ದೆಹಲಿ: ಕೇಂದ್ರ ಚುನಾವಣಾ ಆಯೋಗ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ಸೋಮವಾರ ಘೋಷಿಸಿದ್ದು, ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಮಿಜೋರಾಂ ಹಾಗೂ ಛತ್ತೀಸ್ಘಡದಲ್ಲಿ ಚುನಾವಣೆ ನಡೆಯುತ್ತಿದ್ದು, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಚುನಾವಣಾ ಆಯೋಗ ಸಕಲ ಸಿದ್ಧತೆ ನಡೆಸಿದೆ.
ಪ್ರಮುಖವಾಗಿ ಚುನಾವಣಾ ಆಯೋಗ ಸಿವಿಜಿಲ್ (C-Vigil) ಆಪ್ ಬಳಸುವಂತೆ ಜನರಿಗೆ ಕರೆ ನೀಡಿದೆ. ಮುಕ್ತ ಮತ್ತು ನ್ಯಾಯಸಮ್ಮತ ಹಾಗೂ ಪ್ರಚೋದನೆ ಮುಕ್ತ ಚುನಾವಣೆಗಳನ್ನು ನಡೆಸಲು ಜನರ ಸಹಕಾರ ಕೂಡ ಅಗತ್ಯವಿದೆ. ನಾಗರಿಕರು ಜಾಗೃತರಾಗಬೇಕು ಎಂದು ಆಯೋಗ ಹೇಳಿದೆ. ಸಿವಿಜಿಲ್ ಆಪ್ ಮೂಲಕ ಜನರು ಯಾವುದೇ ರೀತಿಯ ಚುನಾವಣಾ ಅವ್ಯವಹಾರಗಳನ್ನು ವರದಿ ಮಾಡಬಹುದು. ಜನರು ನೀಡುವ ಪ್ರತಿ ದೂರಿಗೂ 100 ನಿಮಿಷಗಳ ಒಳಗೆ ಆಯೋಗ ಕ್ರಮ ಕೈಗೊಳ್ಳುತ್ತದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮಾಹಿತಿ ನೀಡಿದ್ದಾರೆ.
ಸಿವಿಜಿಲ್ ಆಪ್ನಲ್ಲಿ ದೂರು ಕೊಡುವಾಗ ಜನರು ತಮ್ಮ ಹೆಸರನ್ನು ಬಹಿರಂಗಗೊಳಿಸಬಹುದು ಅಥವಾ ಅನಾಮಧೇಯವಾಗಿಯೂ ಇಡಬಹುದಾಗಿದೆ. ಇನ್ನು, ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆ ಸೇರಿ ಎಲ್ಲ ಮಾಹಿತಿಯನ್ನು ಕೆವೈಸಿ ಆಪ್ ಹಾಗೂ ಚುನಾವಣಾ ಆಯೋಗದ ಅಫಿಡವಿಟ್ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುತ್ತದೆ. ಜನರು ಈ ಮಾಹಿತಿಯನ್ನು ನೋಡಿ ಸರಿಯಾದ ಅಭ್ಯರ್ಥಿಗೆ ಮತ ಚಲಾಯಿಸಬಹುದಾಗಿದೆ ಎಂದು ಮಖ್ಯ ಚುನಾವಣಾ ಆಯುಕ್ತರು ತಿಳಿಸಿದ್ದಾರೆ.
ಪಕ್ಷಗಳು ತಮ್ಮ ಹಣಕಾಸಿನ ವರದಿಗಳನ್ನು ಬಹಿರಂಗಪಡಿಸಲು ಅನುಕೂಲವಾಗುವಂತೆ ಸಮಗ್ರ ಚುನಾವಣಾ ವೆಚ್ಚ ನಿರ್ವಹಣಾ ವ್ಯವಸ್ಥೆಯನ್ನು ಚುನಾವಣಾ ಆಯೋಗ ಪರಿಚಯಿಸಿದೆ. ವರದಿ ಸಲ್ಲಿಸುವಲ್ಲಿ ವಿಳಂಬ ಹಾಗೂ ಹಣಕಾಸಿನ ದುರುಪಯೋಗದ ಬಗ್ಗೆಯೂ ನಿಗಾ ವಹಿಸಲಾಗುವುದು. ಕೆಲವು ಪಕ್ಷಗಳು ಈಗಾಗಲೇ ತಮ್ಮ ವರದಿಗಳನ್ನು ಆನ್ಲೈನ್ನಲ್ಲಿ ಸಲ್ಲಿಸಲು ಪ್ರಾರಂಭಿಸಿವೆ ಎಂದು ಸಿಇಸಿ ರಾಜೀವ್ ಕುಮಾರ್ ಹೇಳಿದ್ದಾರೆ.
The post 5 State Election: ಪಂಚ ರಾಜ್ಯ ಚುನಾವಣೆಗೆ ಆಯೋಗ ಸಕಲ ಸಿದ್ಧತೆ: cVIGIL ಆಪ್ ಬಳಸಲು ಜನರಿಗೆ ಕರೆ! appeared first on Ain Live News.