ಆನೇಕಲ್ : ವಿದ್ಯುತ್ ಸ್ಪರ್ಶಿಸಿ 12 ವರ್ಷದ ಬಾಲಕಿಮೃತಪಟ್ಟಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ನಾರಾಯಣಘಟ್ಟ ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ಆನೇಕಲ್ ನ ನಾರಾಯಣಘಟ್ಟ ಮೂಲದ ತನಿಷ್ಕ ಎಂದು ಗುರುತಿಸಲಾಗಿದೆ.
ಮನೆ ಮುಂದೆ ಇರುವ ವಿದ್ಯುತ್ ಕಂಬದ ಬಳಿ ಚೆಂಡಿನಲ್ಲಿ ಆಟವಾಡುತ್ತಿದ್ದಾಗ ಚೆಂಡು ವಿದ್ಯುತ್ ಕಂಬದ ಬಳಿ ಹೋಗಿದೆ. ಆಗ ಬಾಲಕಿ ಚೆಂಡು ತೆಗೆಯುವ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶವಾಗಿದೆ. ವಿದ್ಯುತ್ ಸ್ಪರ್ಶದಿಂದ ಗಾಯಗೊಂಡಿದ್ದ ತನಿಷ್ಕಾಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಬಾಲಕಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ ಎನ್ನಲಾಗಿದೆ.
ಘಟನೆ ತಿಳಿಯುತ್ತಿದಂತೆ ಪಂಚಾಯತ್ ಅಧಿಕಾರಿಗಳು ಅಳವಡಿಸಿದ್ದ ವಿದ್ಯುತ್ ಕಂಬವನ್ನು ತೆಗೆದು ಹಾಕಿದ್ದಾರೆ. ಇಷ್ಟೆಲ್ಲ ಆದರೂ ಬೆಸ್ಕಾಂ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಬೆಸ್ಕಾಂ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾಗಿದ್ದಾರೆ.