ಕೊಚ್ಚಿ: ಇನ್ನೂ ಸರಿಯಾಗಿ ಅಂಬೆಗಾಲು ಇಡದ 10 ತಿಂಗಳ ಕಂದಮ್ಮ ಇದೀಗ ದೇಶದ ಅತಿ ಕಿರಿಯ ಅಂಗಾಂಗ ದಾನಿ ಎನಿಸಿಕೊಂಡಿದೆ. ಇತ್ತೀಚೆಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಿದುಳು ನಿಷ್ಕ್ರಿಯಗೊಂಡಿದ್ದ ಮಗುವಿನ ಅಂಗಾಂಗಗಳನ್ನು ಆಕೆಯ ಪೋಷರು ದಾನ ಮಾಡಿ ಮಾದರಿ ಎನಿಸಿಕೊಂಡಿದ್ದಾರೆ.
ಫೆಬ್ರುವರಿ 5 ರಂದು ಅಲಿನ್ ತನ್ನ ತಂದೆ ಪಟ್ಟಣಂತಿಟ್ಟು ಜಿಲ್ಲೆಯ ಮಲ್ಲಪಳ್ಳಿಯ ಅರುಣ್ ಅಬ್ರಾಹಂ, ಅಮ್ಮ ಶೆರಿನ್ ಹಾಗೂ ಅಜ್ಜ, ಅಜ್ಜಿ ಜೊತೆ ಕಾರಿನಲ್ಲಿ ಕೊಟ್ಟಾಯಂನಿಂದ ತಿರುವಲ್ಲಕ್ಕೆ ತೆರಳುತ್ತಿದ್ದಳು. ಅಂದು ಮಧ್ಯಾಹ್ನ 2.30ಕ್ಕೆ ಅರುಣ್ ಚಲಾಯಿಸುತ್ತಿದ್ದ ಕಾರು ಕೊಟ್ಟಾಯಂನ ಪಲ್ಲಂ ಬಳಿ ಇನ್ನೊಂದು ಕಾರಿಗೆ ಮುಖಾಮುಖಿ ಡಿಕ್ಕಿಯಾಗಿತ್ತು.
ಅಪಘಾತದಲ್ಲಿ ಅಲಿನ್ಗೆ ಗಂಭೀರ ಗಾಯವಾಗಿತ್ತು. ಆಕೆಯ ಪೋಷಕರು, ಅಜ್ಜ, ಅಜ್ಜಿ ಸಣ್ಣಪುಟ್ಟ ಗಾಯದಿಂದ ಬದುಕುಳಿದರು. ತಕ್ಷಣವೇ ಅಲಿನ್ಳನ್ನು ತಿರುವಲ್ಲದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಮಿದುಳಿಗೆ ಹಾನಿಯಾಗಿದೆ ಎಂದು ವೈದ್ಯರು ಹೇಳಿದ್ದರಿಂದ ಕೊಚ್ಚಿಯ ಅಮೃತಾ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿತ್ತು. ವೈದ್ಯರ, ಪೋಷಕರ ಸತತ ಪ್ರಯತ್ನದಿಂದಲೂ ಅಲಿನ್ ಬದುಕುಳಿಯಲಿಲ್ಲ. ಫೆಬ್ರುವರಿ 10 ರಂದು ಅಲಿನ್ ನಿಧನಳಾದಳು ಎಂದು ಅಮೃತಾ ಆಸ್ಪತ್ರೆಯ ವೈದ್ಯರು ಘೋಷಿಸಿದರು.
ಕುಟುಂಬದ ಅಸಾಧಾರಣ ನಿರ್ಧಾರಕ್ಕೆ ಆರೋಗ್ಯ ಸಚಿವೆ ವೀಣಾ ಜಾರ್ಜ್ ಗೌರವ ಸಲ್ಲಿಸಿದರು. “ಅವರ ನಿಧನ ನಮಗೆ ತುಂಬಾ ದುಃಖ ತಂದಿದೆ. ಆದರೆ ಇತರರ ಜೀವಗಳನ್ನು ಉಳಿಸುವ ನಿರ್ಧಾರಕ್ಕಾಗಿ ಪೋಷಕರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಕುಟುಂಬದ ದುಃಖದಲ್ಲಿ ನಾನು ಭಾಗಿಯಾಗಿದ್ದಾರೆ” ಎಂದು ಅವರು ಫೇಸ್ಬುಕ್ನಲ್ಲಿ ಬರೆದಿದ್ದಾರೆ.
