ಬೆಂಗಳೂರು : ಭಾರತೀಯ ವಕೀಲ ಪರಿಷತ್ ಸದಸ್ಯರಾಗಿರುವ ವಕೀಲ ವೈ.ಆರ್.ಸದಾಶಿವರೆಡ್ಡಿ ಮೇಲಿನ ಮಾರಣಾಂತಿಕ ಹಲ್ಲೆ ನಡೆಸಿರುವ ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದು ಬೆಂಗಳೂರಿನ ವಕೀಲರು ಧರಣಿ ನಡೆಸಿ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.
ಸೋಮವಾರ ಸಿಟಿ ಸಿವಿಲ್ ಕೋರ್ಟ್ ಆವರಣ ಹಾಗೂ ಹೈಕೋರ್ಟ್ ಆವರಣದಲ್ಲಿ ಬೆಂಗಳೂರು ವಕೀಲರ ಸಂಘದ ನೇತೃತ್ವದಲ್ಲಿ ಜಮಾಯಿಸಿದ ವಕೀಲರು, ಈಗಾಗಲೇ ವಕೀಲರ ರಕ್ಷಣೆಗಾಗಿ ಕಾಯ್ದೆ ಜಾರಿಯಾಗಿದ್ದರೂ, ದುಷ್ಕರ್ಮಿಗಳು ಯಾವುದೇ ಕಾನೂನಿನ ಭಯ ಇಲ್ಲದೇ ಕೃತ್ಯ ಎಸಗಿದ್ದಾರೆ. ಗೃಹ ಇಲಾಖೆ ಈಗಲಾದರೂ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಎ.15ರಂದು ವೈ.ಆರ್.ಸದಾಶಿವರೆಡ್ಡಿ ಅವರ ಕಚೇರಿಗೆ ನುಗ್ಗಿದ ದುಷ್ಕರ್ಮಿಗಳು ಏಕಾಏಕಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈಗಾಗಲೇ ವಕೀಲರ ರಕ್ಷಣೆಗಾಗಿ ಕಾಯ್ದೆ ಜಾರಿಯಾಗಿದ್ದರೂ, ದುಷ್ಕರ್ಮಿಗಳು ಯಾವುದೇ ಕಾನೂನಿನ ಭಯ ಇಲ್ಲದೇ ಕೃತ್ಯ ಎಸಗಿದ್ದಾರೆ. ಹೀಗಾಗಿ ಪೊಲೀಸರು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ವಕೀಲರ ಸಮುದಾಯದಲ್ಲಿ ಆತಂಕ ಸೃಷ್ಟಿಯಾಗಿದೆ. ಇಂತಹ ಘಟನೆ ಮರುಕಳಿಸದಂತೆ ಗೃಹ ಇಲಾಖೆ ಎಚ್ಚರಿಕೆ ವಹಿಸಬೇಕು.
ಅಲ್ಲದೆ, ವಕೀಲರಿಗೆ ರಕ್ಷಣೆ ಇಲ್ಲವಾದರೆ ಜನ ಸಾಮಾನ್ಯರ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದ ಪ್ರತಿಭಟನಾ ನಿರತ ನ್ಯಾಯವಾದಿಗಳು, ವಕೀಲರ ರಕ್ಷಣೆಗೆ ರೂಪಿಸಿರುವ ಕಾನೂನನ್ನು ಇನ್ನಷ್ಟು ಕಠಿಣವಾಗಿಸಬೇಕು. ವಕೀಲರಿಗೆ ಕರ್ತವ್ಯದ ವೇಳೆ ಸೂಕ್ತ ರಕ್ಷಣೆ ಸಿಗುವಂತಾಗಬೇಕು ಎಂದು ಆಗ್ರಹಿಸಿದರು.