ನವಲಗುಂದ/ಧಾರವಾಡ:
ಪ್ರಧಾನಿ ನರೇಂದ್ರ ಮೋದಿ ವಿಷ ಸರ್ಪವಿದ್ದಂತೆ ಎಂಬ ಎಐಸಿಸಿ ಅಧ್ಯಕ್ಷ ಎಂ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದರು.
ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮೋದಿ ಅವರನ್ನು ವಿಶ್ವದಾದ್ಯಂತ ಅತ್ಯಂತ ಗೌರವದಿಂದ ಸ್ವಾಗತಿಸಲಾಗುತ್ತದೆ. ಎಷ್ಟೇ ನಿಂದಿಸಿದ್ದರೂ ಪ್ರಧಾನಿ ಅವರ ಬೆಂಬಲ ಹೆಚ್ಚಾಗುತ್ತಿರುವುದರಿಂದ ಕಾಂಗ್ರೆಸ್ ಇಂತಹ ಹೇಳಿಕೆಗಳಿಂದ ಜನರನ್ನು ಪ್ರಚೋದಿಸಲು ಸಾಧ್ಯವಿಲ್ಲ ಎಂದರು.
ಕಾಂಗ್ರೆಸ್ಗೆ ವಿಚಾರಗಳ ಕೊರತೆಯಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ವಿಶ್ವದಾದ್ಯಂತ ಭಾರತದ ಹೆಮ್ಮೆಯನ್ನು ಹೆಚ್ಚಿಸಿ ದೇಶವನ್ನು ಸಮೃದ್ಧಗೊಳಿಸಲು ಶ್ರಮಿಸಿದ್ದಾರೆ. ದೇಶದ ಮೂಲಸೌಕರ್ಯವನ್ನು ಬಲಪಡಿಸಿದ್ದಾರೆ. ಗಡಿಗಳನ್ನು ಸುರಕ್ಷಿತವಾಗಿ ಮಾಡಿದ್ದಾರೆ. ಮೋದಿಜಿ ಪ್ರಪಂಚದಾದ್ಯಂತ ಎಲ್ಲಿಗೆ ಹೋದರೂ ಜನರು ‘ಮೋದಿ-ಮೋದಿ’ ಘೋಷಣೆಗಳೊಂದಿಗೆ ಸ್ವಾಗತಿಸುತ್ತಾರೆ ಎಂದು ಶಾ ಹೇಳಿದರು.
ಪ್ರಧಾನಿ ಮೋದಿ ಅವರನ್ನು ಇಡೀ ವಿಶ್ವವೇ ಕೊಂಡಾಡುತ್ತಿದೆ. ಜನತೆಗೆ ಅವರ ಮೇಲೆ ಅಪಾರ ನಂಬಿಕೆಯಿದೆ. ಆದರೆ ಮೋದಿಯವರನ್ನು ಕಾಂಗ್ರೆಸ್ಸಿಗರು ಪದೇ ಪದೇ ಕೆಟ್ಟ ಪದಗಳಿಂದ ನಿಂದಿಸುತ್ತಾ, ಕೆಲವೊಮ್ಮೆ ʻಸಾವಿನ ವ್ಯಾಪಾರಿʼ ಎಂದರೆೆ, ಕೆಲವೊಮ್ಮೆ ʻವಿಷ ಸರ್ಪʼ ಎಂದು ಜರೆಯುತ್ತಾರೆ.
— Amit Shah (@AmitShah) April 28, 2023
ಜನರೇ ಕಾಂಗ್ರೆಸ್ಸಿಗರ ಈ ನಿಂದನೆಗಳಿಗೆ ಉತ್ತರ ನೀಡಲಿದ್ದಾರೆ. pic.twitter.com/YXhuZTws9a
ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಬಹುದೇ ಎಂದು ಖರ್ಗೆ ಅವರನ್ನು ಕೇಳಲು ಬಯುತ್ತೇನೆ. ಇದೇ ರೀತಿಯ ಹೇಳಿಕೆ ನೀಡುವ ಕಾಂಗ್ರೆಸ್ ನಾಯಕರು ಬುದ್ದಿ ಸ್ಥಿಮಿತತೆ ಕಳೆದುಕೊಂಡಿದ್ದಾರೆ. ಮೋದಿಯನ್ನು ಎಷ್ಟು ನಿಂದಿಸಿದರೂ ಕಮಲ ಅರಳುತ್ತದೆ.ಮೋದಿಯನ್ನು ನಿಂದಿಸುವ ಮೂಲಕ ಕಾಂಗ್ರೆಸ್ ಕರ್ನಾಟಕದ ಜನರನ್ನು ಪ್ರಚೋದಿಸಲು ಸಾಧ್ಯವಿಲ್ಲ ,ನೀವು ಮೋದಿಯನ್ನು ನಿಂದಿಸಿದರೆ ಅವರಿಗೆ ಬೆಂಬಲ ಹೆಚ್ಚಾಗುತ್ತದೆ ಎಂದು ಶಾ ಹೇಳಿದರು.
ಭಾರತದ ಪ್ರಧಾನ ಮಂತ್ರಿಗಳಲ್ಲಿ, ಚಹಾ ಮಾರುವವನ ಮಗನಾಗಿ ಬಡ ಕುಟುಂಬದಲ್ಲಿ ಜನಿಸಿದ ಏಕೈಕ ಪ್ರಧಾನಿ ಮೋದಿ. ಇಂದು ಅವರು ಉನ್ನತ ಹುದ್ದೆ ಅಲಂಕರಿಸಿದ ನಂತರ ಕೋಟ್ಯಂತರ ಬಡವರ ಅಭ್ಯುದಯಕ್ಕಾಗಿ ಶ್ರಮಿಸುತ್ತಿದ್ದಾರೆ. ಕಾಂಗ್ರೆಸ್ ಯಾವಾಗಲೂ ಬಡತನ ತೊಡೆದುಹಾಕುವ ಬಗ್ಗೆ ಮಾತನಾಡುತ್ತದೆ, ಆದರೆ ಬಡವರಿಗಾಗಿ ಏನನ್ನೂ ಮಾಡಲಿಲ್ಲ ಎಂದು ಅಮಿತ್ ಶಾ ವಾಕ್ ಪ್ರಹಾರ ನಡೆಸಿದರು.