಾಪಾರಿಗಳನ್ನು ಒದಗಿಸಲಾಗುತ್ತದೆ.
ಅಂತೆಯೇ ಮೂರು ಸದಸ್ಯರ ಸಮಿತಿಯು ಇಡೀ ಪ್ರಕ್ರಿಯೆಯ ಮೇಲೆ ನಿಗಾ ಇಡಲಿದೆ. ಚಿನ್ನ, ಬೆಳ್ಳಿ ಮತ್ತು ಇತರ ಅಮೂಲ್ಯ ವಸ್ತುಗಳಿಗಾಗಿ ಪ್ರತ್ಯೇಕ ಪೆಟ್ಟಿಗೆಗಳನ್ನು ಬಳಸಲಾಗುತ್ತದೆ. ಮ್ಯಾಜಿಸ್ಟ್ರೇಟ್ ಪ್ರತಿ ದಿನವೂ ಖಜಾನೆಯಿಂದ ಕೀಲಿಯನ್ನು ತರಬೇಕು ಮತ್ತು ಕೆಲಸ ಮುಗಿದ ನಂತರ ಅಂದೇ ವಾಪಸ್ ಜಮಾ ಮಾಡಬೇಕು ಎನ್ನುವ ನಿಯಮ ರೂಪಿಸಲಾಗಿದೆ.
ಈ ಬಗ್ಗೆ ಮುಖ್ಯ ಆಡಳಿತಾಧಿಕಾರಿ ಅರವಿಂದ್ ಪಾದಿ ಮಾತನಾಡಿ, “ಆಭರಣಗಳಲ್ಲಿರುವ ಅಮೂಲ್ಯ ರತ್ನಗಳನ್ನು ಗುರುತಿಸಲು ರಾಜ್ಯ ಸರ್ಕಾರವು ಇಬ್ಬರು ರತ್ನಶಾಸ್ತ್ರಜ್ಞರನ್ನು (Gemologists) ನಿಯೋಜಿಸಲಿದೆ” ಎಂದು ತಿಳಿಸಿದ್ದಾರೆ.
Puri, Odisha: Temple chief Arabinda Padhi says, “The inventorization of the Ratna Bhandar of Sri Jagannath Temple is going to start very soon. The state government has approved an SOP, the Standard Operating Procedure, for a detailed process for this very sensitive divine work.… pic.twitter.com/GpZDQknv0f
— IANS (@ians_india) February 24, 2026
ಬರೊಬ್ಬರಿ 72 ದಿನ ನಡೆದಿದ್ದ ಎಣಿಕೆ ಕಾರ್ಯ
1978ರಲ್ಲಿ ನಡೆದ ಎಣಿಕೆಯ ಪ್ರಕಾರ, ಇಲ್ಲಿ 128.38 ಕೆಜಿ ಚಿನ್ನ ಮತ್ತು 221.53 ಕೆಜಿ ಬೆಳ್ಳಿಯ ಆಭರಣಗಳಿವೆ. ಅಂದು ಈ ಎಣಿಕೆ ಕಾರ್ಯ ಬರೊಬ್ಬರಿ 72 ದಿನಗಳ ಕಾಲ ನಡೆದಿತ್ತು.
ಇತಿಹಾಸದಲ್ಲಿ ಭಂಡಾರ ಎಣಿಕೆ ಕಾರ್ಯ
ಇನ್ನು ಜಗನ್ನಾಥ ದೇಗುಲ ಇತಿಹಾಸದಲ್ಲಿ ಒಟ್ಟು ಐದು ಬಾರಿ ಭಂಡಾರ ತೆರೆದ ಉದಾಹರಣೆಗಳು ದಾಖಲಾಗಿವೆ. ಈ ಹಿಂದೆ 1905ರಲ್ಲಿ ಭಂಡಾರ ತೆರೆಯಲಾಗಿತ್ತು. ಬಳಿಕ 1926, 1978 ಮತ್ತು 1985ರಲ್ಲಿ ಭಂಡಾರ ತೆರೆಯಲಾಗಿತ್ತು.
2018ರಲ್ಲಿ ಒಡಿಶಾ ವಿಧಾನಸಭೆಯಲ್ಲಿ ಈ ಬಗ್ಗೆ ಉಲ್ಲೇಖವಾಗಿ ಜಗನ್ನಾಥ ದೇಗುಲದ ಭಂಡಾರದಲ್ಲಿ 12,831 ಭಾರಿ (ಒಂದು ಭಾರಿ ಎಂದರೆ 11.66 ಗ್ರಾಂ) ಚಿನ್ನಾಭರಣಗಳು, 22,153 ಭಾರಿ ಬೆಳ್ಳಿ ವಸ್ತುಗಳಿದ್ದವು ಎಂದು ಸರ್ಕಾರ ಸಭೆಗೆ ಮಾಹಿತಿ ನೀಡಿತ್ತು. ಬಳಿಕ 2024ರಲ್ಲಿ ಈ ಭಂಡಾರದ ಕೀಗಳು ನಾಪತ್ತೆಯಾದ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು.
