ಮಡಿಕೇರಿ: ಮಡಿಕೇರಿ ನಗರದ ರೈಫಲ್ ರೇಂಜ್ ಪ್ರದೇಶದಲ್ಲಿರುವ ಪೊಲೀಸ್ ವಸತಿಗೃಹದಲ್ಲಿ ಒಟ್ಟು 9 ಮನೆಗಳಿಗೆ ಕಳ್ಳರು ದಾಳಿ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಆರೋಪಿಗಳು ಮನೆಯ ಬೀಗ ಮುರಿದು ನಗದು ಮತ್ತು ಬಂಗಾರ ಕದ್ದೊಯ್ಯಿದ್ದು, ಪ್ರಕರಣ ಮಡಿಕೇರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಬಹುತೇಕ ಮನೆಯವರು ಡ್ಯೂಟಿಗಾಗಿ ಬೇರೆ ನಗರಗಳಿಗೆ ಹೋಗಿದ್ದ ಕಾರಣ, ಮನೆಯು ಲಾಕ್ನಲ್ಲಿದ್ದವು. ಈ ದುರ್ಘಟನೆಯು ಬುಧವಾರ ರಾತ್ರಿ ನಡೆದಿದೆ. ಕಳ್ಳರು ₹95,000 ನಗದು ಮತ್ತು 3 ಗ್ರಾಂ ಬಂಗಾರವನ್ನು ಕದ್ದಿದ್ದಾರೆ. ಇತರೆ ಮನೆಯಲ್ಲೂ ನಗದು, ಬೆಳ್ಳಿ ಪಾತ್ರೆಗಳು, ಚಿನ್ನಾಭರಣಗಳು ಕಳೆದು ಹೋಗಿರುವ ಶಂಕೆ ವ್ಯಕ್ತವಾಗಿದೆ.


ಈ ವಸತಿಗೃಹದಲ್ಲಿ ಸರಿಯಾದ ಬೀದಿ ದೀಪಗಳಿಲ್ಲ, ಸಿಸಿಟಿವಿ ಕ್ಯಾಮೆರಾಗಳಿಲ್ಲ ಹಾಗೂ ಭದ್ರತಾ ಸಿಬ್ಬಂದಿಯಿಲ್ಲ ಎಂಬುದು ಈ ಕೃತ್ಯಕ್ಕೆ ಅನುಕೂಲವಾಗಿದೆ. ಕಳ್ಳರು ಲೇಕ್ ಭಾಗದಿಂದ ಒಳನುಗ್ಗಿರುವ ಶಂಕೆ ಇದೆ.
ಸ್ಥಳೀಯ ನಿವಾಸಿಗಳು, “ನಗರದ ಭದ್ರತೆಗೆ ಹೊಣೆಗಾರರಾದ ಪೊಲೀಸರ ಮನೆಯಲ್ಲೇ ಈ ರೀತಿ ಕಳ್ಳತನವಾಗುತ್ತಿದೆ ಎಂದಾದರೆ, ಜನಸಾಮಾನ್ಯರ ಪರಿಸ್ಥಿತಿ ಹೇಗಿರಬಹುದು?” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರು ತಕ್ಷಣದ ಭದ್ರತಾ ಕ್ರಮಗಳನ್ನು ಕೈಗೊಳ್ಳುವಂತೆ – ಸಿಸಿಟಿವಿ ಅಳವಡಿಕೆ, ಬೀದಿ ದೀಪ ವ್ಯವಸ್ಥೆ, ಶೌಚಾಲಯಗಳ ದುರಸ್ತಿ – ಆಗ್ರಹಿಸಿದ್ದಾರೆ.

ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಲು ತನಿಖೆ ಆರಂಭಿಸಿದ್ದಾರೆ.